ಸಿದ್ದಾಪುರ, ಜೂ. ೨೪: ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜಯಂತಿಯ ಅಂಗವಾಗಿ ಕೊಡಗು ಎಸ್.ಎನ್.ಡಿ.ಪಿ. ಯೂನಿಯನ್ ವತಿಯಿಂದ ಆಯೋಜಿಸುವ ಕಾರ್ಯಕ್ರಮದ ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷ ವಿ.ಕೆ. ಲೋಕೇಶ್ ಅಧ್ಯಕ್ಷತೆಯಲ್ಲಿ ಸಿದ್ದಾಪುರದ ಎಸ್.ಎನ್.ಡಿ.ಪಿ. ಸಭಾಂಗಣದಲ್ಲಿ ನಡೆಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿ.ಕೆ. ಲೋಕೇಶ್, ಅಧ್ಯಾತ್ಮಿಕ ಚಿಂತಕ, ಸಮಾಜ ಸುಧಾರಕ, ತತ್ವಜ್ಞಾನಿ ಬ್ರಹ್ಮಶ್ರೀ ನಾರಾಯಣ ಗುರುಗಳು ತುಳಿತಕ್ಕೊಳಗಾದ ಸಮಾಜದ ಏಳಿಗೆಗೆ ಶ್ರಮಿಸಿದ್ದರು. ಸಂಘಟನೆ, ವಿದ್ಯೆ ಆದ್ಯತೆ ನೀಡಿ, ಬಡವರ ಏಳಿಗೆಗೆ ಶ್ರಮಿಸಿದ್ದರು. ಪ್ರತಿ ವರ್ಷವೂ ಕೊಡಗು ಎಸ್.ಎನ್.ಡಿ.ಪಿ. ಯೂನಿಯನ್ ವತಿಯಿಂದ ಅದ್ಧೂರಿಯಿಂದ ಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಆಚರಿಸುತ್ತಿದ್ದು, ಈ ವರ್ಷ ಮತ್ತಷ್ಟು ವಿಜೃಂಭಣೆಯಿAದ ಜಯಂತಿ ಆಚರಿಸಲಾಗುತ್ತಿದೆ. ಜಿಲ್ಲೆಯಲ್ಲಿ ೫೦ ಸಾವಿರಕ್ಕೂ ಹೆಚ್ಚು ಹಿಂದೂ ಮಲಯಾಳಿ ಜನರಿದ್ದು, ಆ. ೨೮ ರಂದು ಸಿದ್ದಾಪುರದಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಗುರು ಜಯಂತಿ ಆಚರಿಸಲಾಗುವುದು ಎಂದರು.

ಇದೇ ಸಂದರ್ಭ ಜಯಂತಿ ಆಚರಣಾ ಸಮಿತಿಗೆ ಅಧ್ಯಕ್ಷರಾಗಿ ಹರಿದಾಸ್, ಕಾರ್ಯದರ್ಶಿಯಾಗಿ ರೆಜಿತ್ ಕುಮಾರ್ ಆಯ್ಕೆ ಮಾಡಲಾಯಿತು. ಈ ವೇಳೆ ಉಪ ಸಮಿತಿಗಳಾದ ವೇದಿಕೆ ಸಮಿತಿ, ಮೆರವಣಿಗೆ ಸಮಿತಿ, ಆಹಾರ ಸಮಿತಿ ಸೇರಿದಂತೆ ವಿವಿಧ ಉಪ ಸಮಿತಿಗಳ ಸಂಚಾಲಕರು ಹಾಗೂ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಯೂನಿಯನ್ ಉಪಾಧ್ಯಕ್ಷ ಆರ್. ರಾಜನ್, ಪ್ರಮುಖರಾದ ಟಿ.ಆರ್. ಪಾಪಾಯ್ಯ, ಮೋಹನ್ ದಾಸ್, ರಾಜಶೇಖರ್, ಮೋಹನ್ ದಾಸ್, ಟಿ.ಸಿ. ನಾರಾಯಣ್, ವನಿತಾ ಘಟಕದ ಜಿಲ್ಲಾಧ್ಯಕ್ಷರಾದ ರೀಶಾ ಸುರೇಂದ್ರನ್ ಸೇರಿದಂತೆ ವಿವಿಧ ಶಾಖೆಗಳ ಪದಾಧಿಕಾರಿಗಳು ಹಾಜರಿದ್ದರು.