ಮಡಿಕೇರಿ ಸೆ. ೫ :ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಶೀಘ್ರದಲ್ಲಿಯೇ ಮಂಡಿ ಸಮಸ್ಯೆಯ ಪರಿಹಾರಕ್ಕಾಗಿ ರೋಬೋಟಿಕ್ ಸರ್ಜರಿ ಸೌಲಭ್ಯ ದೊರಕಲಿದೆ. ಇದಕ್ಕಾಗಿ ೩ ಕೋಟಿ ರೂ. ವೆಚ್ಚದ ರೋಬೋಟಿಕ್ ಉಪಕರಣಕ್ಕಾಗಿ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದಶಕ ಡಾ.ಎ.ಜಿ. ಲೋಕೇಶ್ ತಿಳಿಸಿದ್ದಾರೆ.
ನಗರದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್’ ಹಾಗೂ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗ’ದ ವತಿಯಿಂದ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಮಧ್ಯವಾರ್ಷಿಕ ರಾಜ್ಯಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಬಾರಿಯ ಸಮ್ಮೇಳನವು ಮಂಡಿ ಚಿಪ್ಪು ಮತ್ತು ಕೀಲು ಸಮಸ್ಯೆಗಳ ಸಂಪೂರ್ಣ ಅಧ್ಯಯನ ಎಂಬ ಶೀರ್ಷಿಕೆಯಡಿ ನಡೆಯಲಿದ್ದು, ಮಂಡಿ ಕೀಲು ನುಣುಪು ಸಮಸ್ಯೆಗಳು, ದಿನನಿತ್ಯದ ನಡಿಗೆ ಹಾಗೂ ಕಾರ್ಯಚಟುವಟಿಕೆಗಳಲ್ಲಿ ಎದುರಾಗುವ ತೊಂದರೆಗಳು, ಕ್ರೀಡಾಪಟುಗಳ ಮಂಡಿ ಗಾಯಗಳು ಸುಧಾರಿತ ಕೀಲು ಬದಲಿ ಶಸ್ತçಚಿಕಿತ್ಸೆಗಳು ಕೀಲು ತಪಾಸಣೆ ಸೇರಿದಂತೆ ನಾನಾ ಜಟಿಲ ಸಮಸ್ಯೆಗಳ ಕುರಿತು ರಾಜ್ಯದ ವಿವಿಧ ಭಾಗಗಳ ತಜ್ಞ ವೈದ್ಯರಿಂದ ಉಪನ್ಯಾಸ, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ವಾದ-ಮಂಡನೆ ಹಾಗೂ ಸಂವಾದಗಳು ಎರಡು ದಿನಗಳ ಕಾಲ ನಡೆಯಲಿವೆ ಎಂದು ಡಾ. ಲೋಕೇಶ್ ಮಾಹಿತಿ ನೀಡಿದರು.
೨೦೧೬ರಲ್ಲಿ ಪ್ರಾರಂಭವಾದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಇದೀಗ ೧೦ ವರ್ಷಗಳನ್ನು ಪೂರೈಸಿದ್ದು, ಶೀಘ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಪ್ರಸ್ತುತ ೬೫೦ ಹಾಸಿಗೆಗಳ ಸೌಲಭ್ಯವಿರುವ ಜಿಲ್ಲಾ ಸರ್ಕಾರಿ ಆಸ್ಪತ್ರೆಯನ್ನು ಈ ವರ್ಷಾಂತ್ಯದೊಳಗಾಗಿ ೮೦೦ ಹಾಸಿಗೆಗಳ ಸೌಲಭ್ಯಗಳಿಗೆ ಉನ್ನತ ದರ್ಜೆಗೇರಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಡಾ. ಲೋಕೇಶ್, ೩ ಕೋಟಿ ರುಪಾಯಿ ವೆಚ್ಚದಲ್ಲಿ ಮಂಡಿನೋವಿನ ಶಸ್ತçಚಿಕಿತ್ಸೆಗಾಗಿ ರೋಬೋಟಿಕ್ ಸರ್ಜರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಕೊಡಗು ಆರೋಗ್ಯ ಕ್ಷೇತ್ರದಲ್ಲಿ ಇದು ಮಹತ್ವದ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಸಚ್ಚಿದಾನಂದ ರೈ ಮಾತನಾಡಿ, ಪ್ರತೀ ವರ್ಷವೂ ರಾಜ್ಯದ ವಿವಿಧ ಮೆಡಿಕಲ್ ಕಾಲೇಜುಗಳಿಂದ ೩೦೦ ಕ್ಕೂ ಅಧಿಕ ಮೂಳೆ ಮತ್ತು ಕೀಲು ವೈದ್ಯರು ವೈದ್ಯಕೀಯ ಕ್ಷೇತ್ರ ಪ್ರವೇಶಿಸುತ್ತಿದ್ದಾರೆ. ಇಂಥವರಿಗೆ ಈ ಕ್ಷೇತ್ರದಲ್ಲಿನ ಆಧುನಿಕ ಸೌಲಭ್ಯಗಳ ಮಾಹಿತಿ ನೀಡಬೇಕಾಗುತ್ತದೆ ಎಂದರು. ಇದೇ ಮೊದಲ ಬಾರಿಗೆ ಅಸೋಸಿಯೇಷನ್ ವತಿಯಿಂದ ಅರ್ಧವಾರ್ಷಿಕ ಸಮ್ಮೇಳನ ಆಯೋಜಿಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ೨೫೦ ಕ್ಕೂ ಹೆಚ್ಚು ಕೀಲು ಮತ್ತು ಮೂಳೆ ವಿಭಾಗದ ತಜ್ಞ ವೈದ್ಯರು ಭಾಗವಹಿಸಿದ್ದಾರೆ ಎಂದೂ ಡಾ. ಸಚ್ಚಿದಾನಂದ ತಿಳಿಸಿದರು.
ಸಮ್ಮೇಳನದ ಆಯೋಜನಾ ಸಮಿತಿ ಜಂಟಿ ಸಂಚಾಲಕ ಡಾ. ವಿನಯ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೀಲು ಮತ್ತು ಮೂಳೆ ವಿಭಾಗದ ಮುಖ್ಯಸ್ಥ ಡಾ. ಆನಂದ್ ಕುಮಾರ್ ಬಿ.ಎಸ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲ ಡಾ.. ವಿಶಾಲ್ ಕುಮಾರ್, ತಜ್ಞ ವೈದ್ಯ ಡಾ.ಸೋಮಶೇಖರ್, ಕೆ.ಎಂ. ರೋಹಿಣಿ ಬಸವರಾಜ್, ಡಾ.ಬಿ.ವಿ. ಅಭಿನಂದನ್, ಡಾ. ಎಸ್.ಎಂ. ಧನಂಜಯ್ ಕುಮಾರ್ ಸ್ಮರಣ ಸಂಚಿಕೆಯ ಸಂಪಾದಕ ಡಾ. ಅವಿನಾಶ್ ಪಾರ್ಥಸಾರಥಿ , ಡಾ. ಮಂಜುನಾಥ್, ಡಾ. ಆತ್ಮಾನಂದ ಹೆಗಡೆ , ಡಾ. ಹರೀಶ್ ಮೂರ್ತಿ, ಡಾ. ಜಿ.ಭರತ್ ರಾಜ್, ಡಾ. ವಿನಯ್, ಡಾ. ರಾಕೇಶ್ ಕುಮಾರ್, ಡಾ. ಬಿ.ಚಿದಾನಂದ ವೇದಿಕೆಯಲ್ಲಿದ್ದರು.