ಸೋಮವಾರಪೇಟೆ,ಏ.16: “ಕಳೆದ 25 ವರ್ಷಗಳಿಂದ ಏನ್ ಮಾಡ್ತಿದ್ರೀ? ಮನೆ ಕಟ್ಟಿಕೊಂಡು ಹಕ್ಕುಪತ್ರಕ್ಕಾಗಿ ಈಗ ಅರ್ಜಿ ಕೊಡ್ತಿದ್ದೀರಾ? ಜೇಬಲ್ಲಿ ಎರಡೆರಡು ಮೊಬೈಲ್ ಇಡೋಕಾಗುತ್ತೆ.. ಅಷ್ಟೊಂದು ಬಿಜಿನಾ? ನಾನೇ ಒಂದು ಮೊಬೈಲ್ ಇಡ್ಕೊಂಡಿದೀನಿ.., ತಾಲೂಕು ಆಫೀಸಲ್ಲಿ ನಿಮ್ ಅರ್ಜಿ ಇಸ್ಕಂಡಿಲ್ಲ ಅಂದ್ರೆ ಅದರ ಎದುರು ಬಿಸಾಕಿ ಬನ್ನಿ.., ಅದ್ ಯಾಕ್ ತಗಳಲ್ಲ ಅಂತ ನಾನ್ ನೋಡ್ತೀನಿ..,”
ಭಾನುವಾರ ಬಜೆಗುಂಡಿ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರಿಗೆ ಸಾರ್ವಜನಿಕರು ಮನವಿಗಳ ಮಹಾಪೂರವನ್ನೇ ಹರಿಸಿದರು. ಇದರಲ್ಲಿ ಹೆಚ್ಚಿನ ಮನವಿಗಳಲ್ಲಿ ಹಕ್ಕುಪತ್ರದ ಬೇಡಿಕೆಯಿದ್ದುದನ್ನು ಅರಿತ ಸಚಿವರು ಮೇಲಿನಂತೆ ನಯ ವಾಗಿಯೇ ಕಟುನುಡಿಯಾಡಿದರು.
ಯಾರದೋ ಒತ್ತಡಕ್ಕೆ ಮಣಿದು ಹಕ್ಕುಪತ್ರ ವಿತರಿಸಲು ಕಂದಾಯ ಇಲಾಖೆ ವಿಳಂಬ ಮಾಡುತ್ತಿದೆ ಎಂದು ಸಾರ್ವಜನಿಕರು ಹೇಳಿದರು. ಇದರಿಂದ ಅಸಮಧಾನಗೊಂಡ ಸಚಿವರು,
(ಮೊದಲ ಪುಟದಿಂದ) ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ರನ್ನು ತರಾಟೆಗೆ ತೆಗೆದುಕೊಂಡು, ವಿಳಂಬಕ್ಕೆ ಸೂಕ್ತ ಕಾರಣ ಕೊಡದಿದ್ದಾಗ, ನಾಳೆ ಯಿಂದಲೇ ಹಕ್ಕುಪತ್ರ ವಿತರಣೆ ಮಾಡಬೇಕು ಎಂದು ಸೂಚಿಸಿದರು.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದಲ್ಲಿ ಕಳೆದ 40 ವರ್ಷಗಳಿಂದ ವಾಸವಿರುವ ನಿವಾಸಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಬಜೆಗುಂಡಿ ಗ್ರಾಮದ ಸರ್ವೆ ನಂ 95/1 ರಲ್ಲಿ 68 ಎಕರೆ ಭೂಮಿ ಊರುಡುವೆ ಎಂದು ಕಾರಣ ನೀಡಿ, ಕಂದಾಯ ಇಲಾಖೆ ಅರ್ಜಿ ಯನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದರು.
ಅರಣ್ಯ ಭೂಮಿಯನ್ನು ಗ್ರಾಮದ ಅಭಿವೃದ್ಧಿಗೆ ನೀಡಲು ಅವಕಾಶವಿದ್ದು, ಪ್ರತಿಯೊಬ್ಬರು ಕಂದಾಯ ಇಲಾಖೆಗೆ 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ, ಹಕ್ಕುಪತ್ರ ಪಡೆಯಲು ಅವಕಾಶವಿದೆ ಎಂದು ಸಚಿವರು ಹೇಳಿದರು.
ಈ ಮಣ್ಣಿನಲ್ಲಿ ಹುಟ್ಟಿದವನಿಗೆ ಭೂಮಿಯ ಹಕ್ಕು ಇದೆ. ಅಂತಹ ಹಕ್ಕು ಎಲ್ಲಾ ಜಾತಿ ಜನಾಂಗದವರಿಗೂ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಭೂಮಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ್ದರೂ, ಅಧಿಕಾರಿಗಳ ಅಸಡ್ಡೆಯಿಂದ ಸಮಸ್ಯೆಯಾಗಿದೆ ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಸಂದರ್ಭ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಹಾಗೂ ಯಡವನಾಡು ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಣೆ ಮಾಡಲು ಸಚಿವರು ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸನ್ಮಾನಿಸಿದರು.
ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ, ಸದಸ್ಯ ಯಾಕೂಬ್, ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜೆ.ಆರ್.ಪುಷ್ಪಲತಾ, ಪ್ರಮುಖರಾದ ಕೆ.ಎಂ.ಲೋಕೇಶ್, ನಂದಕುಮಾರ್ ಮತ್ತಿತರರು ಇದ್ದರು.
ಶನಿವಾರಸಂತೆ: ಶನಿವಾರಸಂತೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಈ ಭಾಗದ ಸಾರ್ವಜನಿಕ ಕುಂದುಕೊರತೆ ಆಲಿಸಿ, ಅರ್ಜಿಗಳನ್ನು ಸ್ವೀಕರಿಸಿದರು. ಬೆಂಗಳೂರಿಗೆ ತೆರಳುವ ಮಾರ್ಗಮಧ್ಯೆ ಸಚಿವರು ಭೇಟಿ ನೀಡಿದ್ದರು.