ಕೂಡಿಗೆ, ಅ. 28: ಇಲ್ಲಿಗೆ ಸಮೀಪದ ಮದಲಾಪುರ, ಬ್ಯಾಡಗೊಟ್ಟ ಮಾರ್ಗವಾಗಿ ಸೀಗೆಹೊಸೂರು, ಯಲಕನೂರು ರಸ್ತೆ ಸೋಮವಾರಪೇಟೆಗೆ ತೆರಳಲು ಹತ್ತಿರವಾದ ರಸ್ತೆಯಾಗಿದ್ದು, ಈ ರಸ್ತೆಯು ತೀರಾ ಹದಗೆಟ್ಟಿರುವದಲ್ಲದೆ, ದ್ವಿಚಕ್ರ ವಾಹನ, ಸಾರ್ವಜನಿಕರು ತಿರುಗಾಡಲು ಸಾಧ್ಯವಾಗದ ಸ್ಥಿತಿಯಾದ ಈ ರಸ್ತೆ ಕಳೆದ 10 ವರ್ಷಗಳಿಂದಲೂ ಒಂದಲ್ಲೊಂದು ಭರವಸೆಗಳ ನಡುವೆ ಸಾಗುತ್ತಾ ಬಂದಿದ್ದರೂ ಕಾಮಗಾರಿ ಮುಕ್ತಿ ಕಾಣದಂತಾಗಿದೆ.

ಇನ್ನೊಂದೆಡೆ ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಓಡಾಡುವದರ ಜೊತೆಗೆ ಯಲಕನೂರು, ಸೀಗೆಹೊಸೂರು ಸಮೀಪದಲ್ಲಿ ಕಲ್ಲುಕೋರೆಗಳಿದ್ದು, ಕಲ್ಲುಗಳನ್ನು ತುಂಬಿಸಿದ 50 ಕ್ಕೂ ಅಧಿಕ ಲಾರಿಗಳು ಈ ಮಾರ್ಗದಲ್ಲೇ ಚಲಿಸುವದರಿಂದ ಸಾಧಾರಣವಾಗಿ ಇದ್ದ ರಸ್ತೆ ಕಳೆದ 5 ವರ್ಷಗಳಿಂದ ತೀರಾ ಹದಗೆಟ್ಟಿದೆ. ಅಲ್ಲದೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಅನೇಕ ಬಾರಿ ಜಿಲ್ಲೆಯ ಸಂಬಂಧಪಟ್ಟ ಇಲಾಖೆಯವರಿಗೂ, ಜಿಲ್ಲಾಧಿಕಾರಿ ಗಳಿಗೂ ಪತ್ರ ಮೂಲಕ ವ್ಯವಹರಿಸಲಾಗಿದೆ ಎಂದು ಸ್ಥಳೀಯ ಮುಖಂಡರಾದ ಜಿ.ಎಲ್. ನಾರಾಯಣ್ ಸೇರಿದಂತೆ ಈ ವ್ಯಾಪ್ತಿಯ ಸಾರ್ವಜನಿಕರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಅಲ್ಲದೆ ಕಲ್ಲು ತುಂಬಿದ ಲಾರಿಗಳು ಚಲಿಸುವದರಿಂದ ಕಲ್ಲುಕೋರೆಯಿಂದ ಮುಖ್ಯ ರಸ್ತೆಗೆ ಬರುವ ಮಾರ್ಗದಲ್ಲಿ 6 ಗ್ರಾಮಗಳು ಬರುತ್ತವೆ. ಈ ಗ್ರಾಮಗಳ ರಸ್ತೆ ಬದಿಯ ಮನೆಗಳು ಧೂಳುಮಯವಾಗುವದರ ಜೊತೆಗೆ ಧೂಳಿನಿಂದಾಗಿ ಈ ವ್ಯಾಪ್ತಿಯ ಜನರು ಕ್ಷಯ ರೋಗದಿಂದ ನರಳುತ್ತಿರುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ. ರಸ್ತೆ ಬದಿಯ ಮನೆಗಳು ಭಾರೀ ಕಲ್ಲು ತುಂಬಿದ ಲಾರಿಗಳಿಂದಾಗಿ ಮನೆಯ ಗೋಡೆಗಳು ಬಿರುಕು ಬಿಟ್ಟು ಬೀಳುವ ಹಂತ ತಲಪಿದೆ.

ಈ ಮಾರ್ಗದಲ್ಲಿ ದಿನಂಪ್ರತಿ ಖಾಸಗಿ ಬಸ್ ಸೇರಿದಂತೆ ನೂರಾರು ದ್ವಿಚಕ್ರ ವಾಹನಗಳು ಚಲಿಸುತ್ತವೆ. ಆದರೆ ಸಮೀಪದ ಕೂಡಿಗೆ, ಕುಶಾಲನಗರಕ್ಕೆ ತಮ್ಮ ವ್ಯವಹಾರಿಕವಾಗಿ ಬರುವ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ದಿನಂಪ್ರತಿ ನರಳುವ ಯಾತನೆಯಾಗಿದೆ.

ಸಚಿವರ ಆದೇಶದನ್ವಯ 2 ಕಿ.ಮೀ.ವರೆಗೆ ರಸ್ತೆಗೆ ಡಾಂಬರು ಹಾಕಿದರೂ, ಇನ್ನುಳಿದ ಪಿಪಾಯಿ ಹಳ್ಳದಿಂದ ಮದಲಾಪುರದವರೆಗೆ ಯಾವದೇ ಡಾಂಬರು ಕಾಮಗಾರಿ ಯನ್ನು ಕೈಗೊಂಡಿಲ್ಲ. ಅಲ್ಲದೆ, ಕಲ್ಲುಕೋರೆಯಿಂದ ಲಾರಿಗಳು ಸೀಗೆಹೊಸೂರು ಮಾರ್ಗವಾಗಿ ಕಣಿವೆಯ ಹತ್ತಿರದ ಹೆದ್ದಾರಿಯು ಲೋಕೋಪಯೋಗಿ ರಸ್ತೆಗೆ ಸೇರಿದ ರಸ್ತೆಯಾಗಿದೆ.

ಈ ಮಾರ್ಗದಲ್ಲಿ ಚಲಿಸದೆ ಬ್ಯಾಡಗೊಟ್ಟ, ಶಿರಹೊಳಲು ಮತ್ತು ಮದಲಾಪುರ ರಸ್ತೆಯಲ್ಲಿ ಲಾರಿಗಳು ಚಲಿಸುವದರಿಂದ ರಸ್ತೆಯು ಗುಂಡಿ ಬಿದ್ದು ಹಾಳಾಗಿದ್ದು, ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಚಾಲಕರಿಗೆ ತೀರಾ ತೊಂದರೆ ಯಾಗುತ್ತಿದೆ ಎಂದು ಲಿಖಿತವಾಗಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತುರ್ತಾಗಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಲಾಗುವ ದೆಂದು ಸಾರ್ವಜನಿಕರು ತಿಳಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ