ಮಡಿಕೇರಿ, ಏ. 16: ಕೊಡಗಿನ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಖಾಲಿ ಇರುವ ಸರಕಾರಿ ಭೂಮಿಯನ್ನು ಪತ್ತೆ ಹಚ್ಚಿ, ಭೂಮಾಪನದೊಂದಿಗೆ ಸರಹದ್ದು ಗುರುತಿಸುವ ಮೂಲಕ ಬಡವರಿಗೆ ಹಂಚಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಆದೇಶಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರದ ರಜೆಯ ಗುಂಗಿನಲ್ಲಿದ್ದ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಗ್ರಾಮ ಲೆಕ್ಕಿಗರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಭೂಮಾಪನ ಸಿಬ್ಬಂದಿ ಜಂಟಿ ಸಮೀಕ್ಷೆ ನಡೆಸಿ, ತಕ್ಷಣದಿಂದಲೇ ಖಾಲಿ ಜಾಗದ ಪಟ್ಟಿ ತಯಾರಿಸಬೇಕೆಂದು ಸೂಚಿಸಿದರು.

ಗ್ರಾ.ಪಂ. ಮಟ್ಟದ ಪಟ್ಟಿಯನ್ನು ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ಮೂಲಕ ಕೂಡಲೇ ಜಿಲ್ಲಾಧಿಕಾರಿಗಳಿಗೆ ರವಾನಿಸುವದರೊಂದಿಗೆ, ಭೂ ರಹಿತರಿಗೆ ಮತ್ತು ನಿವೇಶನ ರಹಿತರಿಗೆ ಜಾಗ ಹಂಚಲು ಕಾರ್ಯೋನ್ಮುಖ ರಾಗುವಂತೆ ಕಾಗೋಡು ತಿಮ್ಮಪ್ಪ ಸ್ಪಷ್ಟನೆ ನೀಡಿದರು.

‘ ಸಿ &amdiv; ಡಿ’ - ಗೋಮಾಳ : ಗ್ರಾಮೀಣ ಭಾಗದಲ್ಲಿರುವ ‘ಸಿ’ ಎಂಡ್ ‘ಡಿ’ ಜಮೀನು ಹಾಗೂ ಗೋಮಾಳ ವನ್ನು ಕೂಡ, ನಿವೇಶನ ರಹಿತರಿಗೆ ಹಂಚಲು ಕಾನೂನಾತ್ಮಕ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ ಕಂದಾಯ ಸಚಿವರು, ಈ ಬಗ್ಗೆ ತೊಡಕುಗಳಿದ್ದಲ್ಲಿ ಸರಕಾರದಿಂದ ತುರ್ತು ನಿವಾರಣೆ ಮಾಡಲಾಗುವದು ಎಂದರು.

ಕಾಫಿ ಉದ್ದಿಮೆ ಪಟ್ಟಿಮಾಡಿ : ಕಾಫಿಯನ್ನು ಕೃಷಿಯಿಂದ ಹೊರತು ಪಡಿಸಿರುವ ಉದ್ದಿಮೆ ಅಥವಾ ಕೈಗಾರಿಕೆ ಎಂದು ಪರಿಗಣಿಸಲಾಗಿದೆ ಎಂದು ಸ್ಪಷ್ಟಪಡಿಸಿದ ಸಚಿವರು, ಜಿಲ್ಲೆಯಲ್ಲಿ ಎಷ್ಟು ಕಾಫಿ ತೋಟಗಳಿಂದ ಸರಕಾರಕ್ಕೆ ಆದಾಯ ನೀಡಲಾಗುತ್ತಿದೆ ಎಂದು ಮಾಹಿತಿ ಕಲೆ ಹಾಕಬೇಕೆಂದು ಕಾರ್ಮಿಕ ಇಲಾಖೆಗೆ ಸೂಚಿಸಿದರು.

ಅಲ್ಲದೆ ತೋಟ ಕಾರ್ಮಿಕರನ್ನು ಗುರುತಿಸಿ ಅವರಿಗೆ ಕಾನೂನಿನಂತೆ, ನಿಯಮಾನುಸಾರ ಉದ್ದಿಮೆದಾರರು ವೇತನ, ಭತ್ಯೆ, ವರ್ಷಾಸನ, ಆರೋಗ್ಯಮಿಮೆ

(ಮೊದಲ ಪುಟದಿಂದ) ಇತ್ಯಾದಿ ನೀಡುತ್ತಿದ್ದಾರೆಯೇ ಎಂದು ನಿಗಾ ವಿಡುವಂತೆಯೂ, ಸಂಬಂಧಿಸಿದ ಅಧಿಕಾರಿಗೆ ಸಲಹೆಯಿತ್ತರು.

ಖಾಲಿ ಹುದ್ದೆ ಭರ್ತಿ: ಜಿಲ್ಲೆಯಲ್ಲಿ ಕಾರ್ಮಿಕ ಕಲ್ಯಾಣ ಅಧಿಕಾರಿ ಹುದ್ದೆ ಸೇರಿದಂತೆ ಭೂಮಾಪನ ಇಲಾಖೆ ಹಾಗೂ ಇತರ ಖಾಲಿಯಿರುವ ಸ್ಥಾನ ಗಳನ್ನು ಗುತ್ತಿಗೆ ಮೂಲಕ ಭರ್ತಿಗೊಳಿಸುತ್ತ ನಿವೃತ್ತ ಉದ್ಯೋಗಿ ಗಳನ್ನು ಬಳಸಿಕೊಳ್ಳುವಂತೆ ಸಚಿವರು ನಿರ್ದೇಶಿಸಿದರು.

ಪಾರದರ್ಶಕತೆ ಅಗತ್ಯ : ಕಂದಾಯ ಇಲಾಖೆಯ ಅಧಿಕಾರಿಗಳು ಜನರ ಸಮಸ್ಯೆ ಪರಿಹರಿಸುವಲ್ಲಿ ಪಾರ ದರ್ಶಕತೆ ಹಾಗೂ ಸ್ವಚ್ಛ ರೀತಿಯಿಂದ ಕೆಲಸ ನಿರ್ವಹಿಸುವಂತೆ ಕಿವಿಮಾತು ಹೇಳಿದ ಕಾಗೋಡು ತಿಮ್ಮಪ್ಪ, ಶೀಘ್ರವಾಗಿ ಕಡತಗಳ ವಿಲೇವಾರಿ ಯೊಂದಿಗೆ ಸಾರ್ವಜನಿಕರು ವಿನಾಕಾರಣ ಅಲೆಯದಂತೆ ನೋಡಿಕೊಳ್ಳಬೇಕೆಂದು ಕಟ್ಟಪ್ಪಣೆ ಮಾಡಿದರು.

ಅರಣ್ಯ ವಿಚಾರ

ದಿಡ್ಡಳ್ಳಿ ಸಹಿತ ಯಾವದೇ ಅರಣ್ಯ ಮೀಸಲು ಪ್ರದೇಶದಲ್ಲಿ ನಿವೇಶನ ಒದಗಿಸುವದು ಅತ್ಯಂತ ಅಪಾಯ ವೆಂದು ಸೂಚ್ಯವಾಗಿ ನುಡಿದಿರುವ ರಾಜ್ಯ ಕಂದಾಯ ಸಚಿವರು, ಕೇಂದ್ರ ಸರಕಾರದ ಕಟ್ಟು ನಿಟ್ಟಿನ ಕಾನೂನು ಉಲ್ಲಂಘಿಸಲು ಅಸಾಧ್ಯವೆಂದು ನೆನಪಿಸಿದ್ದಾರೆ. ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಇಂದು ಸಭೆ ಬಳಿಕ ಮಾಧ್ಯಮ ದೊಂದಿಗೆ ಮಾತನಾಡಿದ ಸಚಿವ ಕಾಗೋಡು ತಿಮ್ಮಪ್ಪ, ದಿಡ್ಡಳ್ಳಿಯಲ್ಲಿ ನಿವೇಶನ ಬೇಕೆಂಬ ಕೆಲವರ ಪ್ರಸ್ತಾವನೆ ಕುರಿತು ಕೇಳಲಾದ ಪ್ರಶ್ನೆಗೆ ಮೇಲಿನಂತೆ ಉತ್ತರ ನೀಡಿದರು. ಪಾಲೆಮಾಡುವಿನ ಮೈದಾನವನ್ನು ಸಂಬಂಧಪಟ್ಟವರಿಗೆ ನೀಡುವದ ರೊಂದಿಗೆ, ಬೇರೆಡೆ ಸ್ಮಶಾನ ಜಾಗ ಗುರುತಿಸಿ ಕೊಡುವಂತೆಯೂ ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಮಡಿಕೇರಿ ತಾಲೂಕು ಕಚೇರಿಯಲ್ಲಿ ಅಲಭ್ಯವಾಗಿರುವ ಭೂ ದಾಖಲೆಗಳನ್ನು ಗಣಕ ಯಂತ್ರದೊಂದಿಗೆ ಸಿದ್ಧಗೊಳಿಸಿ, ಸಾರ್ವಜನಿಕರಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಆದೇಶಿಸಿದರು. ಯಾವದೇ ಗೊಂದಲ ವಿದ್ದರೂ, ಸೌಹಾರ್ದ ಯುತ ವಾಗಿ ಇತ್ಯರ್ಥ ಪಡಿಸಿಕೊಳ್ಳಬೇಕೆಂದು ತಿಳಿ ಹೇಳಿದ ಕಾಗೋಡು, ಯಾರೂ ಜೇನುಗೂಡಿಗೆ ಕಲ್ಲು ಹಾಕುವ ಕೆಲಸ ಮಾಡದಿರುವದು ಒಳಿತು ಎಂದರು.

ಸಾಂತ್ವನದ ನುಡಿ

ಇಂದಿನ ಸಭೆಯಲ್ಲಿ ಪಾಲೆಮಾಡು, ಚೆರಿಯಪರಂಬು ಸೇರಿದಂತೆ ಜಿಲ್ಲೆಯ ವಿಭಿನ್ನ ಸಮಸ್ಯೆಗಳನ್ನು ಹೊತ್ತು ತಂದಿದ್ದ ಸಾರ್ವಜನಿಕರಿಗೆ ಸಾಂತ್ವನದ ನುಡಿಯಾಡಿದ ಸಚಿವರು, ನ್ಯಾಯ ರೀತಿ ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಗಳ ಮುಂದಾಗಬೇಕೆಂದು ಮರು ಆದೇಶ ನೀಡಿದರು. ಸಭೆಯಲ್ಲಿ ಪ್ರಬಾರ ಜಿಲ್ಲಾಧಿಕಾರಿ ಚಾರುಲತ ಸೋಮಲ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ನಿಗಮ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಪಾಲ್ಗೊಂಡಿದ್ದರು. ನೂರಾರು ಸಭಿಕರೊಂದಿಗೆ ಮಾಜಿ ಸಚಿವೆ ಸುಮಾವಸಂತ್, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಮೊದಲಾದವರು ಆಸೀನರಾಗಿದ್ದು ಕಂಡು ಬಂತು.