ಕುಶಾಲನಗರ, ಡಿ 29: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕೊಡಗರಹಳ್ಳಿ ಮತ್ತು ಅತ್ತೂರು-ನಲ್ಲೂರು ಸ್ಥಾನೀಯ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಧರಣಿ ನಡೆಯಿತು.
ಪಟ್ಟಣದ ಕಾರು ನಿಲ್ದಾಣದ ಆವರಣದ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆದ ಧರಣಿ ಸಂದರ್ಭ ಸಮಿತಿ ಪದಾಧಿಕಾರಿಗಳು, ಸದಸ್ಯರು ನೂತನ ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ರಚಿಸಿದರು.
ಧರಣಿಯಲ್ಲಿ ಸ್ಥಾನೀಯ ಸಮಿತಿಗಳ ಪ್ರಮುಖ ಡಾ.ಶಶಿಕಾಂತ್ ರೈ, ಕೊಡಗರಹಳ್ಳಿ ಗ್ರಾಪಂ ಅಧ್ಯಕ್ಷ ಅಬ್ಬಾಸ್, ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷ ಕೆ.ಬಿ.ಕೃಷ್ಣ, ಮುನೀರ್ ಅಹಮ್ಮದ್, ಜಯಂತ್, ಕೆ.ಎಸ್.ಮಂಜುನಾಥ್, ಗಂಗಾಧರ್, ಜವಾಹರ್, ರಫೀಕ್ ಮತ್ತಿತರರು ಇದ್ದರು.
ಸಮಿತಿ ಸಭೆ
ಗುಡ್ಡೆಹೊಸೂರು: ಕುಶಾಲನಗರ ವನ್ನು ಕೇಂದ್ರವಾಗಿಸಿಕೊಂಡು ಕಾವೇರಿ ತಾಲೂಕು ರಚನೆ ಹೋರಾಟಕ್ಕೆ ಮೂರನೇ ಹಂತಕ್ಕೆ ಸ್ಥಾನೀಯ ಸಮಿತಿಗಳ ಸಭೆಯನ್ನು ಗುಡ್ಡೆಹೊಸೂರಿನಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೇಂದ್ರ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ ಮತ್ತು ಗುಡ್ಡೆಹೊಸುರು ಸ್ಥಾನೀಯ ಸಮಿತಿಯ ಆಧ್ಯಕ್ಷ ಕೋಡಿ ಪೂವಯ್ಯ ಮತ್ತು ಸದಸ್ಯರು ಹಾಜರಿದ್ದರು.
ಜನವರಿ 1ರಿಂದ ಕುಶಾಲನಗರದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲು ಈ ಸಂದರ್ಭ ತಿರ್ಮಾನಿಸಲಾಯಿತು. ಜ. 9 ರಂದು ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುವ ಸಂದರ್ಭ ಸಹಸ್ರಾರು ಮಂದಿಯೊಂದಿಗೆ ಹಕ್ಕೊತ್ತಾಯ ಮಂಡಿಸಲು ತಿರ್ಮಾನಿಸಲಾಯಿತು.