ಸಿದ್ದಾಪುರ, ಜ. 31: ಕಾಫಿಯ ಹೊಟ್ಟು ತುಂಬಿಸಿಕೊಂಡು ತೆರಳುತ್ತಿದ್ದ ಲಾರಿ ಆಕಸ್ಮಿಕವಾಗಿ ಮಗುಚಿಕೊಂಡ ಘಟನೆ ಸಿದ್ದಾಪುರ ಸಮೀಪದ ಆನಂದಪುರದಲ್ಲಿ ನಡೆದಿದೆ.

ಹಾಲುಗುಂದದಿಂದ ಅಮ್ಮತ್ತಿ ಮಾರ್ಗವಾಗಿ ಪಿರಿಯಾಪಟ್ಟಣಕ್ಕೆ ಕಾಫಿ ಹೊಟ್ಟು ತುಂಬಿಸಿಕೊಂಡು ತೆರಳುತ್ತಿದ್ದ ಲಾರಿ (ಕೆಎ 41 8786) ಸಂಖ್ಯೆಯ ಲಾರಿಯು ಆನಂದಪುರ ಬಳಿ ರಸ್ತೆಯಲ್ಲಿ ಆಕಸ್ಮಿಕವಾಗಿ ಮಗುಚಿಕೊಂಡಿದೆ. ಈ ಸಂದರ್ಭದಲ್ಲಿ ಲಾರಿಯಲ್ಲಿದ್ದ ಪಿರಿಯಾಪಟ್ಟಣ ತಾಲೂಕಿನ ಅರೆಯನಳ್ಳಿ ನಿವಾಸಿ ಕ್ಲಿನರ್ ಶಿವಣ್ಣ ಎಂಬಾತನ ಕಾಲಿಗೆ ಗಂಭೀರವಾದ ಗಾಯವಾಗಿದ್ದು, ಚಾಲಕ ಅಬ್ದುಲ್ ಹಮೀದ್ ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಗಾಯಾಳು ಶಿವಣ್ಣನಿಗೆ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಲಾರಿಯು ಮಗುಚಿಕೊಂಡ ಪರಿಣಾಮ ಲಾರಿಯ ಮುಂಭಾಗ ಜಖಂಗೊಂಡಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ತೆರಳಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ. -ವಾಸು