ಮಡಿಕೇರಿ, ಮಾ. 1: ಕೊಡಗು ಜಿಲ್ಲೆಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಜರುಗಿದ ಹಲವು ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ.ವಿದ್ಯಾರ್ಥಿ-ಪೋಷಕರಿಗೆ ಕಾರ್ಯಾಗಾರ

ಸೋಮವಾರಪೇಟೆ: ಇಲ್ಲಿನ ಜೇಸೀ ಸಂಸ್ಥೆಯ ಜೇಸಿರೇಟ್ಸ್ ವತಿಯಿಂದ ಸಮೀಪದ ವಿಶ್ವ ಮಾನವ ಕುವೆಂಪು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ-ಪೋಷಕರ ದೃಷ್ಟಿಕೋನ ಕುರಿತ ಮಾಹಿತಿ ಕಾರ್ಯಾಗಾರ ನಡೆಯಿತು.

ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಮುಖ್ಯೋಪಾಧ್ಯಾಯಿನಿ ಮಿಲ್ಡ್ರೆಡ್ ಗೋನ್ಸಾಲ್‍ವೇಸ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜೇಸಿರೇಟ್ಸ್ ಅಧ್ಯಕ್ಷೆ ಮಾಯ ಗಿರೀಶ್ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ರುಬೀನಾ, ಮಾಜೀ ವಲಯ ಅಧಿಕಾರಿ ಗಿರೀಶ್, ಪದಾಧಿಕಾರಿಗಳಾದ ಉಷಾ ರಾಣಿ, ಶೈಲಜ ವಸಂತ್, ಸುಮ, ನಿರಂಜನ್ ಅವರುಗಳು ಉಪಸ್ಥಿತರಿದ್ದರು.

ಜೇಸಿ ಸಂಸ್ಥೆಯ ಕಾವ್ಯ ಸಂಜು ಅವರು ವಿದ್ಯಾರ್ಥಿಗಳು ಮತ್ತು ಪೋಷಕರ ನಡುವಿನ ದೃಷ್ಟಿಕೋನಗಳು, ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರದ ಕುರಿತು ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.

ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮಾಹಿತಿ

ನಾಪೋಕ್ಲು: ಸಮೀಪದ ನೇತಾಜಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅಮೇರಿಕಾದ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಡಾ. ಜಿಮ್ ಸೈಬುಲ್ಸ್ಕಿ ಫೋಲ್ಡ್ ಸ್ಕೋಪ್ ಉಪಕರಣದ ಮೂಲಕ ಸೂಕ್ಷ್ಮ ವಸ್ತುಗಳನ್ನು ವೀಕ್ಷಿಸುವ ವಿಧಾನವನ್ನು ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದರು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಪ್ರೌಢಶಾಲೆಯ ವಿಜ್ಞಾನ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಸೂಕ್ಷ್ಮ ವಸ್ತುಗಳ ವೀಕ್ಷಣೆ ಮಾಡಲು ಸೂಕ್ಷ್ಮದರ್ಶಕದ ಬಳಕೆ ಅನಿವಾರ್ಯ. ಆದರೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಫೋಲ್ಡ್ ಸ್ಕೋಪ್ ಉಪಕರಣ ವನ್ನು ಉಪಯೋಗಿಸುವದರ ಮೂಲಕ ಸೂಕ್ಷ್ಮ ವಸ್ತುಗಳ ಗಾತ್ರವನ್ನು ಹಿಗ್ಗಿಸಿ ವೀಕ್ಷಣೆ ಮಾಡುವ ಸುಲಭ ವಿಧಾನವನ್ನು ಡಾ. ಜಿಮ್ ಪ್ರದರ್ಶಿಸಿದರು.

ಎಲೆಗಳ ವಿನ್ಯಾಸ, ರಕ್ತದ ಕಣಗಳು ಸೂಕ್ಷ್ಮಜೀವಿಗಳು ಮತ್ತಿತರ ಸೂಕ್ಷ್ಮಾತಿಸೂಕ್ಷ್ಮ ವಸ್ತುಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಗುಬ್ಬಿ ಲ್ಯಾನ್ಸ್ ತಂಡದ ಸದಸ್ಯರ ಸಹಕಾರದೊಂದಿಗೆ ವೀಕ್ಷಿಸಿದರು. ಪ್ರಾಯೋಗಿಕ ಕಾರ್ಯಕ್ರಮದಲ್ಲಿ ಗುಬ್ಬಿ ಲ್ಯಾನ್ಸ್ ತಂಡದ ಸದಸ್ಯರಾದ ಡಾ. ಹೆಚ್.ಎಸ್. ಸುಧೀರ್, ಡಾ. ಕೆ.ಎಸ್. ಶೇಷಾದ್ರಿ, ವಿದಿಷಾ ಕುಲಕರ್ಣಿ, ವಿಘ್ನೇಶ್ ಕಾಮತ್, ಪುರಭಿ ದೇಶಪಾಂಡೆ, ಪ್ರಿಯದರ್ಶಿನಿ ಶೆಟ್ಟಿ ಹಾಗೂ ಡೆನ್ನಿಸ್ ಸಿ. ಜಾಯ್ ಪಾಲ್ಗೊಂಡಿದ್ದರು. ಸಮೀಪದ ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆಯಲ್ಲೂ ತಂಡದ ಸದಸ್ಯರು ಫೋಲ್ಡ್ ಸ್ಕೋಪ್ ಉಪಕರಣದ ಬಳಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರದರ್ಶಿಸಿದರು.

ಆರಾಧನಾ ಮಹೋತ್ಸವ

ಗೋಣಿಕೊಪ್ಪ ವರದಿ: ಶ್ರೀ ದುರ್ಗಾ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ತ್ಯಾಗರಾಜ, ಕನಕದಾಸ ಮತ್ತು ಪುರಂದರದಾಸರ ಆರಾಧನಾ ಮಹೋತ್ಸವವನ್ನು ಇಲ್ಲಿನ ಸೈಕ್ಲೋನ್ ಡ್ಯಾನ್ಸ್ ಇನ್ಸ್‍ಟ್ಯೂಷನ್‍ನಲ್ಲಿ ಆಚರಿಸಲಾಯಿತು.

ವಿದ್ಯಾರ್ಥಿಗಳಿಂದ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಹಲವಾರು ಸಂಗೀತಾಭಿಮಾನಿಗಳು ಪಾಲ್ಗೊಂಡಿದ್ದರು. ಸಂಗೀತ ಶಾಲೆಯ ಶಿಕ್ಷಕಿ ಚಂದ್ರಕಲಾ ಮೂರ್ತಿ ಹಾಗೂ ವಿದ್ಯಾರ್ಥಿಗಳು ಹಾಡಿನ ಮೂಲಕ ರಂಜಿಸಿದರು.

ಜೀವ ವೈವಿಧ್ಯ ಬಗ್ಗೆ ಮಾಹಿತಿ ಪಡೆಯಲು ಸಲಹೆ

ಮಡಿಕೇರಿ: ಪ್ರಸ್ತುತ ಆಧುನಿಕ ಸಮಾಜವು ಜಗತ್ತಿನ ಜೀವ ವೈವಿಧ್ಯಗಳ ಬಗ್ಗೆ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಮಾಹಿತಿ ಪಡೆಯುವದು ಅಗತ್ಯ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಿರಿಯ ವೈಜ್ಞಾನಿಕಾಧಿಕಾರಿ ಡಾ. ಎ.ಎಂ. ರಮೇಶ್ ತಿಳಿಸಿದ್ದಾರೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ 2018ರ ವಿಜ್ಞಾನ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ರೋಗನಿರೋಧಕ ಶಕ್ತಿ ಕುಂದುತ್ತಿರುವದು ಹಾಗೂ ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣ ತಿಳಿಯಬೇಕಿದೆ. ಪ್ರತಿಯೊಬ್ಬರಲ್ಲಿಯೂ ವೈಜ್ಞಾನಿಕ ಮಾಹಿತಿ ಇದ್ದಾಗ, ಹಲವು ರೋಗಗಳು ಬರದಂತೆ ಮುನ್ನೆಚ್ಚರಿಕೆ ವಹಿಸಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯುವಜನಾಂಗ ವೈಜ್ಞಾನಿಕವಾಗಿ ಚಿಂತನೆ ಮಾಡಬೇಕು ಹಾಗೂ ವೈಜ್ಞಾನಿಕ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಜಗತ್ತು ಜ್ಞಾನ ಆಧಾರಿತ ಸಮಾಜದಲ್ಲಿ ಬದುಕುತ್ತಿದ್ದು, ಪ್ರತಿಯೊಂದು ಸಂಶೋಧನೆಯನ್ನು ವಿಶ್ಲೇಷಣೆಗೊಳಪಡಿಸಿ ಅದರ ಅಗತ್ಯತೆಗಳು ಸಮಾಜದ ಪ್ರತಿಯೊಬ್ಬರಿಗೂ ತಲುಪುವಂತಾಗಬೇಕು ಎಂದು ಅವರು ಹೇಳಿದರು. ಜವಾಹರ ಲಾಲ್ ನೆಹರು ಅವರು ರಾಷ್ಟ್ರದಲ್ಲಿ ವೈಜ್ಞಾನಿಕ ದೃಷ್ಟಿಕೋನ ಗಟ್ಟಿಗೊಳಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ ವಿಜ್ಞಾನಿಗಳಾದ ಪ್ರೊ. ಯು.ಆರ್. ರಾವ್, ಸಿ.ವಿ. ರಾಮನ್ ಮೊದಲಾದವರು ವೈಜ್ಞಾನಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇದೆಲ್ಲವನ್ನು ಮನಗಂಡು ಯುವಜನಾಂಗ ಉತ್ತಮ ಗುಣಮಟ್ಟದ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಡಾ. ಎ.ಎಂ. ರಮೇಶ್ ತಿಳಿಸಿದರು. ಪರಿಸರವನ್ನು ಸಂರಕ್ಷಿಸಿಕೊಂಡು ಸುಸ್ಥಿರ ಬೆಳವಣಿಗೆಯತ್ತ ಸಂಶೋಧನೆ ಕೈಗೊಳ್ಳಬೇಕು ಆಗ ಮಾತ್ರ ನಮ್ಮ ಸಂಪತ್ತನ್ನು ಭವಿಷ್ಯದ ಜನರಿಗೂ ಮೀಸಲಿಡಬಹುದು ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಿರಿಯ ವೈಜ್ಞಾನಿಕಾಧಿಕಾರಿ ವಿವರಿಸಿದರು.

ಮೈಸೂರು ಜಯಚಾಮರಾಜೇಂದ್ರ ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಬಿ. ಮನೋಜ್ ಕುಮಾರ್, ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಡಾ. ಜೆ. ಮಂಜಣ್ಣ, ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಇತರರು ಇದ್ದರು.ವಿಜ್ಞಾನವನ್ನು ವಿವೇಕದೊಂದಿಗೆ ಬಳಸಿ

ಶನಿವಾರಸಂತೆ: ವಿವೇಕದೊಂದಿಗೆ ವಿಜ್ಞಾನವನ್ನು ಬಳಸಿದರೆ ಅದು ಮನುಷ್ಯನಿಗೆ ವರವೂ ಆಗಬಹುದು, ಶಾಪವೂ ಆಗಬಹುದು ಎಂದು ನಿಡ್ತ ಗ್ರಾಮ ಪಂಚಾಯಿತಿ ಸದಸ್ಯ ವಿಜಯಕುಮಾರ್ ಅಭಿಪ್ರಾಯಪಟ್ಟರು.

ಸಮೀಪದ ಮುಳ್ಳೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಿದ ಭೌತ ವಿಜ್ಞಾನಿ ಸರ್. ಸಿ.ವಿ. ರಾಮನ್ ಪರಿಣಾಮಕಾರಿ ಸಿದ್ಧಾಂತ ಪ್ರಚುರಪಡಿಸಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಿದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲೆಯಲ್ಲಿ ವಿಜ್ಞಾನ ಮತ್ತು ವಿವೇಕದೊಂದಿಗೆ ವಿಜ್ಞಾನ ಎಂಬ ವಿಷಯದ ವಿಚಾರಗೋಷ್ಠಿಯಲ್ಲಿ ಶಿಕ್ಷಕ ಸಿ.ಎಸ್. ಸತೀಶ್ ಮಾತನಾಡಿ, ವಿಜ್ಞಾನ ವಿದ್ಯಾರ್ಥಿಗಳನ್ನು ಕಲ್ಪನಾ ಪ್ರಪಂಚಕ್ಕೆ ಕರೆದೊಯ್ದು ಕುತೂಹಲಭರಿತರನ್ನಾಗಿಸುತ್ತದೆ. ಆಸಕ್ತಿ ತೋರುವ ವಿದ್ಯಾರ್ಥಿಗಳು ತಲ್ಲೀನರಾಗಿ ಸ್ವಾನುಭವ ಪಡೆಯುವಂತಾಗಬೇಕು ಎಂದರು.

ವಿದ್ಯಾರ್ಥಿಗಳು ಗ್ರಹಣ, ಸೌರವ್ಯೂಹ, ಬೆಳಕಿನ ಸರಳ ರೇಖಾ ಪ್ರಸರಣ, ರೋಬಟ್, ಏಲಿಯನ್, ಮಾನವ ದೇಹ, ಸೋಲಾರ್, ಜ್ವಾಲಾಮುಖಿ, ಪವನಶಕ್ತಿ, ಅಲೆಶಕ್ತಿ, ಸ್ಪಿಂಕ್ಲರ್, ಗುಡಿಸಲ ಮಾದರಿಯೊಳಗೆ ವಿಜ್ಞಾನಿಗಳ ಭಾವಚಿತ್ರ ಇತ್ಯಾದಿ ಸರಳ ಪ್ರಯೋಗಗಳನ್ನು ಪ್ರದರ್ಶಿಸಿ ಗಮನಸೆಳೆದರು. ಪೋಷಕರು ಪಾಲ್ಗೊಂಡು ಮಕ್ಕಳ ಪ್ರತಿಭೆ ವೀಕ್ಷಿಸಿ ಸಂಭ್ರಮಿಸಿದರು. ಮುಖ್ಯ ಶಿಕ್ಷಕ ಮಂಜುನಾಥ್ ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಎಫ್.ಎಂ.ಸಿ. ಕಾಲೇಜಿನಲ್ಲಿ ‘ಸಂಕಲ್ಪ್ ಫೆಸ್ಟ್’

ಮಡಿಕೇರಿ: ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜು ವತಿಯಿಂದ ‘ಸಂಕಲ್ಪ್ ರಾಜ್ಯಮಟ್ಟದ ಕಾಮರ್ಸ್ ಅಂಡ್ ಮ್ಯಾನೇಜ್‍ಮೆಂಟ್ ಫೆಸ್ಟ್’ ಕಾರ್ಯಕ್ರಮ ನಡೆಯಿತು. ಮಡಿಕೇರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಕೆ.ಡಿ. ನಿರ್ಮಲ ಉದ್ಘಾಟಿಸಿದರು.

ಅತಿಥಿಗಳಾಗಿ ಮೈಸೂರು ವಿದ್ಯಾ ವಿಕಾಸ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಸಿ.ಜೆ. ಪ್ರಿಯ ಆಗಮಿಸಿದ್ದರು. ಫೀ.ಮಾ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಯೋಜಕಿ ಡಾ. ಗಾಯತ್ರಿದೇವಿ, ವಿದ್ಯಾರ್ಥಿ ಸಂಯೋಜಕ ಪಿ.ಎಲ್. ಹರ್ಷಿತ್, ಎ.ಪಿ. ವಿಲ್ಮ ಇನ್ನಿತರರು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿ ಲಿಪಿಶ್ರೀ ನಿರೂಪಿಸಿದರು.

ರಕ್ತದಾನ ಮಹತ್ವದ ಸೇವೆ

ವೀರಾಜಪೇಟೆ: ಯುವ ಜನತೆ ರಕ್ತದಾನ ಮಾಡಿ ಮತ್ತೊಂದು ಜೀವ ಉಳಿಸುವದು ಎಲ್ಲಾ ದಾನಕ್ಕಿಂತ ಮಹತ್ವದ ಸೇವೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಹೇಳಿದರು.

ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‍ಕ್ರಾಸ್ ಮತ್ತು ರೆಡ್ ರಿಬ್ಬನ್ ಕ್ಲಬ್‍ನ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಹಾಗೂ ಏಡ್ಸ್ ಜಾಗೃತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಎಲ್ಲಾ ದಾನಕಿಂತ ರಕ್ತದಾನಕ್ಕೆ ಹೆಚ್ಚು ಮಹತ್ವವಿರುವದರಿಂದ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗುವಂತಾಗಬೇಕು. ಆಗ ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಡಿಕೇರಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಬಿ. ರಶ್ಮಿ ಮಾತನಾಡಿ, ಹೆಣ್ಣು-ಗಂಡು ಎನ್ನುವ ಭೇದವಿಲ್ಲದೆ 18 ರಿಂದ 60 ವರ್ಷ ವಯಸ್ಸಿನವರೆಗೂ ಆರೋಗ್ಯವಾಗಿರುವ ಪ್ರತಿಯೊಬ್ಬರೂ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತಕ್ಕೆ ಪರ್ಯಾಯವಾದ ವಸ್ತುಗಳಿಲ್ಲ. ಕೇವಲ ದಾನಿಗಳಿಂದ ಮಾತ್ರ ರಕ್ತವನ್ನು ಪಡೆಯಲು ಸಾಧ್ಯ. ಯುವಜನತೆ ರಕ್ತದಾನ ಮಾಡಲು ಮುಂದೆ ಬರುವಂತಾಗಬೇಕು ಎಂದರು.

ಏಡ್ಸ್ ನಿಯಂತ್ರಣ ಘಟಕದ ಮಡಿಕೇರಿಯ ಜಿಲ್ಲಾ ಮೇಲ್ವಿಚಾರಕಿ ಕೂಪದಿರ ಸುನೀತ ಮುತ್ತಣ್ಣ ಮಾತನಾಡಿ, ಹೆಚ್.ಐ.ವಿ. ಸೋಂಕು ಶೇ. 50 ರಷ್ಟು ಹೆಚ್ಚು ಯುವಕರಲ್ಲಿ ಕಾಣಿಸಿಕೊಳ್ಳುತ್ತಿರುವದರಿಂದ ಅದನ್ನು ತಡೆಗಟ್ಟಲು ಯುವಜನತೆ ಪಣತೊಡಬೇಕಾಗಿದೆ. ಏಡ್ಸ್ ನಿಯಂತ್ರಣದ ಬಗ್ಗೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾಕಷ್ಟು ಔಷಧಿಗಳಿದ್ದು ಕಾಯಿಲೆ ಇದ್ದವರು ಸಂಪರ್ಕಿಸಬಹುದು. ಕಾಯಿಲೆಗಳಿರುವ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ ಸಹಾಯಧನ ನೀಡಲಾಗುವದು. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಕರು ರಕ್ತದಾನದಂತ ಸಮಾಜ ಸೇವೆಯಲ್ಲಿ ಮುಂದೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ ಪ್ರೊ. ಪಿ.ಎನ್. ನಾಗರಾಜಮೂರ್ತಿ, ರೆಡ್ ಕ್ರಾಸ್ ಸಂಚಾಲಕ ಎಂ.ಎನ್. ವನಿತ್ ಕುಮಾರ್, ರೆಡ್ ರಿಬ್ಬನ್ ಸಂಚಾಲಕ ಪೊ. ಎನ್. ಗುರುಪ್ರಸಾದ್ ಹಾಗೂ ಇತರರು ಉಪಸ್ಥಿತರಿದ್ದರು. ಈ ಸಂದರ್ಭ ಕಾಲೇಜಿನ 42 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ವಿದ್ಯಾರ್ಥಿಗಳಿಗೆ ಮಾಹಿತಿ

ಮಡಿಕೇರಿ: ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಮಡಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ “ವಿಜ್ಞಾನ ವಸ್ತು ಪ್ರದರ್ಶನ ಮತ್ತು ಉಚಿತ ರಕ್ತ ಪರೀಕ್ಷೆ ಶಿಬಿರ ನಡೆಯಿತು.

ಶಾಲೆಯ ಮುಖ್ಯೋಪಾಧ್ಯಾಯ ಬಿ. ಶಿವರಾಮು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಪೆಥಾಲೊಜಿ ಪ್ರೊ. ಡಾ. ಮಲ್ಲಿಕಾರ್ಜುನ್ ಹಾಗೂ ಸೀನಿಯರ್ ಟೆಕ್ನೀಶಿಯನ್ ಜಗದೀಶ್ ಪಾಲ್ಗೊಂಡು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಉಪ ಮುಖ್ಯೋಪಾಧ್ಯಾಯಿನಿ ತೇಜಸ್ವಿನಿ ಮತ್ತು ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಿ.ಎಸ್. ತುಳಸಿ ಸ್ವಾಗತಿಸಿ, ಎಂ.ಆರ್. ಲತಾ ವಂದಿಸಿ, ಎಸ್.ಸಿ. ಅಖಿಲ ಕಾರ್ಯಕ್ರಮವನ್ನು ನಿರೂಪಿಸಿದರು.ಕಾನ್‍ಬೈಲ್ ಶಾಲೆಗೆ ಕೊಡುಗೆ

ಸುಂಟಿಕೊಪ್ಪ: ಕಾನ್‍ಬೈಲ್ ಸರ್ಕಾರಿ ಪ್ರೌಢಶಾಲೆಗೆ ಶಾಲಾಭಿವೃದ್ಧಿ ಸಮಿತಿಯ ನಾಮ ನಿರ್ದೇಶಿತ ಸದಸ್ಯೆ ನೀಲಮ್ಮ ಪೆಮ್ಮಯ್ಯ ಸುಮಾರು 50000 ರೂ.ಗಳ ಯುಪಿಎಸ್ ಇನ್ವರ್ಟರ್ ವ್ಯವಸ್ಥೆ ಯನ್ನು ದಾನವಾಗಿ ನೀಡಿರುತ್ತಾರೆ. ಇದರಿಂದ ಶಾಲೆಯ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರಕಿದೆ. ಶಾಲೆಯ ಬಗ್ಗೆ ಅಭಿಮಾನವನ್ನು ಹೊಂದಿರುವ ನೀಲಮ್ಮ ಪೆಮ್ಮಯ್ಯ ಸದಾ ಶಾಲೆಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ. ಸಮುದಾಯದಲ್ಲಿ ಈ ರೀತಿಯ ದಾನಿಗಳು ಇದ್ದಾಗ ಶಾಲೆಯು ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡಲು ಸಾಧ್ಯ ಮತ್ತು ಸರ್ಕಾರಿ ಶಾಲೆಗಳು ಸಮುದಾಯದ ಶಾಲೆಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಮುಖ್ಯ ಶಿಕ್ಷಕ ಮಂಜೇಶ್ ಎಂ.ವಿ. ಅಭಿಪ್ರಾಯಪಟ್ಟರು. ಸº Àಶಿಕ್ಷಕರಾದ ದಿನೇಶ್ ಕೆ.ಎನ್., ನವೀನ್ ಕುಮಾರ್, ಸುಮಾ ಕೆ.ಪಿ., ಲತಾ ವಿ. ಪೈ, ಪಾರ್ವತಿ ಜಿ.ಕೆ., ಮಾಲಾದೇವಿ ಮತ್ತು ಕಚೇರಿ ಸಿಬ್ಬಂದಿ ಉತ್ತಪ್ಪ ಬಿ.ಎ. ಮತ್ತು ಸರ್ವೀಸ್ ಕಂಪೆನಿಯ ಶ್ರೀಧರನ್ ಈ ಸಂದರ್ಭ ಹಾಜರಿದ್ದರು.

ವಿಜ್ಞಾನ-ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಲು ಕರೆ

ಸೋಮವಾರಪೇಟೆ: ವಿದ್ಯಾರ್ಥಿಗಳು ಕಲಿಕಾ ಹಂತದಲ್ಲಿಯೇ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಬೇಕೆಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೊಡಗು ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮ್ ಕುಮಾರ್ ಕರೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್, ರೋಟರಿ ಸಂಸ್ಥೆ ಸಹಭಾಗಿತ್ವದಲ್ಲಿ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಜ್ಞಾನ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯೋಜನಾಬದ್ಧ ಚಿಂತನೆ ಮತ್ತು ದುಡಿಮೆಯಿಂದ ವಿಜ್ಞಾನವನ್ನು ಅಭ್ಯಸಿಸಿದರೆ ತಾವೂ ಸಹ ಉತ್ತಮ ವಿಜ್ಞಾನಿಗಳಾಗಲು ಸಾಧ್ಯ. ವಿದ್ಯಾರ್ಥಿಗಳು ಸಿ.ವಿ. ರಾಮನ್, ಎ.ಪಿ.ಜೆ. ಅಬ್ದುಲ್ ಕಲಾಂ, ಭಾರತ ರತ್ನ ಸಿ.ಎನ್.ಆರ್. ರಾವ್ ಅವರಂತಹ ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಅಧ್ಯಯನ ಮಾಡಬೇಕು ಎಂದರು.

ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯ ಶಿಕ್ಷಕ ಎಂ.ಜೆ. ಅಣ್ಣಮ್ಮ ಮಾತನಾಡಿ, ವಿಜ್ಞಾನದ ಕಲಿಕೆಯಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡರೆ ಇನ್ನಷ್ಟು ಜ್ಞಾನವನ್ನು ಸಂಪಾದಿಸಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಸಂಸ್ಥೆಯ ಮಾಜಿ ಸಹಾಯಕ ರಾಜ್ಯಪಾಲ ಬಿ.ಎಸ್. ಸದಾನಂದ್ ಮಾತನಾಡಿ, ತಾಲೂಕಿನ 29 ಶಾಲೆಗಳಲ್ಲಿ ವಿಜ್ಞಾನ ವಾಹಿನಿ ಸಂಚಾರಿ ವಿಜ್ಞಾನ ಪ್ರಯೋಗಾಲಯದ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆಯನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಮೂಢನಂಬಿಕೆಗಳನ್ನು ಹೋಗಲಾಡಿಸಿ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಶಿಕ್ಷಣ ಸಂಯೋಜಕ ಮೂರ್ತಿ, ವಿವೇಕಾನಂದ ಯೂತ್ ಮೂಮೆಂಟ್‍ನ ಪ್ರದೀಪ್ ಮಾತನಾಡಿದರು. ವಿದ್ಯಾರ್ಥಿ ಸಿ.ವಿ. ಆದಿತ್ಯ ಭಾರತೀಯ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕುರಿತು ವಿಚಾರ ಮಂಡಿಸಿದರು. ವೇದಿಕೆಯಲ್ಲಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತಳವಾರ್, ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಬಿದ್ದಪ್ಪ ಹಾಗೂ ಶಿಕ್ಷಕ ಹ್ಯೂಬರ್ಟ್ ಉಪಸ್ಥಿತರಿದ್ದರು.

ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಪ್ರಯೋಗಗಳ ಮೂಲಕ ಪ್ರಾತ್ಯಕ್ಷಿಕೆ ನಡೆಸಿದರು. ವಿಜ್ಞಾನದ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.