ಮಡಿಕೇರಿ, ಡಿ. ೨೪: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಎರಡು ಪ್ರತಿಷ್ಠಿತ ರಾಜ್ಯಮಟ್ಟದ ವಾರ್ಷಿಕ ಪ್ರಶಸ್ತಿಗಳಿಗೆ ಕೊಡಗು ಜಿಲ್ಲೆಯ ಇಬ್ಬರು ಸಾಧಕರು ಆಯ್ಕೆಯಾಗಿದ್ದಾರೆ.
ಕುಶಾಲನಗರದ ಕೃಷಿ ಬೀಜ ತಳಿಗಳ ತಜ್ಞ ಎಂ.ಬಿ. ಅಫ್ತಾಬ್ ಅವರಿಗೆ ರಾಜ್ಯಮಟ್ಟದ ‘ಡಾ. ಹೆಚ್. ನರಸಿಂಹಯ್ಯ' ಪ್ರಶಸ್ತಿ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಅವರು ‘ಚೈತನ್ಯ ಸ್ತಿçÃ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯದಲ್ಲಿ ಜಿಲ್ಲೆಗೊಬ್ಬರಂತೆ ಜೀವಮಾನ ಸಾಧಕರನ್ನು ಗುರುತಿಸಿ ‘ಹೆಚ್.ಎನ್.' ಪ್ರಶಸ್ತಿ ನೀಡಲಾಗುತ್ತಿದ್ದು ಕುಶಾಲನಗರದ ಕೃಷಿ ಬೀಜ ತಳಿ ತಜ್ಞ ಎಂ.ಬಿ. ಅಫ್ತಾಬ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ತಿಳಿಸಿದ್ದಾರೆ.
ರಾಜ್ಯಮಟ್ಟದಲ್ಲಿ ವಿಶಿಷ್ಟ ಸಾಧನೆ ಮಾಡಿದ ಮಹಿಳಾ ಸಾಧಕರಿಗೆ ಸಾಧನಾ ಪ್ರಶಸ್ತಿ ‘ಚೈತನ್ಯ ಸ್ತ್ರೀ' ಪ್ರಶಸ್ತಿ ಕೊಡಗು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಮಟ್ಟದ ೫ನೇ ವೈಜ್ಞಾನಿಕ ಸಮ್ಮೇಳನ ತಾ. ೨೮ ರಿಂದ ಮೂರು ದಿನಗಳ ಕಾಲ ಯಾದಗಿರಿ ಜಿಲ್ಲೆಯಲ್ಲಿ ನಡೆಯಲಿದ್ದು, ತಾ. ೩೦ ರಂದು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು ಎಂದು ಪರಿಷತ್ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ ವನಿತಾ ಚಂದ್ರಮೋಹನ್ ತಿಳಿಸಿದ್ದಾರೆ. ಮೂರು ದಿನಗಳ ಕಾಲ ನಡೆಯಲಿರುವ ಸಮ್ಮೇಳನದಲ್ಲಿ ಚಿಂತನ ಗೋಷ್ಠಿಗಳು, ಸಾಂಸ್ಕೃತಿಕ ವೈಭವ, ವಿಜ್ಞಾನ ವಸ್ತುಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ. ನಾಡಿನ ಮಠಾಧೀಶರುಗಳು, ರಾಜ್ಯ ಸರ್ಕಾರದ ಸಚಿವರು, ಸಂಸದರು, ವಿಜ್ಞಾನಿಗಳು, ಗಣ್ಯ ಚಿಂತಕರು, ಸಾಹಿತಿಗಳು, ಚಲನಚಿತ್ರನಟರು ಸೇರಿದಂತೆ ಪರಿಷತ್ತಿನ ೫ ಸಾವಿರಕ್ಕೂ ಮಿಕ್ಕಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.