*ಗೋಣಿಕೊಪ್ಪಲು, ಜ. 30: ಹಾತೂರು ಗ್ರಾ.ಪಂ. ವ್ಯಾಪ್ತಿಯ ಕುಂದಾ ಗ್ರಾಮದಲ್ಲಿರುವ 6 ಎಕರೆ ಸರ್ಕಾರಿ ಜಾಗದಲ್ಲಿ ಸುಮಾರು 116 ವಸತಿ ರಹಿತರಿಗೆ ಮನೆಗಳನ್ನು ನಿರ್ಮಿಸುವ ಯೋಜನೆ ರೂಪಿತಗೊಂಡಿದ್ದು, ಫಲಾನುಭವಿಗಳಲ್ಲಿ ಹೊಸ ಭರವಸೆಯ ಬೆಳಕನ್ನು ತಂದಿದೆ.

ಅರುವತ್ತೊಕ್ಲು ಗ್ರಾ.ಪಂ. ವ್ಯಾಪ್ತಿಯ 116 ಹೆಚ್ಚು ನಿವೇಶನ ರಹಿತರಿಗೆ ಗುರುತಿಸಿದ ಜಾಗದಲ್ಲೇ ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಬುಡಕಟ್ಟು ಜನಾಂಗದವರಿಗೆ ಈ ಸೌಕರ್ಯ ಒದಗಿಸಲಾಗಿದೆ. ಹಳ್ಳಿಗಟ್ಟು ಸೀತಾ ಕಾಲೋನಿಯ ಗುಡಿಸಲು ನಿವಾಸಿಗಳಿಗೆ ಈ ಸೌಭಾಗ್ಯ ದೊರೆತಿದೆ. ಬುಡಕಟ್ಟು ಜನರ ಮುಂದಾಳತ್ವದಲ್ಲಿ ನಿವೇಶನದ ಹಕ್ಕಿಗಾಗಿ ನಿರಂತರ ಹೋರಾಟ ನಡೆಸಲಾಗಿತ್ತು. ಇದರ ಫಲವಾಗಿ ವೀರಾಜಪೇಟೆ ತಾಲೂಕು ಶಾಸಕ ಕೆ.ಜಿ. ಬೋಪಯ್ಯ ಹೋರಾಟಗಾರರಿಗೆ ನೀಡಿದ ಭರವಸೆಯಂತೆ ಇದೀಗ ವಸತಿ ರಹಿತರಿಗೆ ಮನೆ ನಿರ್ಮಾಣಗೊಳ್ಳುತ್ತಿದೆ. ಅರುವತ್ತೊಕ್ಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗುಣ ಸೋಮಯ್ಯ ಅವರ ಪ್ರಯತ್ನ ಮತ್ತು ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಜಯಣ್ಣ, ತಾಲೂಕು ಪರಿಶಿಷ್ಟ ವರ್ಗ ಮತ್ತು ಪಂಗಡ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಶೇಖರ್ ವಿಶೇಷ ಕಾಳಜಿಯಿಂದ ಈ ಯೋಜನೆ ರೂಪಿತಗೊಂಡಿದೆ.

ತಲಾ ಒಂದು ಮನೆಗೆ ಎರಡು ಲಕ್ಷದಂತೆ ಎರಡು ಕೋಟಿ ಮೂವತ್ತೇರಡು ಲಕ್ಷದ ಅಂದಾಜು ಮೊತ್ತದಲ್ಲಿ ರಾಜೀವ್ ಗಾಂಧಿ ಯೋಜನೆಯಡಿ ಮನೆ ನಿರ್ಮಿಸಲು ಯೋಜನೆ ರೂಪಿತಗೊಂಡಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಿವೇಶನ ರಹಿತ 116 ಕುಟುಂಬಕ್ಕೆ ಹಕ್ಕುಪತ್ರವನ್ನು ನೀಡಲಾಗಿದೆ. ಹಕ್ಕು ಪತ್ರ ನೀಡಿದ ಕ್ರಮ ಪ್ರಕಾರ ಮನೆಗಳ ನಿರ್ಮಾಣ ಕಾಮಗಾರಿ ನಡೆಯಲಿದೆ. ಪೆÇನ್ನಂಪೇಟೆಯಿಂದ 7 ಕೀ.ಮೀ ವ್ಯಾಪ್ತಿಯಲ್ಲಿ ಈ ಕಾಲೋನಿ ನಿರ್ಮಾಣಗೊಳ್ಳುತ್ತಿದ್ದು, ಇದೀಗಾಗಲೇ ಕಾಲೋನಿ ಪ್ರವೇಶಕ್ಕೆ ರಸ್ತೆ ನಿರ್ಮಾಣ ಮತ್ತು ಎರಡು ಲಕ್ಷದ ವೆಚ್ಚದಲ್ಲಿ ಐ.ಟಿ.ಡಿ.ಪಿ. ಇಲಾಖೆಯ ವತಿಯಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆದಿದೆ. ಸ್ಥಳದಲ್ಲಿ ಕಾಡುಮರಗಳು ಬೆಳೆದು ನಿಂತಿದ್ದರಿಂದ ಮರಗಳನ್ನು ತೆರವುಗೊಳಿಸಬೇಕಾದ ಕಾರ್ಯ ನಡೆಯಬೇಕಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ಮರ ತೆರವುಗೊಳಿಸುವಂತೆ ಮನವಿ ಮಾಡಲಾಗಿದೆ. ಮರ ತೆರವುಗೊಂಡ ತಕ್ಷಣವೇ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಬಿಸಲಾಗುವದು ಎಂದು ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದರು. ವಸತಿ ನಿರ್ಮಾಣ ಸ್ಥಳಕ್ಕೆ ಶಾಸಕರು ಬೇಟಿ ನೀಡಿ ಮಳೆಗಾಲದ ಒಳಗೆ ಮನೆಗಳನ್ನು ನಿರ್ಮಿಸಿಕೊಡಲು ಕ್ರಮ ಕೈಗೊಳ್ಳಲಾಗುವದು ಎಂದು ಫಲಾನುಭವಿಗಳಿಗೆ ತಿಳಿಸಿದರು. ತದನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಕಾಮಗಾರಿ ಪ್ರಾರಂಭಿಸಲು ಶಾಸಕರು ಸೂಚಿಸಿದರು. ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್, ಅರುವತ್ತೊಕ್ಲು ಗ್ರಾ.ಪಂ. ಅಧ್ಯಕ್ಷ ತೀತಮಾಡ ಸುಗಣ ಸೋಮಯ್ಯ, ತಾಲೂಕು ಕಾರ್ಯನಿರ್ವಹಣಾ ಅಧಿಕಾರಿ ಜಯಣ್ಣ, ಪರಿಶಿಷ್ಟ ವರ್ಗ ಮತ್ತು ಪಂಗಡ ಇಲಾಖೆ ಚಂದ್ರಶೇಖರ್ ಆರ್.ಎಂ.ಸಿ. ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ, ಸದಸ್ಯ ಚೀಯಕ್‍ಪೂವಂಡ ಸುಬ್ರಮಣಿ, ತಾಲೂಕು ಬಿ.ಜೆ.ಪಿ. ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪೆÇನ್ನಂಪೇಟೆ ಸ್ಥಾನೀಯ ಸಮಿತಿ ಅಧ್ಯಕ್ಷ ಮುದ್ದೇಯಡ ಮಂಜು ಗಣಪತಿ, ಫೆಡರಷನ್ ನಿರ್ದೇಶಕ ಮಲ್ಲಂಗಡ ಮಧು ದೇವಯ್ಯ, ತಾಲೂಕು ಬಿ.ಜೆ.ಪಿ. ಉಪಾಧ್ಯಕ್ಷ ತೋರಿರ ವಿನು, ಕಾರ್ಯದರ್ಶಿ ಲಾಲ ಭೀಮಯ್ಯ ಗುತ್ತಿಗೆದಾರ ರಾಜಪ್ಪ, ಬುಡಕಟ್ಟು ಜನರ ಹೋರಾಟಗಾರರ ಸಮಿತಿ ಸಂಚಾಲಕ ಗಪ್ಪು ಹಾಗೂ ಫಲಾನುಭವಿಗಳು ಹಾಜರಿದ್ದರು.

ಚಿತ್ರ ವರದಿ : ಎನ್.ಎನ್. ದಿನೇಶ್