ಸೋಮವಾರಪೇಟೆ, ಜೂ. 22: ನಗರದಿಂದ ಬಜೆಗುಂಡಿ ಕಡೆಗೆ ತೆರಳುತ್ತಿದ್ದ ಆಟೋ ಮತ್ತು ಕೋವರ್‍ಕೊಲ್ಲಿ ರಸ್ತೆಯಿಂದ ಪಟ್ಟಣಕ್ಕೆ ಆಗಮಿಸುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋದಲ್ಲಿ ತೆರಳುತ್ತಿದ್ದ ಈರ್ವರು ವಿದ್ಯಾರ್ಥಿನಿಯರಿಗೆ ಗಾಯಗಳಾಗಿರುವ ಘಟನೆ ಇಂದು ಸಂಜೆ ನಡೆದಿದೆ.

ಬಜೆಗುಂಡಿ ಗ್ರಾಮದ ಆಟೋ ಚಾಲಕ ಧನಂಜಯ ಅವರು ತಮ್ಮ ಮಕ್ಕಳಾದ ಗಾಯನ, ಗಗನ ಮತ್ತು ಅದೇ ಗ್ರಾಮದ ಕೃಷ್ಣ ಅವರ ಮಗಳು ಮನಸ್ವಿನಿ ಅವರುಗಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುತ್ತಿದ್ದ ಸಂದರ್ಭ ಬಜೆಗುಂಡಿ ಗ್ರಾಮದ ಮುಖ್ಯರಸ್ತೆ ಬಳಿ ಕೋವರ್‍ಕೊಲ್ಲಿಯಿಂದ ಆಗಮಿಸಿದ ಬೇಳೂರು ಗ್ರಾಮದ ದೇವರಾಜು ಎಂಬವರು ಚಾಲಿಸುತ್ತಿದ್ದ ಮಾರುತಿ ಕಾರು ಡಿಕ್ಕಿ ಪಡಿಸಿದೆ.

ಘಟನೆಯಿಂದ ಆಟೋ ಹಾಗೂ ಕಾರು ರಸ್ತೆ ಬದಿಯ ಚರಂಡಿಗೆ ಮಗುಚಿದ್ದು, ಆಟೋದಲ್ಲಿದ್ದ ಸಂತ ಜೋಸೆಫರ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ, ಧನಂಜಯ ಅವರ ಪುತ್ರಿ ಗಾಯನಾಳ ತಲೆಗೆ ಪೆಟ್ಟಾಗಿದೆ. ಇದರೊಂದಿಗೆ ಸಹೋದರಿ ಗಗನಾಳಿಗೂ ಏಟಾಗಿದೆ. 2ನೇ ತರಗತಿ ವಿದ್ಯಾರ್ಥಿನಿ ಮನಸ್ವಿನಿಯ ಮುಖ ಹಾಗೂ ಕೈಗಳಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗಾಯಾಳುಗಳನ್ನು ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ತಲೆ ಭಾಗಕ್ಕೆ ಗಾಯವಾಗಿರುವ ಗಾಯನಾಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.