ಮಡಿಕೇರಿ, ಡಿ. ೨೬: ಕೇಂದ್ರ ಸರಕಾರದ ಮೈ ಭಾರತ್ , ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟ ಮಡಿಕೇರಿ, ರೋಟರಿ ಮಿಸ್ಟಿಹಿಲ್ಸ್ , ರೋಟರಿ ಇನ್ನರ್ ವೀಲ್, ಲಯನ್ಸ್ ಕ್ಲಬ್ ಮಡಿಕೇರಿ, ರೋಟರಿ ಕ್ಲಬ್ ಆಫ್ ಮಡಿಕೇರಿ ವುಡ್ಸ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕಾರ್ಮಿಕ ಇಲಾಖೆ ಮಡಿಕೇರಿ, ರೋಟರಿ ಸಮುದಾಯದಳ ಮೇಕೇರಿ, ಎಸ್.ಡಿ.ಎಂ.ಸಿ. ಮೇಕೇರಿ ಗ್ರಾಮ ಪಂಚಾಯಿತಿ ಮೇಕೇರಿ, ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರ ಹಾಗೂ ಸ್ವಾಗತ ಯುವಕ ಸಂಘ ಮೇಕೇರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ ಸುಶಾಸನ ದಿನದ ಪ್ರಯುಕ್ತ ೧೪ನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದಲ್ಲಿ ರಕ್ತದಾನದ ಮಹತ್ವದ ಬಗ್ಗೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿದರು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ದೊರೆಯುವ ವಿವಿಧ ಸವಲತ್ತುಗಳ ಬಗ್ಗೆ ಇಲಾಖಾ ಸಿಬ್ಬಂದಿಗಳು ಮಾಹಿತಿ ನೀಡಿದರು. ದೇಶದ ಮಾಜಿ ಪ್ರಧಾನಿಗಳು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಕೇಂದ್ರ ಸರ್ಕಾರ ಸುಶಾಸನ ದಿನ (ಉತ್ತಮ ಆಡಳಿತ ದಿನ)ವೆಂದು ಘೋಷಿಸಿದ್ದು ದೇಶದ ಅಭಿವೃದ್ಧಿಗೆ ವಾಜಪೇಯಿ ಅವರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ಭಾ.ಜ.ಪಾ. ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ ಹೇಳಿದರು.

ಯುವಕ ಸಂಘದ ಚಟುವಟಿಕೆಗಳ ಬಗ್ಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ರವೀಂದ್ರ ರೈ ಹಾಗೂ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಸುಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಬಿರದಲ್ಲಿ ಒಟ್ಟು ೫೯ ಮಂದಿ ರಕ್ತದಾನ ಮಾಡಿದರು. ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ರತ್ನಾಕರ ರೈ, ಲಯನ್ಸ್ ಕ್ಲಬ್ ಅಧ್ಯಕ್ಷ ಮದನ್ ಮುದ್ದಯ್ಯ, ಇನ್ನರ್ ವೀಲ್‌ನ ಲಲಿತಾ ರಾಘವನ್, ಧರ್ಮಸ್ಥಳ ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ನಳಿನಿ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.