ಕುಶಾಲನಗರ, ಮಾ. 1 : ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಸ್ವಚ್ಚ ಕುಶಾಲನಗರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.

ಕುಶಾಲನಗರದ ಪಟ್ಟಣ ಪಂಚಾಯ್ತಿ ಮತ್ತು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮ 2016ರ ಅನ್ವಯ ಮೂಲದಲ್ಲೇ ಮನೆ ಮನೆಗಳಿಂದ ಕಸವನ್ನು ಸಂಗ್ರಹಿಸಿ ಬೇರ್ಪಡಿಸುವ ಬಗ್ಗೆ ಬೆಂಗಳೂರಿನ ಕರ್ನಾಟಕ ಪೌರಾಡಳಿತ ನಿರ್ದೇಶನಾಲಯ ಆದೇಶದಂತೆ ರಾಜ್ಯದ ಎಲ್ಲ ಕಡೆ ಸ್ವಚ್ಛತೆಗೆ ಗಮನ ಹರಿಸಬೇಕಾಗಿದೆ. ಕುಶಾಲನಗರವನ್ನು ಕಸಮುಕ್ತ ಪ್ರದೇಶವನ್ನಾಗಿಸುವ ಉದ್ದೇಶದಿಂದ ಪಟ್ಟಣ ಪಂಚಾಯ್ತಿಯ ಎಲ್ಲಾ ಬಡಾವಣೆಗಳ ನಿವಾಸಿಗಳಿಗೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಜಗದೀಶ್ ಮಾತನಾಡಿ, ಪ್ರತಿದಿನವು ಮನೆಗಳಲ್ಲಿ ಸಂಗ್ರಹ ವಾಗುವ ಕಸವನ್ನು ಚರಂಡಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಎಸೆಯುವ ಮೂಲಕ ಪರಿಸರಕ್ಕೆ ಮಾರಕವಾಗುವ ರೀತಿಯಲ್ಲಿ ಸಾರ್ವಜನಿಕರು ನಡೆದು ಕೊಳ್ಳಬಾರದು ಎಂದು ಮನವಿ ಮಾಡಿದರು.

ಕುಶಾಲನಗರ ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಪ್ರಾರಂಭವಾದ ಜಾಥಾ ಮುಳ್ಳುಸೋಗೆಯ ಓಂಕಾರ್ ಬಡಾವಣೆಯ ತನಕ ತೆರಳಿತು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಮಧುಸೂದನ್, ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರು, ಪದಾಧಿಕಾರಿಗಳು, ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಪೊಲೀಸ್ ಸ್ಟೂಡೆಂಟ್ ಕೆಡೆಟ್‍ಗಳು, ಪೌರಕಾರ್ಮಿಕರು, ಕಛೇರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.