ಕಣಿವೆ, ಏ. 8: ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮುಂಬರುವ ಜೂನ್ 23 ರಂದು ಕುಶಾಲನಗರದ ರೈತ ಸಹಕಾರ ಭವನದಲ್ಲಿ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು ಕುಶಾಲನಗರದ ಸರ್ವರೂ ಸಮ್ಮೇಳನದ ಭಾಗವಾಗಬೇಕೆಂದು ಪರಿಷತ್ತಿನ ಗೌರವ ಅಧ್ಯಕ್ಷರೂ ಆದ ವೀರಾಜಪೇಟೆ ತಾಲೂಕು ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಕುಶಾಲನಗರದ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶರಣ ಸಾಹಿತ್ಯ ಸಮ್ಮೇಳನ ಕೇವಲ ಸಮುದಾಯವೊಂದಕ್ಕೆ ಸೀಮಿತವಾದುದಲ್ಲ. ಇದು ಸಮ ಸಮಾಜ ನಿರ್ಮಾಣದ ಪರಿಕಲ್ಪನೆ. ಹನ್ನೆರಡನೆ ಶತಮಾನದಲ್ಲಿ ಸಮಾಜದಲ್ಲಿದ್ದ ಅಂಕು ಡೊಂಕುಗಳು, ಮೇಲು ಕೀಳು ಬೇಧಗಳನ್ನು ಬುಡಸಹಿತ ಕಿತ್ತೊಗೆಯಲು ರಚನೆಯಾದ ವಚನಗಳು ಹಾಗೂ ಶರಣ ಸಾಹಿತ್ಯವನ್ನು ಹಳ್ಳಿಪೇಟೆ, ನಗರಗಳ ಪ್ರತಿ ಮನೆ ಮನೆಗಳಿಗೆ ಜನಸಾಮಾನ್ಯರ ಮನ ಮನಕ್ಕೆ ತಲುಪಿಸುವ ಉದ್ದೇಶವೇ ಶರಣ ಸಾಹಿತ್ಯ ಸಮ್ಮೇಳನದ ಮೂಲ ಧ್ಯೆಯ ಎಂದು ಶ್ರೀಗಳು ಹೇಳಿದರು.

ಸಮ್ಮೇಳನದ ಯಶಸ್ವಿಗೆ ವಿವಿಧ ಸಮಿತಿಗಳನ್ನು ಮಾಡಿಕೊಂಡು ಶಿಸ್ತು ಬದ್ಧವಾಗಿ, ಸಮಯ ಪಾಲನೆಯೊಂದಿಗೆ ಶರಣ ಸಾಹಿತ್ಯ ಸಮ್ಮೇಳನ ರೂಪುಗೊಳ್ಳಬೇಕೆಂದು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನುಡಿದರು.

ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಮತನಾಡಿ, ಇದೇ ಮೊದಲ ಬಾರಿಗೆ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ಆಯೋಜನೆಯಾಗುತ್ತಿದ್ದು ಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸಬೇಕು.

ಸಮಯಪಾಲನೆಗೆ ಒತ್ತು ನೀಡಬೇಕು. ಕೊಡಗು ಜಿಲ್ಲೆಗೆ ಆಗಮಿಸುವ ಸುತ್ತೂರು ಶ್ರೀಗಳನ್ನು ಭಕ್ತಿ ಹಾಗೂ ಗೌರವಗಳಿಂದ ಆದರಿಸಿ ಬೀಳ್ಕೊಡಬೇಕಿದೆ ಎಂದರು.

ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿ, ಶರಣ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲಾ ಜಾತಿ ವರ್ಗಗಳ ಜನರು ಸೇರುವ ಮೂಲಕ ಶರಣ ವಿಚಾರಗಳನ್ನು ಅರಿಯಲು ಉತ್ತಮ ವೇದಿಕೆ ಎಂದರು.

ಅಖಿಲ ಭಾರತ ವೀರಶೈವ ಮಹಾಸಭಾ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ, ಕುಶಾಲನಗರ ತಾಲೂಕು ಅಧ್ಯಕ್ಷ ಎಂ.ಎಸ್. ಶಿವಾನಂದ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎ.ಎಸ್. ಮಹೇಶ್, ಜಿಲ್ಲಾ ಕದಳಿ ವೇದಿಕೆ ಅಧ್ಯಕ್ಷೆ ಸರೋಜಾ ಆರಾಧ್ಯ, ಕುಶಾಲನಗರ ತಾಲೂಕು ಅಧ್ಯಕ್ಷೆ ಹೇಮಲತಾ,

ಶರಣ ಸಾಹಿತ್ಯ ಪರಿಷತ್ತು ಯುವ ಘಟಕದ ಜಿಲ್ಲಾಧ್ಯಕ್ಷ ಹಕ್ಕೆ ಮೋಹನ್, ಉಪಾಧ್ಯಕ್ಷ ಕೆ.ಜಿ. ರಾಜಶೇಖರ, ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಮಾಜದ ಅಧ್ಯಕ್ಷೆ ಮಂಜುಳಾ ಸುರೇಶ, ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿ ಅಧ್ಯಕ್ಷ ಡಿ.ವಿ. ರಾಜೇಶ್, ಪ್ರಮುಖರಾದ ಸದಾಶಿವಯ್ಯ ಪಲ್ಲೇದ್ ಟಿ.ಜಿ. ಪ್ರೇಮಕುಮಾರ್, ಎಸ್. ನಂದೀಶ್, ಎಂ.ಕೆ. ಧನರಾಜು, ಎಂ.ಬಿ. ಸುರೇಶ್, ಶಿವಲಿಂಗ, ಜಿ.ಬಿ. ಲೋಕೇಶ್, ವಿಜಯಪಾಲಾಕ್ಷ, ಪರಮೇಶ್ ಮತ್ತಿತರರಿದ್ದರು.

ಸಮಿತಿಗಳ ರಚನೆ

ಹಣಕಾಸು ಸಮಿತಿಯ ಅಧ್ಯಕ್ಷರಾಗಿ ಶಾಂಬಶಿವಯ್ಯ, ಸಂಚಾಲಕರಾಗಿ ಧನರಾಜು, ಸಾಂಸ್ಕøತಿಕ ಸಮಿತಿ ಅಧ್ಯಕ್ಷರಾಗಿ ಎಸ್. ನಂದೀಶ್, ಸಂಚಾಲಕರಾಗಿ ಶಿವಲಿಂಗ, ಆಹಾರ ಸಮಿತಿ ಅಧ್ಯಕ್ಷರಾಗಿ ಎಂ.ಎಸ್.ಗಣೇಶ್, ಸಂಚಾಲಕರಾಗಿ ಉದಯಕುಮಾರ್, ಧ್ವಜಾರೋಹಣ ಸಮಿತಿ ಅಧ್ಯಕ್ಷರಾಗಿ ಸದಾಶಿವಯ್ಯ ಪಲ್ಲೇದ್, ವೇದಿಕೆ ಸಮಿತಿ ಅಧ್ಯಕ್ಷರಾಗಿ ಎಸ್.ಬಿ. ಹೇಮಲತಾ, ಸಂಚಾಲಕರಾಗಿ ಡಾ. ಹೇಮಲತಾ, ಮೆರವಣಿಗೆ ಸಮಿತಿ ಅಧ್ಯಕ್ಷರಾಗಿ ಹೆಚ್.ಎಂ. ಮಧುಸೂದನ್, ಸಂಚಾಲಕರಾಗಿ ಧಮೇರ್ಂದ್ರ, ಅತಿಥಿ ಸತ್ಕಾರ ಸಮಿತಿ ಅಧ್ಯಕ್ಷರಾಗಿ ಜಿ.ಬಿ. ಲೋಕೇಶ್, ಸಂಚಾಲಕರಾಗಿ ಎಂ.ಬಿ. ಸುರೇಶ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಹುಲುಸೆ ಶಿವನಂಜಪ್ಪ, ಸಂಚಾಲಕರಾಗಿ ಮರೂರು ಮಹದೇವ್, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಶಿಕ್ಷಕ ಎಸ್.ಪಿ. ಪರಮೇಶ್ ಅವರನ್ನು ನೇಮಕ ಮಾಡಲಾಯಿತು.