ಗೋಣಿಕೊಪ್ಪ ವರದಿ, ಜ. 30 : ಮಾಯಮುಡಿ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ನಡೆಯುತ್ತಿದ್ದು, ಅಭಿವೃದ್ಧಿ ಸಹಿಸದ ಕೆಲವರು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಪಿ.ಆರ್ ಪಂಕಜ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನನ್ನ ವ್ಯಾಪ್ತಿಗೆ ಒಳಪಡುವ ತಿತಿಮತಿ, ದೇವರಪುರ ಹಾಗೂ ಮಾಯಮುಡಿ ಭಾಗಗಳಿಗೆ ಯಾವದೇ ತಾರತಮ್ಯ ಮಾಡದೇ ಅನುದಾನವನ್ನು ಸರಿಯಾದ ರೀತಿಯಲ್ಲಿ ಹಂಚಿಕೆ ಮಾಡುತ್ತಿದ್ದೇನೆ. ಜತೆಗೆ ವಿವಿಧ ಇಲಾಖೆಯ ಯೋಜನೆಯನ್ನು ಸದ್ಬಳಕೆ ಮಾಡಿದ್ದೇನೆ. 2016-17ನೇ ಸಾಲಿನಲ್ಲಿ 10 ಲಕ್ಷ 2017-18ನೇ ಸಾಲಿನಲ್ಲಿ 33.60 ಲಕ್ಷ ಹಣವನ್ನು ಮಾಯಮುಡಿ ಭಾಗಕ್ಕೆ ವಿನಿಯೋಗಿಸಲಾಗಿದೆ.
2017-18ನೇ ಸಾಲಿನಲ್ಲಿ 3ಲಕ್ಷ ವೆಚ್ಚದಲ್ಲಿ ರಾಮಮಂದಿರ ರಸ್ತೆ ಅಭಿವೃದ್ಧಿ, 2ಲಕ್ಷ ವೆಚ್ಚದಲ್ಲಿ ಕಮಟೆ ಮಹಾದೇಶ್ವರ ದೇವಾಲಯ ಸಾರ್ವಜನಿಕ ರಸ್ತೆ, 1.60 ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ನಿರ್ಮಾಣ, 1 ಲಕ್ಷ ವೆಚ್ಚದಲ್ಲಿ ಧನುಗಾಲ ಸರ್ಕಾರಿ ಶಾಲೆ ದುರಸ್ತಿ, ತಲಾ 5ಲಕ್ಷ ವೆಚ್ಚದಲ್ಲಿ ಬಸಪ್ಪ ಗಿರಿಜನ ಕಾಲೋನಿಗೆ, ಮಾರಿಯಮ್ಮ ಗಿರಿಜನ ಕಾಲೋನಿ, ಅಂಬುಗೋಟೆ ಗಿರಿಜನ ಕಾಲೋನಿ, ಬೆಳ್ಳಿ ಕಾಲೋನಿ, ರುದ್ರಬೀಡು ಪೈಸಾರಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿಕೆ ಮೂಲಕ ತಿಳಿಸಿದ್ದಾರೆ.