ಭಾಗಮಂಡಲ, ಜ. 10: ಇಲ್ಲಿಗೆ ಸಮೀಪದ ತಣ್ಣಿಮಾನಿ ಎಂಬಲ್ಲಿ ಅಕ್ರಮವಾಗಿ ಕಡವೆ ಯನ್ನು ಗುಂಡಿಕ್ಕಿ ಕೊಂದು ಮಾಂಸಮಾಡಿದ ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಡಿ. 2 ರಂದು ದಾಖಲಾದ ಅಕ್ರಮ ಬೇಟೆ ಪ್ರಕರಣ ಸಂಬಂಧ ಕೃತ್ಯಕ್ಕೆ ಬಳಸಿದ್ದ ಆಟೊ ರಿಕ್ಷಾವನ್ನು ವಶಕ್ಕೆ ಪಡೆದಿದ್ದಾರೆ.
* ಭಾಗಮಂಡಲ ವಲಯದ ಚೇರಂಬಾಣೆ ಬಿ. ಬಾಡಗ ಗ್ರಾಮದಲ್ಲಿ ಅಕ್ರಮ ಬೇಟೆ ಪ್ರಕರಣವನ್ನು ಬೇಧಿಸುವಲ್ಲಿ ಭಾಗಮಂಡಲ ವಲಯ ಅರಣ್ಯ ಸಿಬ್ಬಂದಿಗಳು ಯಶಸ್ವಿಯಾಗಿ ದ್ದಾರೆ. ಅಜಂತ ಎಂಬಾತ ಕಾಡು ಕುರಿ ಬೇಟೆಯಾಡಿ ತನ್ನ ಮನೆಯಲ್ಲಿ ಮಾಂಸ ಮಾಡಿ ಸಂಗ್ರಹಿಸಿದ ಖಚಿತ ಮಾಹಿತಿಯನ್ನು ಆಧರಿಸಿ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್ ಮಾರ್ಗದರ್ಶನದಲ್ಲಿ ಭಾಗಮಂಡಲ ವಲಯಾರಣ್ಯಾಧಿಕಾರಿ ಎಂ.ಎಸ್. ಚಂಗಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ತಂಡ ಮನೆಯ ಮೇಲೆ ಧಾಳಿ ನಡೆಸಿ ಸಂಗ್ರಹಿಸಿಟ್ಟಿದ್ದ 3.25 ಕೆ.ಜಿ. ಕಾಡು ಕುರಿ ಮಾಂಸ ಹಾಗೂ ಬೇಟೆಗೆ ಬಳಸಿದ ಒಂಟಿ ನಳಿಗೆ ಕೋವಿಯನ್ನು ವಶಪಡಿಸಿಕೊಂಡು ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಸೆಕ್ಷನ್ 9, 39, 51, 55ರ ಪ್ರಕಾರ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ವಲಯ ಅರಣ್ಯ ಅಧಿಕಾರಿ ಎಂ.ಎಸ್. ಚಂಗಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕರಿಕೆ ಉಪ ವಲಯ ಅರಣ್ಯ ಅಧಿಕಾರಿ ಶಶಿ ಪಿ.ಟಿ. ಭಾಗಮಂಡಲ ಉಪ ವಲಯ ಅರಣ್ಯ ಅಧಿಕಾರಿ ಬಿ. ಬಿ. ಅಮೃತೇಶ್ ಎಂ .ಬಿ. ಸುರೇಶ್ ಸಿಬ್ಬಂದಿಗಳಾದ ಸದಾನಂದ, ವಾಗೀಸಯ್ಯ, ಸಚಿನ್, ನಾಗರಾಜ್, ಉತ್ತಯ್ಯ ಆರ್ಆರ್ಟಿ ತಂಡದ ಸದಸ್ಯ ದಿನೇಶ್, ಮನು, ವಾಸು, ರವಿ, ಚಾಲಕ ದೇವಾನಂದ ಪಾಲ್ಗೊಂಡಿದ್ದರು.