ಮಡಿಕೇರಿ ಏ.16 :ರಾಷ್ಟ್ರ ವ್ಯಾಪಿ ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಗಳು ವ್ಯಾಪಾರೀಕರಣದ ಮೂಲಕ ಸಾಕಷ್ಟು ಬೆಳವಣಿಗೆಯನ್ನು ಕಂಡಿದ್ದರೂ ಈ ಎರಡೂ ಕ್ಷೇತ್ರಗಳು ಸೇವಾ ಸಂಸ್ಥೆಗಳಾಗಿ ಬೆಳೆÉಯಬೇಕಾದ ಅನಿವಾರ್ಯತೆ ಇದೆ ಎಂದು ಮಾಜಿ ಸಚಿವರಾದ ಎಂ.ಸಿ. ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.ಮೈಸೂರಿನ ಬೃಂದಾವನ ಆಸ್ಪತ್ರೆಯ ಸಹಯೋಗದಲ್ಲಿ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ನೂತನವಾಗಿ ಸಜ್ಜುಗೊಳಿಸಲಾಗಿರುವ ತುರ್ತು ನಿಗಾ ಘಟಕ(ಐಸಿಯು)ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ವೈದ್ಯಕೀಯ ಎಂ.ಡಿ. ಶಿಕ್ಷಣ ಪಡೆಯಬೇಕಾದಲ್ಲಿ ಕೋಟ್ಯಾಂತರ

(ಮೊದಲ ಪುಟದಿಂದ) ಹಣವನ್ನು ವ್ಯಯಿಸಬೇಕಾದ ಪರಿಸ್ಥಿತಿ ಇದ್ದು, ಶಿಕ್ಷಣ ಪಡೆದ ಬಳಿಕ ಅದನ್ನು ಮರಳಿ ಪಡೆಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿರುವದು ವಿಷಾದಕರವೆಂದರು.

ಅಶ್ವಿನಿ ಆಸ್ಪತ್ರೆ 1970ರ ದಶಕದಲ್ಲಿ ಜಿಲ್ಲೆಯಲ್ಲಿ ಆದಾಯ ತೆರಿಗೆ ಆಯುಕ್ತರಾಗಿದ್ದ ಶೇಷಾದ್ರಿ ಅವರ ಪ್ರಯತ್ನದ ಫಲವಾಗಿ ಮತ್ತು ಪೇಜಾವರ ಸ್ವಾಮೀಜಿಗಳ ಮಾರ್ಗ ದರ್ಶ ನದಿಂದಾಗಿ ಪುರುಷೋತ್ತಮ ಪೈ ಸಹೋದರರು ದಾನವಾಗಿ ನೀಡಿದ ಜಾಗದಲ್ಲಿ ಸೇವಾ ಸಂಸ್ಥೆಯಾಗಿ ರೂಪುಗೊಳ್ಳಲು ಸಾಧ್ಯವಾಯಿತು. ಹೀಗಿದ್ದೂ ನಿರೀಕ್ಷಿತ ಬೆಳವಣಿಗೆಯನ್ನು ಆಸ್ಪತ್ರೆ ಕಾಣಲು ಸಾಧ್ಯವಾಗಿರಲಿಲ್ಲ. ಇದೀಗ ಆಸ್ಪತ್ರೆಯ ಆಡಳಿತ ಮಂಡಳಿಯ ಪ್ರಯತ್ನಗಳಿಂದ ಹಲವು ಸೌಲಭ್ಯಗಳೊಂದಿಗೆ ಅಭಿವೃದ್ಧಿಯನ್ನು ಕಾಣುತ್ತಿರುವದು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಲು ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಹೊಂದಿಕೊಳ್ಳುವದು ಕೂಡ ಅವಶ್ಯಕವೆಂದು ಎಂ.ಸಿ.ನಾಣಯ್ಯ ಹೇಳಿದರು.

ಕೆ.ಜಿ.ಬಿ. ನುಡಿ

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡಗಿಗೆ ಯಾವದಾದರು ಒಂದು ವಿಧದಲ್ಲಿ ಸೇವೆ ಸಲ್ಲಿಸಬೇಕೆನ್ನುವ ತುಡಿತ ಹೊಂದಿರುವ ಹೊರ ಜಿಲ್ಲೆಯಲ್ಲಿ ನೆಲೆಸಿರುವ ಸ್ಥಳೀಯರ ಆಸಕ್ತಿಯಿಂದ ಪ್ರಸ್ತುತ ಅಶ್ವಿನಿ ಆಸ್ಪತ್ರೆಯಲ್ಲಿ ಐಸಿಯು ಘಟಕ ಆರಂಭಗೊಂಡಿದೆ. ನಗರದ ವೈದ್ಯಕೀಯ ಕಾಲೇಜಿನ ವೈದ್ಯರ ಸೇವೆಯನ್ನು ಅಶ್ವಿನಿ ಆಸ್ಪತ್ರೆÉಗೆ ದೊರಕಿಸಲು ಪ್ರಯತ್ನಿಸುವದಾಗಿ ತಿಳಿಸಿದರು.

ಮೈಸೂರಿನ ಬೃಂದಾವನ ಆಸ್ಪತ್ರೆಯ ಪ್ರಮುಖರಾದ ಡಾ| ಮಾತಂಡ ಅಯ್ಯಪ್ಪ ಮಾತನಾಡಿ, ವೈದ್ಯರುಗಳೇ ಸೇರಿ ನಡೆಸುತ್ತಿರುವ ಬೃಂದಾವನ ಆಸ್ಪತ್ರೆಯ ಮೂಲಕ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ಅಶ್ವಿನಿ ಆಸ್ಪತ್ರೆಯಲ್ಲಿ ಐಸಿಯು ಘಟಕವನ್ನು ಆರಂಭಿಸಲಾಗಿದೆ. ಇದಕ್ಕೆ ಅಗತ್ಯವಾದ ಎಲ್ಲಾ ತಾಂತ್ರಿಕ ನೆರವನ್ನು ನಾವು ಒದಗಿಸುವದಲ್ಲದೆ, ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಜನರಿಗೆ ಸೇವೆ ತಲುಪುವಂತೆ ಮಾಡಲಾಗುತ್ತದೆ. ಮುಂದಿನ ಕೆಲವೇ ದಿನಗಳಲ್ಲಿ ಅಶ್ವಿನಿಯನ್ನು ಅತ್ಯುತ್ತಮ ಆಸ್ಪತ್ರೆಗಳಲ್ಲಿ ಒಂದಾಗಿ ರೂಪಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಅಶ್ವಿನಿ ಆಸ್ಪತ್ರೆ ಟ್ರಸ್ಟ್ ಕಾರ್ಯದರ್ಶಿ ಜಿ.ರಾಜೇಂದ್ರ ಅವರು ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರೋಗಿಗಳು ಸಂಕಷ್ಟಕ್ಕೆ ಸಿಲುಕುವದನ್ನು ತಪ್ಪಿಸುವಲ್ಲಿ ನೂತನ ಐಸಿಯು ಘಟಕ ಸಹಕಾರಿಯಾಗಲಿದೆ ಎಂದರು. ಈ ಘಟಕ ಡಾ| ಜನಾರ್ದನ್ ಅವರ ಜವಾಬ್ದಾರಿಯಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ ಎಂದು ಮಾಹಿತಿ ನೀಡಿದರು.

ಕಳೆದ ನಾಲ್ಕು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಅಶ್ವಿನಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕವನ್ನು ಆರಂಭಿಸಲಾಗಿದ್ದು, ಇದಕ್ಕೆ ಕೊಳವೆ ಬಾವಿಗೆ ಶಾಸಕ ಅಪ್ಪಚ್ಚು ರಂಜನ್ ಅವರು ನೆರವನ್ನು ಒದಗಿಸಿದ್ದಾರೆ. ಶಾಸಕ ಕೆ.ಜಿ. ಬೋಪಯ್ಯ ಅವರು ಆಸ್ಪತ್ರೆಯ ಅಭಿವೃದ್ಧಿಗೆ ಸರ್ಕಾರದಿಂದ ಈ ಹಿಂದೆ 16 ಲಕ್ಷ ನೆರವನ್ನು ಒದಗಿಸಿದ್ದಾರೆ. ಅದೇ ರೀತಿ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ಸಹಕಾರ ವನ್ನು ಮರೆಯುವಂತಿಲ್ಲ. ಪ್ರಸ್ತುತ ಆಸ್ಪತ್ರೆಗೆ ರೂ. 18 ಲಕ್ಷ ವೆಚ್ಚದ ಲಿಫ್ಟ್ ಮತ್ತು ಎಂಡೋ ಸ್ಕೋಪಿ ಅವಶ್ಯಕತೆ ಇರುವದಾಗಿ ಜಿ.ರಾಜೇಂದ್ರ ಅವರು ತಿಳಿಸಿದರು.

ಆಸ್ಪತ್ರೆಯ ಟ್ರಸ್ಟಿ ಕೆ.ಎಸ್.ದೇವಯ್ಯ ಮಾತನಾಡಿ, ಅಶ್ವಿನಿ ಆಸ್ಪತ್ರೆಯ ಅಭಿವೃದ್ಧಿಯಲ್ಲಿ ಎಲೆ ಮರೆಯ ಕಾಯಿಯಂತೆ ನಿರಂತರವಾಗಿ ಶ್ರಮಿಸುತ್ತಿರುವ ಬಿ.ಜಿ.ವಸಂತ್ ಅವರ ಸೇವೆಯನ್ನು ಸ್ಮರಿಸಿದರು.

ಸಿಎಂಒ ಆಗಿ ಡಾ|| ಮೋಹನ್ ಅಪ್ಪಾಜಿ

ಅಶ್ವಿನಿ ಆಸ್ಪತ್ರೆಯ ನೂತನ ಚೀಫ್ ಮೆಡಿಕಲ್ ಆಫೀಸರ್ ಆಗಿ ಡಾ| ಮೋಹನ್ ಅಪ್ಪಾಜಿ ಅವರನ್ನು ನಿಯುಕ್ತಿಗೊಳಿಸಲಾಗಿದ್ದು, ಅವರಿಗೆ ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು ಅಧಿಕಾರ ಪತ್ರವನ್ನು ಹಸ್ತಾಂತರಿಸಿದರು.

ಈ ಸಂದರ್ಭ ಐಎಂಎ ಜಿಲ್ಲಾಧ್ಯಕ್ಷರು ಹಾಗೂ ನೂತನ ಸಿಎಂಒ ಡಾ| ಮೋಹನ್ ಅಪ್ಪಾಜಿ ಮಾತನಾಡಿ, ಜನ ಸಾಮಾನ್ಯರಿಗೆ ವೈದ್ಯಕೀಯ ಸೇವೆ ಸುಲಭವಾಗಿ ದೊರಕುವಂತಾಗ ಬೇಕು ಎಂದರು. ಕೊಡಗಿನ ಹೊರ ಭಾಗದಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಜಿಲ್ಲೆಯ ಮಂದಿ ತಮ್ಮ ಜಿಲ್ಲೆಗೆ ಸೇವೆ ಸಲ್ಲಿಸಲು ಮುಂದೆ ಬರಬೆÉೀಕೆಂದು ಮನವಿ ಮಾಡಿದರು.

ಆಸ್ಪತ್ರೆಯ ಟ್ರಸ್ಟಿಗಳು ಹಾಗೂ ದಾನಿಗಳಾದ ಎಂ.ಎಂ.ತಮ್ಮಯ್ಯ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕವಿತಾ ಅವರ ಪ್ರಾಥರ್Àನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಟ್ರಸ್ಟಿ ಸಂಪತ್ ಕುಮಾರ್ ಸ್ವಾಗತಿಸಿ, ಆಸ್ಪತ್ರೆಯ ಆಡಳಿತಾಧಿಕಾರಿ ಟಿ.ಆರ್. ಶೆಣೈ ವಂದಿಸಿದರು. ಟ್ರಸ್ಟಿ ಮಂಡೀರ ದೇವಿ ಪೂಣಚ್ಚ ಉಪಸ್ಥಿತರಿದ್ದರು.