ಸುಂಟಿಕೊಪ್ಪ, ಏ. 5: ಸುಂಟಿಕೊಪ್ಪ ಪನ್ಯ ಗ್ರಾಮದಲ್ಲಿ ನೆಲೆನಿಂತಿರುವ ಗ್ರಾಮ ದೇವತೆಯಾದ ಶ್ರೀ ಮಳೂರು ಬೆಳ್ಳಾರಿಕಮ್ಮ ದೇವರ ವಾರ್ಷಿಕೋತ್ಸವದ ಅಂಗವಾಗಿ ಎತ್ತು ಪೋರಾಟ್, ಚೌರಿಕುಣಿತ, ಶ್ರೀ ದೇವರ ಉತ್ಸವ ಮೂರ್ತಿಯ ನೃತ್ಯ ಬಲಿ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಭಕ್ತಾದಿಗಳ ಸಮುಖದಲ್ಲಿ ಶೃದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಸೋಮವಾರ ಉಲುಗುಲಿ ಪನ್ಯ ಗ್ರಾಮದ ಗ್ರಾಮ ದೇವತೆಯಾದ ಬೆಳ್ಳಾರಿಕ್ಕಮ್ಮ ಉತ್ಸವದ ಅಂಗವಾಗಿ ಕಳೆದ 7 ದಿನಗಳ ಕಾಲ ಸುಂಟಿಕೊಪ್ಪ, ಉಲುಗುಲಿ, ಆಂಜನಗೇರಿ ಬೇಟಗೇರಿ, ಹರದೂರು ಗ್ರಾಮದ ಗ್ರಾಮಸ್ಥರು ವ್ರತ್ತದಲ್ಲಿದ್ದು ವಾಡಿಕೆಯಂತೆ ವಾರದ ನಂತರ ದೇವಾಲಯದಲ್ಲಿ ವ್ರತಾಚರಣೆಯ ಅಂಗವಾಗಿ ವಿಶೇಷ ಆಚರಣೆಯಲ್ಲಿ ತೊಡಗಿಸಿಕೊಂಡು ದೇವಿಗೆ ಪೂಜೆಯನ್ನು ಅರ್ಪಿಸಿದರು.
ಕೊನೆಯ ದಿನವಾದ ಸೋಮವಾರ ಕೊಡವ ಮತ್ತು ಗೌಡ ಮನೆತನದ ಪುರುಷರು ಮತ್ತು ಯುವಕರು ಕುಪ್ಯಚಾಲೆ ಮತ್ತು ಕುಪ್ಪಸ ದಟ್ಟಿ ಬಿಳಿ ಉಡುಪು ಧರಿಸಿ ದೇವಾಲಯದ ಭಂಡಾರವನ್ನು ರಮೇಶ್ ಅವರ ಮನೆಯಿಂದ ಎತ್ತಿನ ಮೇಲೆ ಇರಿಸುವ ಮೂಲಕ ವಾದ್ಯಗೋಷ್ಠಿಯೊಂದಿಗೆ ದೇವಾಲಯಕ್ಕೆ ಮೆರವಣಿಗೆಯೊಂದಿಗೆ ತಂದು ದೇವಾಲಯದಲ್ಲಿ ಭಂಡಾರವನ್ನು ಸಮರ್ಪಿಸಿದರು.
ನಂತರ ಈಡುಗಾಯಿ, ಎತ್ತು ಪೋರಾಟ್, ಚೌರಿಕುಣಿತದಲ್ಲಿ ಪುರುಷರು-ಯುವಕರು ಪಾಲ್ಗೊಂಡು ಬೆಳ್ಳಾರಿಕ್ಕಮ್ಮ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ನಡೆಸಿ ದೇವಿಗೆ ಪೂಜೆ, ಮಹಾಮಂಗಳಾರತಿ ಪ್ರಸಾದ ವಿತರಣೆಯನ್ನು ನಡೆಸಲಾಯಿತು. ದಿನದ ಪೂಜಾ ಕೈಂಕರ್ಯವನ್ನು ಮುಖ್ಯ ಅರ್ಚಕರಾದ ಮಂಜುನಾಥ ಉಡುಪ, ಗಣೇಶ್ ಶರ್ಮ, ಗಣೇಶ್ ಉಪಾದ್ಯಾಯ, ಮಂಜುನಾಥ್ ತಂಡದವರು ನೆರವೇರಿಸಿದರು.
ಕೇರಳ ಕಾಸರಗೋಡುವಿನ ನಿಲೇಶ್ವರ ಚಂಡೆ ಮೇಳ ತಂಡದಿಂದ ಚಂಡೆ ವಾದನ ನಡೆಸಲಾಯಿತು. ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು. ಸುತ್ತ ಮುತ್ತಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಗ್ರಾಮದ ಜನತೆಯು ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.