ಮಡಿಕೇರಿ ಡಿ.27 : ಜಿಲ್ಲೆಯ ಗ್ರಾಮೀಣ ಭಾಗಕ್ಕೆ 94 ಸಿ ಹಾಗೂ ನಗರ ಭಾಗಕ್ಕೆ 94 ಸಿಸಿ ಯಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಸರಕಾರ 2017 ಜ.21 ರವರೆಗೆ ಕಾಲಾವಕಾಶ ನೀಡಿದ್ದು, ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವವರು ತಕ್ಷಣ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಮನವಿ ಮಾಡಿದೆ.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಬಾರ ಅಧ್ಯಕ್ಷ ಟಿ.ಪಿ.ರಮೇಶ್ 94 ಸಿ ಹಾಗೂ 94 ಸಿಸಿ ಯಡಿ ಅರ್ಜಿ ಸಲ್ಲಿಸಲು ಸರಕಾರ ಈ ಹಿಂದೆ ಡಿ.20 ರವರೆಗೆ ಕಾಲವಕಾಶ ನೀಡಿತ್ತು. ಆದರೆ ಸಾಕಷ್ಟು ಬಡಕುಟುಂಬಗಳು ತಮ್ಮ ನಿವೇಶನವನ್ನು ಸಕ್ರಮ ಗೊಳಿಸಿಕೊಳ್ಳಲು ಅರ್ಜಿ ಸಲ್ಲಿಸದೆ ಇರುವದರಿಂದ ಕಾಲಾವಕಾಶವನ್ನು ವಿಸ್ತರಿಸಲಾಗಿದೆ ಎಂದರು. ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಗ್ರಾಮೀಣ ಮತ್ತು ನಗರ ಪ್ರದೇಶಗಳ ಅರ್ಹ ಫಲಾನುಭವಿಗಳಿಗೆ ಈ ಬಗ್ಗೆ ಮಾಹಿತಿ ಒದಗಿಸಿ ಅರ್ಜಿ ಸಲ್ಲಿಸಲು ಪ್ರೇರೇಪಿಸುವಂತೆ ಕರೆ ನೀಡಿದರು.

ದಿಡ್ಡಳ್ಳಿಯಲ್ಲಿ ನಿರಾಶ್ರಿತರಾದ ಆದಿವಾಸಿಗಳ ಹೋರಾಟಕ್ಕೆ ಸ್ಪಂದಿಸಿ ಪರ್ಯಾಯ ನಿವೇಶನ, ವಸತಿ ಮತ್ತು ತಾತ್ಕಾಲಿಕ ಸೌಲಭ್ಯಗಳನ್ನು ನೀಡುವ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು

(ಮೊದಲ ಪುಟದಿಂದ) ಅಭಿನಂದನಾರ್ಹರು ಎಂದು ಅಭಿಪ್ರಾಯಪಟ್ಟ ಟಿ.ಪಿ.ರಮೇಶ್ ಜಿಲ್ಲೆಯಲ್ಲಿರುವ ನಿವೇಶನ ರಹಿತ ಅರ್ಹ ಫಲಾನುಭವಿಗಳನ್ನು ಪತ್ತೆ ಹಚ್ಚಿ ಸರಕಾರಿ ಜಾಗದಲ್ಲಿ ಬಡಾವಣೆಗಳನ್ನು ನಿರ್ಮಿಸಿ ವಸತಿ ಹಂಚುವ ಕಾರ್ಯವನ್ನು ತ್ವರಿತವಾಗಿ ಜಿಲ್ಲಾ ಪಂಚಾಯತ್ ಮಾಡಬೇಕೆಂದರು. ಸದ್ಯದಲ್ಲಿಯೇ ನಡೆಯಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಎಲ್ಲಾ ನಾಯಕರು ಹಾಗೂ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕೆಂದು ಕರೆ ನೀಡಿದರು.

ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾಗಳಿಗೆ ಖಾಯಂ ಅನುದಾನ ಸಿಗುವ ಹಾಗೆ 2016-17 ನೇ ಸಾಲಿನ ಮುಂಗಡ ಪತ್ರದಲ್ಲಿ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿಗಳಲ್ಲಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡಲಾಗಿದ್ದು, ಇದು ಮುಂದಿನ ಸಾಲಿನಲ್ಲಿ ಕಾರ್ಯಗತವಾಗುವ ಸಾಧ್ಯತೆಗಳಿದೆ ಎಂದು ಟಿ.ಪಿ.ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ ಮಾತನಾಡಿ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಜನರ ಅಹವಾಲು ಸ್ವೀಕರಿಸಿ, ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುವದಾಗಿ ತಿಳಿಸಿದರು.

ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ಜಿಲ್ಲಾ ಸಮಿತಿ ಹಾಗೂ ಬ್ಲಾಕ್ ಸಮಿತಿ ಪದಾಧಿಕಾರಿಗಳ ಪಟ್ಟಿಯನ್ನು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು ವಲಯ ಕಾಂಗ್ರೆಸ್ ಸಮಿತಿಗಳ ಪದಾಧಿಕಾರಿಗಳ ಪಟ್ಟಿಯನ್ನು 2017 ಜ.25 ರೊಳಗೆ ಸಲ್ಲಿಸಬೇಕು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯನ್ನು ಪ್ರಬಲವಾಗಿ ಸಂಘಟಿಸಿ ಗ್ರಾಮೀಣ ಪ್ರದೇಶದ ಜನತೆಗೆ ಸರಕಾರದ ಅಭಿವೃದ್ಧಿ ಪರವಾದ ಕಾರ್ಯಗಳನ್ನು ತಲುಪಿಸಬೇಕು ಮತ್ತು ಜ.15 ರೊಳಗೆ ಸಂಘಟಕರ ಹಾಗೂ ಸಂಯೋಜಕರ ಕಾರ್ಯಾಗಾರ ನಡೆಸಲು ಮತ್ತು ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನವನ್ನು ತಾ.28 ರಂದು (ಇಂದು) ಬೆಳಗ್ಗೆ 11 ಗಂಟೆಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲು ಸಭೆ ನಿರ್ಧರಿಸಿತು.

ಸಭೆಯಲ್ಲಿ ಹಿರಿಯ ಉಪಾಧ್ಯಕ್ಷÀ ಪಿ.ಕೆ.ಪೊನ್ನಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಜಿಲ್ಲಾ ವಕ್ತಾರ ಕೆ.ಕೆ.ಮಂಜುನಾಥ್ ಕುಮಾರ್, ಉಪಾಧ್ಯಕ್ಷರುಗಳಾದ ಪೊಕುಟ್ಟಿ ಹಾಜಿ, ರಾಜಮ್ಮ ರುದ್ರಯ್ಯ, ನಟೇಶ್ ಗೌಡ, ಜೋಸೆಫ್, ಶ್ಯಾಂ, ಬ್ಲಾಕ್ ಅಧ್ಯಕ್ಷರುಗಳಾದ ಕೆ.ಎಂ.ಗಣೇಶ್, ಅಬ್ದುಲ್ ಸಲಾಂ, ರಮಾನಾಥ್, ಪುಟ್ಟಲಕ್ಷ್ಮಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರ ಮೈನಾ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ವಿ.ಪಿ.ಶಶಿಧರ್, ಪ್ರಮುಖರಾದ ಎ.ಕೆ.ಹಕೀಂ, ಪುರುಷೋತ್ತಮ, ಸೂದನ ಈರಪ್ಪ, ಸುರೇಶ್, ಜಯಂತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.