ಸೋಮವಾರಪೇಟೆ, ಸೆ. 9: ದುರಸ್ತಿಗೆಂದು ವರ್ಕ್‍ಶಾಪ್‍ಗೆ ತಂದಿದ್ದ ಜೀಪ್ ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಮುಂದೆ ಚಲಿಸಿದ ಪರಿಣಾಮ ವರ್ಕ್‍ಶಾಪ್‍ಗೆ ಹಾನಿಯಾಗಿದ್ದರೆ, ಅದರ ಮಾಲೀಕನಿಗೂ ಗಾಯವಾಗಿ ಮೈಸೂರಿನ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಇಲ್ಲಿನ ಅಲೋಕ ಸಭಾಂಗಣದ ಮುಂಭಾಗ ಇರುವ ಹೆಚ್.ಇ. ನಾಗರಾಜ್ ಅವರಿಗೆ ಸೇರಿದ ಮಾರುತಿ ಗ್ಯಾರೇಜ್‍ಗೆ ಆಗಮಿಸಿದ ಗೆಜ್ಜೆಹಣಕೋಡು ಗ್ರಾಮದ ಸತೀಶ್ ಎಂಬವರು ಚಾಲಿಸುತ್ತಿದ್ದ ಜೀಪ್, ಗ್ಯಾರೇಜ್‍ನ ಮುಂಭಾಗ ನಿಯಂತ್ರಣ ಕಳೆದುಕೊಂಡಿದೆ.

ಪರಿಣಾಮ ಮುಂದಕ್ಕೆ ಚಲಿಸಿದ ಜೀಪ್ ಛಾವಣಿಗೆ ಆಧಾರವಾಗಿ ನಿಲ್ಲಿಸಿದ್ದ ಕಂಬಗಳಿಗೆ ಢಿಕ್ಕಿ ಹೊಡೆದಿದ್ದು, ಅಲ್ಲೇ ನಿಂತಿದ್ದ ಗ್ಯಾರೇಜ್‍ನ ಮಾಲೀಕ ನಾಗರಾಜ್ ಅವರ ಮೇಲೆ ಛಾವಣಿ ಸೇರಿದಂತೆ ದೊಡ್ಡ ಕಂಬ ಬಿದ್ದಿದೆ. ಇದರಿಂದಾಗಿ ನಾಗರಾಜ್ ಅವರ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಠಾಣಾಧಿಕಾರಿ ಶಿವಣ್ಣ ಅವರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯಿಂದ ವರ್ಕ್‍ಶಾಪ್‍ಗೆ ಭಾಗಶಃ ಹಾನಿ ಸಂಭವಿಸಿದೆ.