ಕುಶಾಲನಗರ, ಜೂ. ೧೬: ಕೊಡಗು ಪ್ರೆಸ್‌ಕ್ಲಬ್ ಸಹಕಾರಿ ನಿಯಮಿತ ವತಿಯಿಂದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ ರೂ ೫೦,೦೦೦ ದೇಣಿಗೆ ಹಸ್ತಾಂತರಿಸಲಾಯಿತು. ಕುಶಾಲನಗರ ತಾಲೂಕು ಸಂಘದ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್ ಕ್ಲಬ್ ಸಹಕಾರ ಬ್ಯಾಂಕ್ ನಿಯಮಿತ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ತಾಲೂಕು ಸಂಘದ ಅಧ್ಯಕ್ಷ ಎಂ. ಎನ್. ಚಂದ್ರಮೋಹನ್ ಅವರಿಗೆ ಚೆಕ್ ಹಸ್ತಾಂತರಿಸಿದರು.

ಕೊಡಗು ಜಿಲ್ಲೆಯ ನಾಲ್ಕು ತಾಲೂಕು ಸಂಘಗಳ ಕ್ಷೇಮಾಭಿವೃದ್ಧಿ ನಿಧಿಗೆ ಒಟ್ಟು ಎರಡು ಲಕ್ಷ ರೂ. ದೇಣಿಗೆಯನ್ನು ಹಸ್ತಾಂತರಿಸಲಾಗಿದೆ ಎಂದು ರಮೇಶ್ ಕುಟ್ಟಪ್ಪ ತಿಳಿಸಿದ್ದಾರೆ. ಈ ಸಂದರ್ಭ ರೋಟರಿ ಅಧ್ಯಕ್ಷ ಮನು ಪೆಮ್ಮಯ್ಯ, ಕೊಡಗು ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಅಧ್ಯಕ್ಷ ಅನು ಕಾರ್ಯಪ್ಪ, ಸಂಘದ ರಾಜ್ಯ ನಿರ್ದೇಶಕಿ ಸವಿತಾ ರೈ, ರಾಷ್ಟ್ರೀಯ ಸಮಿತಿ ಸದಸ್ಯರಾದ ಪಾರ್ಥ ಚಿಣ್ಣಪ್ಪ, ಕೊಡಗು ಪ್ರೆಸ್‌ಕ್ಲಬ್ ಸಹಕಾರ ಸಂಘದ ನಿರ್ದೇಶಕರುಗಳಾದ ಕೆ. ಕೆ. ನಾಗರಾಜ ಶೆಟ್ಟಿ, ವಿ. ವಿ. ಅರುಣ್ ಕುಮಾರ್, ಸಂತೋಷ್ ರೈ, ಸಂಶುದ್ದೀನ್, ಜಯಪ್ರಕಾಶ್ ಮತ್ತು ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಕೆ. ಜೆ. ಶಿವರಾಜ್, ಖಜಾಂಚಿ ಎಚ್. ವಿ. ವಿನೋದ್, ಮತ್ತು ಸಂಘದ ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳು ಇದ್ದರು.