ಕೂಡಿಗೆ, ಮೇ. ೨೭: ಸಿಐಟಿಯು ತಾ. ೩೦ ರಂದು ಹಮ್ಮಿಕೊಂಡಿರುವ ಜಿಲ್ಲಾಧಿಕಾರಿಗಳ ಕಚೇರಿ ಛಲೋ ಕಾರ್ಯಕ್ರಮ ಹಿನ್ನಲೆಯಲ್ಲಿ ಕೂಡ್ಲೂರು ಕೈಗಾರಿಕಾ ಘಟಕದಲ್ಲಿ ಕಾರ್ಮಿಕರಿಂದ ಸಹಿ ಸಂಗ್ರಹ ಚಳುವಳಿ ನಡೆಯಿತು. ವೈಜ್ಞಾನಿಕ ಕನಿಷ್ಟ ವೇತನ ಜಾರಿಗೆ ಆಗ್ರಹಿಸಿ ಮತ್ತು ಕಾರ್ಮಿಕ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಹಮ್ಮಿಕೊಂಡಿರುವ ಜಿಲ್ಲಾಧಿಕಾರಿ ಕಚೇರಿ ಚಲೋ ಕಾರ್ಯಕ್ರಮಕ್ಕೆ ಕಾರ್ಮಿಕ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಸಿಐಟಿಯು ಜಿಲ್ಲಾ ಅಧ್ಯಕ್ಷ ಎ.ಸಿ.ಸಾಬು ಮತ್ತು ಇಂಡಸ್ಟಿçಯಲ್ ಏರಿಯಾ ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ಮನವಿ ಮಾಡಿದರು.

ಇದೇ ಸಂದರ್ಭ ನೆರೆದಿದ್ದ ವಿವಿಧ ಕಾಫಿ ಸಂಸ್ಕರಣಾ ಘಟಕಗಳ ಮಹಿಳಾ ಕಾರ್ಮಿಕರಿಂದ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಕನಿಷ್ಟ ವೇತನ ಜಾರಿ ಮತ್ತು ಕಾರ್ಮಿಕ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ಸಿಐಟಿಯು ರಾಜ್ಯಾದ್ಯಂತ ಮೇ ೩೦ ರಂದು ಜಿಲ್ಲಾಧಿಕಾರಿ ಕಛೇರಿ ಚಲೋಗೆ ಕರೆ ನೀಡಿದೆ. ನಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಮತ್ತು ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ಜಿಲ್ಲಾಧ್ಯಕ್ಷ ಎ.ಸಿ. ಸಾಬು ಅವರು ತಿಳಿಸಿದರು.

ಈ ಸಂದರ್ಭ ಸಿಐಟಿಯು ಪದಾಧಿಕಾರಿ ಕೆ.ಕೆ.ಹರಿದಾಸ್, ಕೂಡ್ಲೂರು ಕಾರ್ಮಿಕ ಘಟಕದ ಕಾರ್ಯದರ್ಶಿ ಶಾಂತಾ, ಖಜಾಂಚಿ ಪುಷ್ಪ, ಕೂಡುಮಂಗಳೂರು ಗ್ರಾಪಂ ಮಾಜಿ ಸದಸ್ಯೆ ಗೌರಮ್ಮ, ಪ್ರಮುಖರಾದ ಸುಜಾತಾ, ರತ್ನಮ್ಮ ಮತ್ತಿತರರು ಇದ್ದರು.