ಮಡಿಕೇರಿ, ಫೆ. ೧೦: ದಶಕಗಳಿಂದ ಕೊಡಗು, ಚಿಕ್ಕಮಗಳೂರು, ಹಾಸನ ಭಾಗಗಳಲ್ಲಿ ಅತ್ಯಂತ ಗಂಭೀರ ಪಿಡುಗಾಗಿರುವ ಆನೆ-ಮಾನವ ಸಂಘರ್ಷದ ಬಗ್ಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ಸದಸ್ಯರು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವರ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಗಮನ ಸೆಳೆದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಅವರ ನೇತೃತ್ವದ ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ, ಕೇಂದ್ರ ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿತು.

ತಮ್ಮ ಸಚಿವಾಲಯಕ್ಕೆ ಸಮಸ್ಯೆ ಕುರಿತು ಸಂಪೂರ್ಣ ಅರಿವಿರುವುದಾಗಿಯೂ ಇದರ ನಿವಾರಣೆಗಾಗಿ ಕೇಂದ್ರ ಸರ್ಕಾರದ ಎಲ್ಲ ರೀತಿಯ ಸಹಕಾರವನ್ನು ನೀಡುವುದಲ್ಲದೇ, ಅಗತ್ಯವಾದ ಆರ್ಥಿಕ ನಿಧಿಯನ್ನು ಕೂಡ ಮೀಸಲಿಟ್ಟಿರುವುದಾಗಿ ತಿಳಿಸಿದರು.

ನಂತರ ಒಕ್ಕೂಟದ ನಿಯೋಗ ಕೇಂದ್ರ ಸರ್ಕಾರದ ಹೆಚ್ಚುವರಿ ಮಹಾನಿರ್ದೇಶಕ ರಮೇಶ್ ಕೆ ಪಾಂಡೆ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಈ ಸಂದರ್ಭದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಈಗಾಗಲೇ ಭಾರತದ ಸುಮಾರು ೮ ರಾಜ್ಯಗಳಲ್ಲಿ ವ್ಯಾಪಿಸಿರುವ ಮಾನವ-ಆನೆ ಸಂಘರ್ಷದ ಕುರಿತು ಮಾಹಿತಿ ಹೊಂದಿರುವುದಾಗಿಯೂ ಈ ಸಮಸ್ಯೆಗೆ ಆದಷ್ಟು ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲು ಸಮಗ್ರವಾದ ಕ್ರಿಯಾಯೋಜನೆ ಸಿದ್ದವಿರುವುದಾಗಿ ತಿಳಿಸಿದರು.

ನಿಯೋಗವು ಕೇಂದ್ರದ ಅರಣ್ಯ ಮತ್ತು ಪರಿಸರ ಸಚಿವಾಲಯದ ಜೊತೆ ನಿಕಟ ಸಂಪರ್ಕದಲ್ಲಿರುವAತೆಯೂ ಮತ್ತು ರಾಜ್ಯ ಸರ್ಕಾರಕ್ಕೆ ಈ ಯೋಜನೆ ಜಾರಿಗೊಳಿಸಲು ಹಣ ಒದಗಿಸಲು ೧೬ನೇ ಯೋಜನೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ ಎಂದೂ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದಿಂದ ಸಿದ್ಧಪಡಿಸಲಾದ ಮಾನವ-ಆನೆ ಸಂಘರ್ಷದ ಕುರಿತಾದ ಸಂಕ್ಷಿಪ್ತ ಸಾರಾಂಶದ ವರದಿಯ ಪ್ರತಿಯನ್ನು ಸಚಿವರಿಗೂ ಹಾಗೂ ಕೇಂದ್ರ ಸರ್ಕಾರದ ಹೆಚ್ಚುವರಿ ಮಹಾನಿರ್ದೇಶಕರಿಗೂ ನೀಡಲಾಯಿತು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ಕೆ.ಕೆ.ವಿಶ್ವನಾಥ್, ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಯು ರತೀಶ್, ಮೂಡಿಗೆರೆ ತಾಲೂಕು ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಡಿ ಮನೋಹರ್ ಹಾಗೂ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಖಜಾಂಚಿ ಎಂ.ಜೆ ಸಚಿನ್ ಇದ್ದರು.

ಬೆಂಗಳೂರಿನಲ್ಲಿ ಸಭೆ

ಮೇ ತಿಂಗಳ ಮೂರನೇ ವಾರದಲ್ಲಿ ರಾಜ್ಯ ಸರ್ಕಾರ, ಬೆಳೆಗಾರರ ಒಕ್ಕೂಟ ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ನಡುವೆ ಸಮನ್ವಯ ಸಭೆ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರದ ಹೆಚ್ಚುವರಿ ಮಹಾನಿರ್ದೇಶಕ ರಮೇಶ್ ಕೆ ಪಾಂಡೆ ತಿಳಿಸಿದರು.

ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಆನೆ-ಮಾನವ ಸಂಘರ್ಷ ನಿವಾರಣೆಗಾಗಿ ಕೇಂದ್ರ ಸರ್ಕಾರ ತನ್ನೆಲ್ಲಾ ಸಹಕಾರ ನೆರವನ್ನು ನೀಡುವುದಾಗಿಯೂ ಅವರು ಭರವಸೆ ನೀಡಿದರು.