ಮಡಿಕೇರಿ, ಏ. ೧೯: ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹಾಗೂ ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಟರ್ಫ್ ‘ಸೌಹಾರ್ದ ಕಪ್’ ಪಂದ್ಯಾವಳಿಯಲ್ಲಿ ಮೀಡಿಯಾ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಸಿದ್ದಾಪುರದ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ೮ ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯಾವಳಿಯಲ್ಲಿ ಕಾವೇರಿ ತಂಡದ ಪರವಾಗಿ ಜಯಪ್ರಕಾಶ್ ಅವರ ೨೬ ರನ್ ಗಳ ಸಹಾಯದಿಂದ ತಂಡ ೪೯ ರನ್ ಗಳಿಸಿತು. ಮೀಡಿಯಾ ಸೂಪರ್ ಕಿಂಗ್ಸ್ ತಂಡದ ಇಸ್ಮಾಯಿಲ್ ೨೮, ರೆಜಿತ್ ೧೮ ರನ್‌ಗಳನ್ನು ಗಳಿಸಿ ಸುಲಭ ಜಯ ಸಾಧಿಸಿತು.

ಇದಕ್ಕೂ ಮೊದಲು ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಕಾವೇರಿ ಮಿಡಿಯಾ ತಂಡ ಮಿಡಿಯಾ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.

ಎಲಿಮಿನೇಟರ್ ಪಂದ್ಯದಲ್ಲಿ ಬ್ರಾಡ್ ಕಾಸ್ಟ್ ಇಬ್ನಿ ಬ್ಲಾಸ್ಟರ್ ತಂಡ ಮೀಡಿಯಾ ರಾಯಲ್ಸ್ ತಂಡವನ್ನು ಮಣಿಸಿತು. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಬ್ರಾಡ್ ಕಾಸ್ಟ್ ಇಬ್ನಿ ಬ್ಲಾಸ್ಟರ್ ಹಾಗೂ ಮೀಡಿಯಾ ಸೂಪರ್ ಕಿಂಗ್ಸ್ ತಂಡದ ನಡುವಿನ ಪಂದ್ಯವು ಸಮಬಲ ಆಗಿದ್ದು, ಸೂಪರ್ ಓವರ್ ನಲ್ಲಿ ಮೀಡಿಯಾ ಸೂಪರ್ ಕಿಂಗ್ಸ್ ಜಯ ಸಾಧಿಸಿತು.

ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ರೆಜಿತ್ ಕುಮಾರ್ ಗುಹ್ಯ, ಬೆಸ್ಟ್ ಬ್ಯಾಟ್ಸ್ಮ್ಯಾನ್ ಇಸ್ಮಾಯಿಲ್ ಕಂಡಕರೆ, ಬೆಸ್ಟ್ ಬೌಲರ್ ಯುಗ ದೇವಯ್ಯ, ಬೆಸ್ಟ್ ಕೀಪರ್ ಜಯಪ್ರಕಾಶ್, ಬೆಸ್ಟ್ ಕ್ಯಾಚ್ ಪ್ರದೀಪ್, ಸರಣಿ ಶ್ರೇಷ್ಠ ಆದರ್ಶ್, ಉತ್ತಮ ಮಹಿಳಾ ಆಟಗಾರರಾಗಿ ಪ್ರಮಿಳಾ ನಾಚಯ್ಯ, ಉತ್ತಮ ಹಿರಿಯ ಆಟಗಾರ ಹನೀಫ್ ಕೊಡ್ಲಿಪೇಟೆ, ಬೆಸ್ಟ್ ಫೀಲ್ಡರ್ ವಿನು ಕುಶಾಲಪ್ಪ ಪಡೆದುಕೊಂಡರು. ಪಂದ್ಯಾವಳಿಯಲ್ಲಿ ನನ್ನ ಧ್ವನಿ, ಕಾಫಿನಾಡ್, ಗೋಣಿಕೊಪ್ಪ ಮೀಡಿಯಾ ಕಿಂಗ್ಸ್, ಟೀಮ್ ಅಯರ ತಂಡಗಳು ಪಾಲ್ಗೊಂಡಿತು.

ಒತ್ತಡದ ಬದುಕಿಗೆ ಕ್ರೀಡಾಕೂಟ ಅತ್ಯಗತ್ಯ: ಮಾದಂಡ ತಿಮ್ಮಯ್ಯ

ಪಂದ್ಯಾವಳಿಯನ್ನು ಅಂತರರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪತ್ರಕರ್ತರು ಸದಾ ಒತ್ತಡದ ಬದುಕಿನಲ್ಲಿದ್ದು, ಕ್ರೀಡೆಯ ಮೂಲಕ ಒತ್ತಡಕ್ಕೆ ವಿರಾಮವನ್ನು ಕಂಡುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಜಿಲ್ಲೆಯಲ್ಲಿ ಕ್ರೀಡೆಯ ಬೆಳವಣಿಗೆಗೆ ಪತ್ರಕರ್ತರ ಕೊಡುಗೆಯೂ ಅಪಾರವಾಗಿದೆ ಎಂದರು.

ಯುವ ಮುಖಂಡ ಎಡಿಕೇರಿ ಪ್ರಸನ್ನ ಮಾತನಾಡಿ, ಕ್ರೀಡೆಯು ದೈಹಿಕ ಆರೋಗ್ಯವನ್ನು ಹೆಚ್ಚಿಸಲು ಉಪಯುಕ್ತವಾಗಲಿದೆ. ಪತ್ರಕರ್ತರು ಸಮಾಜದ ಪ್ರತಿಯೊಂದು ವಿಷಯದಲ್ಲೂ ಗಮನ ಹರಿಸುತ್ತಿದ್ದು, ತಮ್ಮ ಆರೋಗ್ಯದ ಕಡೆಯೂ ಗಮನಹರಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಬೊಳ್ಳಜಿರ ಬಿ ಅಯ್ಯಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಾಚರಣಿಯಂಡ ಅನು ಕಾರ್ಯಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಬಿ.ಆರ್ ಸವಿತಾ ರೈ, ಅಯರ ತಂಡದ ಮಾಲೀಕರಾದ ಪಿ. ವಿಷ್ಣು, ಸಮಾಜ ಸೇವಕರಾದ ಎ.ಎನ್ ಪದ್ಮನಾಭ ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ವಹಿಸಿದ್ದರು.

ಜಿಲ್ಲಾ ಕೇಂದ್ರದಲ್ಲಿ ಟರ್ಫ್ ಮೈದಾನ ಅಗತ್ಯ

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಪತ್ರಕರ್ತರಲ್ಲಿ ಉತ್ತಮ ಕ್ರಿಕೆಟ್ ಆಟಗಾರರನ್ನು ಹೊಂದಿದ್ದು, ವೃತ್ತಿಪರ ಆಟಗಾರರಂತೆ ಆಡುತ್ತಿರುವುದು ಶ್ಲಾಘನೀಯ. ಜಿಲ್ಲಾ ಕೇಂದ್ರದಲ್ಲಿಯೂ ಟರ್ಫ್ ಮೈದಾನ ಅಗತ್ಯವಾಗಿದೆ. ಎಲ್ಲರೂ ಆರೋಗ್ಯದ ಕಡೆ ಗಮನ ಹರಿಸಬೇಕೆಂದರು.

ಉದ್ಯಮಿ ಮುದ್ದಂಡ ರಶಿನ್ ಸುಬ್ಬಯ್ಯ ಮಾತನಾಡಿ, ಕ್ರೀಡೆ ಹಾಗೂ ವ್ಯಾಪಾರ ಎಲ್ಲರನ್ನು ಒಗ್ಗೂಡಿಸುತ್ತದೆ. ಕ್ರೀಡೆಯ ಮೂಲಕ ಪತ್ರಕರ್ತರ ಒಗ್ಗಟ್ಟು ಹೆಚ್ಚುತ್ತದೆ. ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಚೆಯ್ಯಂಡ ಸತ್ಯ ಗಣಪತಿ, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜೀರ ಬಿ. ಅಯ್ಯಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್ ಸವಿತಾ ರೈ ಹಾಜರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಜಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೆಜಿತ್ ಕುಮಾರ್ ವಹಿಸಿದ್ದರು.