ಮಡಿಕೇರಿ, ಮಾ. 2: ಇಂದು ಬಿ.ಜೆ.ಪಿ ಹಾಗೂ ಪರಿವಾರದ ವತಿಯಿಂದ “ಮಂಗಳೂರು ಚಲೋ” “ಜನ ಸುರಕ್ಷಾ ಯಾತ್ರೆ”ಯು ಕುಶಾಲನಗರ ಹಾಗೂ ಅಂಕೋಲದಿಂದ ಆರಂಭವಾಗಲಿದೆ. ಬೆಳಿಗ್ಗೆ 10 ಗಂಟೆಗೆ ಕುಶಾಲನಗರದ ಕಾರು ನಿಲ್ದಾಣದ ವೇದಿಕೆಯಲ್ಲಿ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಸಚಿವ ಸದಾನಂದ ಗೌಡ ನೆರವೇರಿಸಲಿದ್ದು, ಸಾರ್ವಜನಿಕ ಸಭೆ ನಡೆಯಲಿದೆ. ಈ ಯಾತ್ರೆಯ ನೇತೃತ್ವವನ್ನು ಸಂಸದ ಪ್ರತಾಪ್ಸಿಂಹ, ನಳಿನ್ ಕುಮಾರ್ ಕಟೀಲ್, ಶಾಸಕರುಗಳಾದ ಅಪ್ಪಚ್ಚುರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ಜಿಲ್ಲಾಧ್ಯಕ್ಷ ಬಿ.ಬಿ. ಭಾರತೀಶ್ ವಹಿಸಲಿದ್ದು, ಪಕ್ಷದ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರವೀಣ್ ಪೂಜಾರಿಯವರ ತಂದೆ ಚಂದಪ್ಪ ಪೂಜಾರಿಯವರು ಧ್ವಜ ಎತ್ತುವ ಮೂಲಕ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಕಾಲ್ನಡಿಗೆ ಜಾಥಾ ಗುಡ್ಡೆಹೊಸೂರುವರೆಗೆ ಇದ್ದು, ನಂತರ ಯಾತ್ರೆಯು ವಾಹನ ಮುಖಾಂತರ ಮಡಿಕೇರಿಗೆ ಆಗಮಿಸಲಿದೆ. ಮಡಿಕೇರಿಯ ಕಾರ್ಯಪ್ಪ ವೃತ್ತದ ಬಳಿ ಮಡಿಕೇರಿ ತಾಲೂಕು ಹಾಗೂ ಮಡಿಕೇರಿ ನಗರ ಭಾ.ಜ.ಪ ವತಿಯಿಂದ ಸ್ವಾಗತ ಮಾಡಲಾಗುವದು. ಅಪರಾಹ್ನ 2.30ಕ್ಕೆ ಮಡಿಕೇರಿ ನಗರದಲ್ಲಿ ಸುಮರು 4.5 ಕಿ.ಮೀ ದೂರ ಕಾಲ್ನಡಿಗೆ ಜಾಥಾ ನಡೆಯಲಿದ್ದು ಕಾರ್ಯಪ್ಪ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಓಂಕಾರೇಶ್ವರ ದೇವಾಲಯ ರಸ್ತೆಗಾಗಿ ಚೌಕಿ, ಗಣಪತಿಬೀದಿ ರಸ್ತೆ, ಮಹದೇವಪೇಟೆ, ಮಾರ್ಕೆಟ್, ಚೌಕಿ, ಬಸ್ಸು ನಿಲ್ದಾಣ ಮುಖಾಂತರ ಗಾಂಧಿ ಮೈದಾನಕ್ಕೆ ಆಗಮಿಸಲಿದ್ದು, ಅಲ್ಲಿ ಸಾರ್ವಜನಿಕ ಸಭೆಯನ್ನು ಸಂಜೆ 4 ಗಂಟೆಗೆ ಏರ್ಪಡಿಸಲಾಗಿದೆ. ರಾಜ್ಯ ಸರ್ಕಾರದ ಹಿಂದೂ ವಿರೋಧಿ ಆಡಳಿತವನ್ನು ಖಂಡಿಸುತ್ತಾ ಸರ್ಕಾರದಲ್ಲಿರುವ ಸಮಾಜಘಾತುಕ ಸಂಘಟನೆಗಳಿಗಾಗಿ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವರನ್ನು ವಜಾಗೊಳಿಸಲು ಆಗ್ರಹಿಸಿ, ರಾಜ್ಯದಲ್ಲಿ ಆಗುವ ಹಿಂದೂ ಹತ್ಯೆಯನ್ನು ಸಿ.ಬಿ.ಐ.ಗೆ ನೀಡಲು ಒತ್ತಾಯಿಸಿ, ಸಮಾಜ ವಿದ್ರೋಹಿ ಸಂಘಟನೆಗಳಾದ ಪಿ.ಎಫ್.ಐ. ಮತ್ತು ಎಸ್.ಡಿ.ಪಿ.ಐ.ಯನ್ನು ನಿಷೇಧಿಸುವಂತೆ ಆಗ್ರಹಿಸಲಾಗುವದು. ಹಿಂದೂ ಬಂಧುಗಳಿಗೆ ರಕ್ಷಣೆ ಕೊಡುವದರೊಂದಿಗೆ ಧೈರ್ಯ ತುಂಬುವ ಕಾರ್ಯವನ್ನು ಮಾಡಲಾಗುವದು. ತಾ. 4 ರಂದು ಬೆಳಿಗ್ಗೆ 9 ಗಂಟೆಗೆ ಈ ಯಾತ್ರೆಯು ಪೆರಾಜೆ ಮೂಲಕ ದ.ಕ. ಜಿಲ್ಲೆಯಲ್ಲಿ ಮುಂದೆ ಸಾಗಲಿದೆ.