ಕುಶಾಲನಗರ, ಏ. 16: ದಿಡ್ಡಳ್ಳಿಯಲ್ಲಿ ತೆರವುಗೊಳಿಸಲಾಗಿರುವ ನಿರಾಶ್ರಿತರಿಗೆ ಜಿಲ್ಲಾಡಳಿತ ಒದಗಿಸಿರುವ ಪುರ್ನವಸತಿ ಪ್ರದೇಶಗಳಲ್ಲಿ ತಕ್ಷಣ ಹಕ್ಕುಪತ್ರ ನೀಡಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಸಚಿವರು ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಕುಶಾಲನಗರ ಹೋಬಳಿಯ ಬಸವನಹಳ್ಳಿ ಗ್ರಾಮದ ಪುರ್ನವಸತಿ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಿಡ್ಡಳ್ಳಿಯಲ್ಲಿ ಎಲ್ಲಾ ನಿರಾಶ್ರಿತರಿಗೆ ಪುರ್ನವಸತಿ ಕಲ್ಪಿಸಲು ಅಸಾಧ್ಯ ಎಂದು ಸ್ಪಷ್ಟ ನಿಲುವು ವ್ಯಕ್ತಪಡಿಸಿದ ಸಚಿವರು, ಜಿಲ್ಲಾಡಳಿತ ಕೊಡಗು ಜಿಲ್ಲೆಯ 3 ಕಡೆ ಗುರುತಿಸಿರುವ ಪುರ್ನವಸತಿ ಬಡಾವಣೆಗಳು ಯೋಗ್ಯವಾಗಿದ್ದು ಇದರ ಸದುಪಯೋಗವನ್ನು
(ಮೊದಲ ಪುಟದಿಂದ) ಅರ್ಹ ಗಿರಿಜನ ಕುಟುಂಬಗಳು ಪಡೆಯಬೇಕು ಎಂದರು.
ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ತೆರವುಗೊಳಿಸಿದ ಜಾಗ ಕಂದಾಯ ಇಲಾಖೆಗೆ ಸೇರಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅರಣ್ಯಕ್ಕೆ ಸೇರಿದ್ದರೆ ಯಾವದೇ ರೀತಿಯಲ್ಲಿ ಆ ಪ್ರದೇಶದಲ್ಲಿ ನಿವೇಶನ ಕಲ್ಪಿಸಲು ಅಸಾಧ್ಯ ಎಂದಿದ್ದಾರೆ.
ಹೋರಾಟಗಾರರು ನಿರಾಶ್ರಿತರನ್ನು ತಪ್ಪುಹಾದಿಗೆ ಕೊಂಡೊಯ್ಯದಂತೆ ಮಾಧ್ಯಮಗಳು ಎಚ್ಚರವಹಿಸಬೇಕು ಎಂದ ಸಚಿವ ಕಾಗೋಡು ತಿಮ್ಮಪ್ಪ, ಜಿಲ್ಲಾಡಳಿತ ತಕ್ಷಣ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲಿದ್ದ ಪ್ರಬಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಸೂಚಿಸಿದರು. ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ದಿಡ್ಡಳ್ಳಿ ಪ್ರಕರಣದ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದು ಸತ್ಯಾಂಶ ಕೂಡ ತನ್ನ ಗಮನಕ್ಕೆ ಬಂದಿದೆ ಎಂದ ಸಚಿವರು, ಕಾಫಿ ತೋಟಗಳಲ್ಲಿ ಕೆಲಸ ನಿರ್ವಹಿಸಿಕೊಂಡು ಲೈನ್ಮನೆಯಲ್ಲಿ ವಾಸವಿರುವ ಕುಟುಂಬಗಳಿಗೆ ಯಾವುದೇ ರೀತಿಯಲ್ಲಿ ಪುರ್ನವಸತಿ ಕಲ್ಪಿಸಲು ಅಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗುಡ್ಡೆಹೊಸೂರು ಗ್ರಾಮಪಂಚಾಯ್ತಿ ಅಧ್ಯಕ್ಷರು ಹಾಗೂ ಸ್ಥಳೀಯ ಪ್ರಮುಖರು ತಮ್ಮ ಗ್ರಾಮದಲ್ಲಿ ವಸತಿ ರಹಿತರು ಇದ್ದು ಅವರ ಅರ್ಜಿಗಳ ವಿಲೇವಾರಿ ಇನ್ನೂ ಆಗಿಲ್ಲ ಎಂದು ಸಚಿವರ ಗಮನ ಸೆಳೆದಾಗ ಎಲ್ಲರಿಗೂ ವಸತಿ ಕಲ್ಪಿಸುವ ಯೋಜನೆ ಸರಕಾರ ಕೈಗೊಂಡಿದೆ. ಈ ನಿಟ್ಟಿನಲ್ಲಿ ನಿಯಮಾನುಸಾರ ಅರ್ಜಿಯ ವಿಲೇವಾರಿ ಸದ್ಯದಲ್ಲಿಯೇ ಆಗಲಿದೆ ಎಂದು ಭರವಸೆ ನೀಡಿದರು.
ಬಸವನಹಳ್ಳಿ ಗ್ರಾಮದ ಸರ್ವೆ ನಂ 4 ಮತ್ತು 5 ರಲ್ಲಿ 6.7 ಎಕರೆ ಬಡಾವಣೆಯಲ್ಲಿ 181 ನಿವೇಶನಗಳು ಇದ್ದು ಇದರೊಂದಿಗೆ ಬ್ಯಾಡಗೊಟ್ಟದಲ್ಲಿ 10 ಎಕರೆ ವಿಸ್ತೀರ್ಣದಲ್ಲಿ 184 ನಿವೇಶನಗಳು ದಿಡ್ಡಳ್ಳಿ ಅರಣ್ಯ ಪ್ರದೇಶದಿಂದ ತೆರವುಗೊಳಿಸಿರುವ ಗಿರಿಜನ ಕುಟುಂಬಗಳಿಗೆ ಪುರ್ನವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ದಿಡ್ಡಳ್ಳಿ ನಿರಾಶ್ರಿತರಿಗೆ ಬಸವನಹಳ್ಳಿಯಲ್ಲಿ ಪುರ್ನವಸತಿ ಕಲ್ಪಿಸುವ ಸರಕಾರದ ನಿರ್ಧಾರವನ್ನು ಪ್ರತಿಭಟಿಸುವದಾಗಿ ಸೋಮವಾರಪೇಟೆ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರ ತಿಳಿಸಿದ್ದಾರೆ. ಸ್ಥಳೀಯ ವಸತಿ ರಹಿತರಿಗೆ ಪ್ರಥಮ ಆದ್ಯತೆ ನೀಡುವಂತಾಗಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸಂದರ್ಭ ಪ್ರಬಾರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಉಪವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್, ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಗುಡ್ಡೆಹೊಸೂರು ಗ್ರಾಮಪಂಚಾಯ್ತಿ ಅಧ್ಯಕ್ಷೆ ಭಾರತಿ, ಪ್ರಮುಖರಾದ ಲೋಕೇಶ್ ಕುಮಾರ್, ಆರ್.ಕೆ.ಚಂದ್ರ, ಬಿ.ಎಸ್.ಚಂದ್ರಶೇಖರ್, ಯಾಕೂಬ್ ಮತ್ತಿತರರು ಇದ್ದರು.
ಮುಖ್ಯಮಂತ್ರಿಗೆ ವರದಿ
ದಿಡ್ಡಳ್ಳಿಯ ಆದಿವಾಸಿಗಳನ್ನು ತೆರವುಗೊಳಿಸಿದ ಜಾಗದ ದಾಖಲೆ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೆರೆಡು ದಿನಗಳಲ್ಲಿ ಲಭ್ಯವಾಗಲಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಅವರು ಬಸವನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ದಿಡ್ಡಳ್ಳಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ನೀಡಲಾಗುವದು ಎಂದರು. ಅಲ್ಲದೆ, ದಿಡ್ಡಳ್ಳಿ ನಿರಾಶ್ರಿತರಿಗೆ ಜಿಲ್ಲೆಯ 3 ಕಡೆ ಪರ್ಯಾಯ ಜಾಗ ಕಲ್ಪಿಸಲಾಗಿದ್ದು ಜಿಲ್ಲಾಡಳಿತ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ. ನಿರಾಶ್ರಿತರಿಗೆ 2 ತಿಂಗಳ ಅವಧಿಯೊಳಗೆ ಮನೆ ನಿರ್ಮಾಣ ಮಾಡಿಕೊಡಲಾಗುವದು. ತಕ್ಷಣ ಹಕ್ಕುಪತ್ರ ಪಡೆದುಕೊಳ್ಳಬೇಕು. ಯಾವದೇ ರೀತಿಯ ಪ್ರಚೋದನೆಗೆ ನಿರಾಶ್ರಿತರು ಒಳಗಾಗಬಾರದು ಎಂದು ಕಿವಿಮಾತು ಹೇಳಿದರು.