ಕುಶಾಲನಗರ, ಜ. 29: ಬೀದರ್‍ನಲ್ಲಿ ನಡೆದ ಪೂಜಾ ಎಂಬ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಎಬಿವಿಪಿ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳಿಗೆ ಭದ್ರತೆ ನೀಡುವಲ್ಲಿ ರಾಜ್ಯ ಸರಕಾರದ ವೈಫಲ್ಯದ ಕುರಿತು ಆಕ್ರೋಷ ವ್ಯಕ್ತಪಡಿಸಿದರು. ಪೂಜಾಳ ಹತ್ಯೆ ಆರೋಪಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಲಾಯಿತು. ಇದೇ ಸಂದರ್ಭ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಈ ಸಂದರ್ಭ ಎಬಿವಿಪಿ ಮುಖಂಡರಾದ ನವನೀತ್, ನಿಖಿಲ್, ವಿನಯ್, ಶರತ್, ಹರ್ಷಿತ, ಪಲ್ಲವಿ, ಯಶ್ವಂತ್, ಯೋಶಿತಾ, ಶ್ವೇತಾ ಮತ್ತಿತರರು ಇದ್ದರು.