ಗೋಣಿಕೊಪ್ಪ ವರದಿ, ಫೆ. 25 : ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಬ್ಬಿಣದ ಏಣಿಗೆ ವಿದ್ಯುತ್ ಸ್ಪರ್ಶಗೊಂಡು ಕಾರ್ಮಿಕ ಸಾವನಪ್ಪಿರುವ ಘಟನೆ ಚೆನ್ನಂಗೊಲ್ಲಿಯಲ್ಲಿ ನಡೆದಿದೆ. ಬೇಗೂರು ಗ್ರಾಮದ ಚೀನಿವಾಡದ ಎ. ಎಂ. ಹಂಸ ಮೃತ ಕಾರ್ಮಿಕ. ಅಲ್ಲಿನ ವೆಂಕಟೇಶ್ ಎಂಬವರ ತೋಟದಲ್ಲಿ ಮರ ಕಪಾತ್ ಕೆಲಸ ಮಾಡುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಕಾಫಿ ತೋಟದಲ್ಲಿ ಮರ ಕಪಾತ್ ಸಂದರ್ಭ ಕಬ್ಬಿಣದ ಏಣಿಯನ್ನು ತೆಗೆಯುವಾಗ ಹತ್ತಿರದಲ್ಲೇ ಹಾದು ಹೋಗಿದ್ದ 11 ಕೆ.ವಿ ವಿದ್ಯುತ್ ತಂತಿಗೆ ತಾಗಿ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಸ್ಥಳಕ್ಕೆ ಸೆಸ್ಕ್ ಜೆ.ಇ. ಕೃಷ್ಣಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.