ಶನಿವಾರಸಂತೆ, ಮಾ. 19: ಬಟ್ಟೆ ಒಗೆಯಲು ಕಲ್ಲುಕೋರೆಗೆ ತೆರಳಿದ್ದ ಮಹಿಳೆಯೊಬ್ಬರು ಆಕಸ್ಮಿಕ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ದೊಡ್ಡಕೊಡ್ಲಿ ಗ್ರಾಮದ ಕಲ್ಲುಕೋರೆಯಲ್ಲಿ ಯುಗಾದಿ ಹಬ್ಬದಂದು ನಡೆದಿದೆ.ಜ್ಯೋತಿ (40) ಸಾವನ್ನಪ್ಪಿದ ಮಹಿಳೆ. 20 ವರ್ಷದ ಹಿಂದೆ ಬೇಲೂರಿನ ಅಣ್ಣಪ್ಪ ಅವರನ್ನು ವಿವಾಹವಾಗಿದ್ದು, ಈ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. 10 ವರ್ಷಗಳ ಹಿಂದೆ ಮಗಳು ಜ್ಯೋತಿ, ಅಳಿಯ ಅಣ್ಣಪ್ಪ ಹಾಗೂ ಮೂವರು ಮಕ್ಕಳನ್ನು ಜ್ಯೋತಿಯ ತಾಯಿ ದೇವಮ್ಮ ದೊಡ್ಡಕೊಡ್ಲಿಗೆ ಕರೆತಂದು ಪ್ರತ್ಯೇಕವಾಗಿ ಮನೆ ಮಾಡಿಕೊಟ್ಟಿದ್ದರು.ಯುಗಾದಿ ಹಬ್ಬದ ದಿನ ಬೆಳಿಗ್ಗೆ ಬಟ್ಟೆ ತೊಳೆದು ಬಂದು ಹಬ್ಬ ಮಾಡುವದಾಗಿ ಹೇಳಿ ಕಲ್ಲುಕೋರೆಗೆ ಹೋದ ಜ್ಯೋತಿ ಬಹಳ ಹೊತ್ತಾದರೂ ಮನೆಗೆ ಹಿಂದಿರುಗಿರಲಿಲ್ಲ. ನಂತರ ಹತ್ತಿರದ ಮನೆಯವರು ಬಂದು ಕಲ್ಲುಕೋರೆಯಲ್ಲಿ ಜ್ಯೋತಿಯ ಮೃತದೇಹ ತೇಲುತ್ತಿರುವದಾಗಿ ಹೇಳಿದರೆಂದು ಜ್ಯೋತಿಯ ತಾಯಿ ದೇವಮ್ಮ ಅವರಿಗೆ ತಿಳಿಸಿರುತ್ತಾರೆ. ದೇವಮ್ಮ ನೀಡಿದ ದೂರಿನ ಅನ್ವಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಶಿವಲಿಂಗಯ್ಯ ಪ್ರಕರಣ ದಾಖಲಿಸಿರುತ್ತಾರೆ.