*ಗೋಣಿಕೊಪ್ಪಲು, ಸೆ. 5: ಸಾಲ ಪಡೆದುಕೊಂಡ ಹಣವನ್ನು ಹಿಂದಿರುಗಿಸಿಲ್ಲ ಎಂಬ ಕಾರಣಕ್ಕೆ ಹರೀಶ್ ಎಂಬ ಅಮಾಯಕನನ್ನು ನಾಯಿ ಗೂಡಿನಲ್ಲಿ ಬಂಧಿಸಿ, ನಾಯಿ ಗಳಿಂದ ಕಚ್ಚಿಸಿ ಅಮಾನವೀಯತೆÀ ಮೆರೆದ ಆರೋಪಿಗಳನ್ನು ಕೂಡಲೆ ಬಂಧಿಸಬೇಕೆಂದು ಒತ್ತಾಯಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹೆಚ್.ಆರ್. ಪರಶುರಾಮ್ ಈ ಘಟನೆಯನ್ನು ಖಂಡಿಸಿದ್ದಾರೆ. ದಲಿತರ ಮೇಲಿನ ದೌರ್ಜನ್ಯ ಇದಾಗಿದ್ದು, ಆರೋಪಿಗಳನ್ನು ಕೂಡಲೆ ಬಂಧಿಸಬೇಕಾಗಿದೆ. ಕಾನೂನು ರೀತಿಯಲ್ಲಿ ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಈ ಸಂದÀರ್ಭ ಒತ್ತಾಯಿಸಿದ್ದಾರೆ.

ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಸತೀಶ್ ಸಿಂಗಿ ಮಾತನಾಡಿ, ಬಾಳೆಲೆಯಲ್ಲಿ ದಲಿತ ಹರೀಶ್‍ನ ಮೇಲೆ ನಡೆದಿರುವ ಅನ್ಯಾಯಕ್ಕೆ ನ್ಯಾಯ ದೊರಕಬೇಕಿದೆ ಎಂದರು. 8 ದಿನಗಳ ಒಳಗೆ ಆರೋಪಿಗಳನ್ನು ಬಂಧಿಸದೆ ಇದ್ದರೆ ಡಿ.ವೈ.ಎಸ್.ಪಿ. ಕಚೇರಿ ಮುಂದೆ ಹೋರಾಟ ನಡೆಸಲಾಗುವದೆಂದು ಈ ಸಂದÀರ್ಭ ಹೇಳಿದರು.

ಸಮಿತಿಯ ಪದಾಧಿಕಾರಿಗಳಾದ ಜಿಲ್ಲಾ ಖಜಾಂಜಿ ಕುಮಾರ್ ಮಾದೇವ, ವಿಭಾಗ ಸಂಚಾಲಕ ಕೃಷ್ಣಪ್ಪ, ರಜನಿಕಾಂತ್, ಹೆಚ್.ಈ. ಶಿವಕುಮಾರ್, ಪಿ.ಜೆ. ಸುಬ್ರಮಣಿ, ಗಿರೀಶ್, ಸತೀಶ್ ಉಪಸ್ಥಿತರಿದ್ದರು.