ಬೆಂಗಳೂರು, ಫೆ. 10: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೇವಸ್ಥಾನ, ಮಠಗಳ ಭೇಟಿ ಮುಂದುವರಿದೆ. ಇಂದು ರಾಜ್ಯಕ್ಕೆ ಬಂದಿರುವ ಅವರು ಹುಲಿಗೆಮ್ಮ ದೇಗುಲಕ್ಕೆ ಭೇಟಿದರು.

ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್‍ನ ‘ಜನಾರ್ಶೀವಾದ ಸಮಾವೇಶ’ದಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಅವರು ಕಾರ್ಯಕ್ರಮದ ಬಳಿಕ ಕೊಪ್ಪಳದ ಗವಿ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಕರ್ತೃ ಗದ್ದುಗೆಯ ದರ್ಶನ ಪಡೆದರು.

ಇದಾದ ಬಳಿಕ ಮಠದಲ್ಲಿ ಮಕ್ಕಳೊಂದಿಗೆ ಕೆಲ ಹೊತ್ತು ಸಮಯ ಕಳೆದು, ಅಭಿನವ ಗವಿಶ್ರೀಗಳ ಆಶೀರ್ವಾದ ಪಡೆದರು. ಮಕ್ಕಳು ರಾಹುಲ್ ಅವರಿಗೆ ಗುಲಾಬಿ ಹೂ ನೀಡಿ ಶುಭಕೋರಿದರು.

ಭೇಟಿ ವೇಳೆ ಮಠದ ಶ್ರೀಗಳು ಮಠದ ಕಾರ್ಯವೈಖರಿಯ ಚಿತ್ರಗಳನ್ನು ರಾಹುಲ್ ಅವರಿಗೆ ತೋರಿಸಿ ವಿವರಣೆ ನೀಡಿದರು. ಸಿಎಂ ಸಿದ್ದರಾಮಯ್ಯ ಜತೆಗಿದ್ದರು. ಇದೇ ವೇಳೆ ರಾಹುಲ್ ಹುಲಿಗೆಮ್ಮ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ.