ಮಡಿಕೇರಿ, ಮಾ.೮ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರಕಾರ “ಹವ್ಯಕ ಭಾಷಾ ಅಕಾಡೆಮಿ” ಮತ್ತು ಕೊಡವ ಅಭಿವೃದ್ಧಿ ನಿಗಮವನ್ನು ಘೋಷಿಸಿರುವುದು, ಅದರ ಜೊತೆಗೆ ಕುಂಬಾರ, ಈಡಿಗ, ಕಾಡುಗೊಲ್ಲ, ತಿಗಳ, ಗಾಣಿಗ, ಉಪ್ಪಾರ ಸಮುದಾಯಗಳಿಗೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿಸುವ ಉದ್ದೇಶ ಪ್ರಕಟಿಸಿರುವುದು ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸುವಲ್ಲಿ ಮತ್ತು ಸಮುದಾಯದ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರಕಾರದ ಈ ನಿರ್ಧಾರವು ಕೊಡವ ಮತ್ತು ಇತರ ಪಟ್ಟಿ ಮಾಡಲಾದ ಸಮುದಾಯಗಳಿಗೆ ಪ್ರಯೋಜನಕಾರಿಯಾಗಲಿದ್ದು, ಅವರ ಭಾಷೆ, ಸಂಸ್ಕೃತಿ ಮತ್ತು ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲಿದೆ. ಕೊಡವ ನ್ಯಾಷನಲ್ ಕೌನ್ಸಿಲ್ ಮೊದಲಿನಿಂದಲೂ ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ, ಆದಿಮಸಂಜಾತ ಕೊಡವರಿಗೆ ಎಸ್‌ಟಿ ವರ್ಗೀಕರಣ, ಸಂವಿಧಾನಾತ್ಮಕವಾಗಿ ಕೊಡವ ಧಾರ್ಮಿಕ ಸಂಸ್ಕಾರ ಶಸ್ತಾçಸ್ತçದ ಹಕ್ಕುಗಳ ಖಾತರಿ ಮತ್ತು ಕೊಡವ ಭಾಷೆಯನ್ನು ೮ನೇ ಶೆಡ್ಯೂಲ್‌ಗೆ ಸೇರಿಸುವಂತೆ ಒತ್ತಾಯಿಸುತ್ತಾ ಬಂದಿದೆ ಎಂದು ತಿಳಿಸಿದ್ದಾರೆ.

“ಹವ್ಯಕ ಭಾಷಾ ಅಕಾಡೆಮಿ”ಯನ್ನು ರಚಿಸುವ ಮೂಲಕ ಸರಕಾರ ಪಶ್ಚಿಮಘಟ್ಟಗಳ ಸಹ್ಯಾದ್ರಿ ಶ್ರೇಣಿಯ ಉತ್ತರ ಕನ್ನಡ, ಶಿವಮೊಗ್ಗ, ತುಳುನಾಡು ಮತ್ತು ಕಾಸರಗೋಡುವರೆಗೆ ಹರಡಿರುವ, ಆದಿಶಂಕರರ ಅದ್ವೆöÊತ ತತ್ವಶಾಸ್ತçದ ಅನುಯಾಯಿಗಳಾದ ಹವ್ಯಕ ಬ್ರಾಹ್ಮಣರ ವಿಶಿಷ್ಟ ಕೃಷಿ-ಆಧಾರಿತ ಸಂಸ್ಕೃತಿಯನ್ನು ಗುರುತಿಸಿದೆ. ಅವರ ಭಾಷೆ ಮತ್ತು ಜೀವನಶೈಲಿ ವಿಶಿಷ್ಟವಾಗಿದ್ದು, ನ್ಯಾಯಾಂಗ, ವೈದ್ಯಕೀಯ, ಅಧ್ಯಾತ್ಮಿಕತೆ, ಪತ್ರಿಕೋದ್ಯಮ, ಕ್ರೀಡೆ, ಸಾಹಿತ್ಯ, ಸಂಗೀತ, ಸಹಕಾರ, ಪ್ರಗತಿಪರ ಕೃಷಿ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯ ಶಿಲ್ಪಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಇದೇ ಸಮುದಾಯದವರು ಎಂಬುದು ಹೆಮ್ಮೆಯ ವಿಷಯ.

ಹವ್ಯಕ ಸಮುದಾಯದ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಮತ್ತು ಕೊಡವ ಅಭಿವೃದ್ಧಿ ನಿಗಮ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರಿಗೆ ಸಿಎನ್‌ಸಿ ಅಭಿನಂದನೆ ಸಲ್ಲಿಸುತ್ತದೆ ಎಂದಿದ್ದಾರೆ.

ಭಾರತ ದೇಶವು ವೈವಿಧ್ಯಮಯ ಜನಾಂಗೀಯತೆಯನ್ನು ಹೊಂದಿರುವ ರಾಷ್ಟçವಾಗಿದ್ದು, ಸಣ್ಣ ಸಮುದಾಯಗಳ ಗುರುತನ್ನು ರಕ್ಷಿಸುವುದು ಅತ್ಯಗತ್ಯ. ಯಾವುದೇ ಸಣ್ಣ ಸಮುದಾಯವನ್ನು ದೊಡ್ಡ ಪಂಗಡದಲ್ಲಿ ವಿಲೀನಗೊಳಿಸುವುದು ನಮ್ಮ ರಾಷ್ಟçದ ಬಹುತ್ವದ ರಚನೆಯನ್ನು ನಾಶಪಡಿಸುತ್ತದೆ. ಎಲ್ಲಾ ವೈವಿಧ್ಯಮಯ ಸಮುದಾಯಗಳಿಗೆ ಸಮಾನ ಪೋಷಣೆ ಸಿಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.