ವೀರಾಜಪೇಟೆ, ಡಿ. ೨೨ : ಮೊಗಳ್ಳಿ ಗಣೇಶ್ ಅವರ ಚಿಂತನೆಗಳು ಹಾಗೂ ಬರಹಗಳು ನಮ್ಮನ್ನು ಹೃದಯಕ್ಕೆ ಇಳಿಸುತ್ತವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾ ಪ್ರಸಾದ್ ಅಭಿಪ್ರಾಯಪಟ್ಟರು.

ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಕನ್ನಡ ವಿಭಾಗ, ನುಡಿ ಉತ್ಸವ ಸಮಿತಿ ಕೊಡಗು ಜಿಲ್ಲೆ, ದಸಾಪ ಕೊಡಗು ಜಿಲ್ಲೆ ಸಹಯೋಗದಲ್ಲಿ ನುಡಿ ಸಾಹಿತ್ಯ ಲಹರಿ ಪ್ರಯುಕ್ತ ನಡೆದ ಮೊಗಳ್ಳಿ ಗಣೇಶ್ ಅವರ ಬದುಕು-ಬರಹ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು. ಮೊಗಳ್ಳಿ ಗಣೇಶ್ ಅವರ ಚಿಂತನೆಗಳು ಸಾರ್ವಕಾಲಿಕವಾಗಿವೆ. ಸಾಹಿತ್ಯ ಹಾಗೂ ಬರಹಗಳು ಲೋಕಾಂತವಾಗಬೇಕು. ಸಾಹಿತ್ಯದ ದಾಖಲೀಕರಣವನ್ನು ಮಾಡಬೇಕು. ಮನುಷ್ಯನು ತನ್ನನ್ನು ತಾನು ಪ್ರಶ್ನಿಸುತ್ತಲೆ ಬದುಕಬೇಕು. ಕಥೆ, ಕಾದಂಬರಿಗಳು ವಿಶ್ವಾವ್ಯಾಪಿಯಾಗಬೇಕು. ಕಲಿಕೆ, ಬದುಕು, ಅನುಭವ, ಸುತ್ತಮುತ್ತಲಿನ ಪರಿಸರವು ನಮಗೆ ಪ್ರೇರಣೆಯಾಗಿದೆ. ಹೊಸ ಚಿಂತನೆಗಳು ಮೂಡಿದಾಗ ಮಾತ್ರ ಬರಹಗಳಿಗೆ ಅರ್ಥ ಬರಲು ಸಾಧ್ಯವಾಗುತ್ತದೆ. ಅಂತೆಯೇ ಮೊಗಳ್ಳಿ ಗಣೇಶ್ ಬರಹಗಳು ಓದುಗರನ್ನು ಸೆಳೆಯುವುದರ ಜೊತೆಗೆ ಚಿಂತನಾಶೀಲರನ್ನಾಗಿಸುತ್ತದೆ. ಬದುಕು ಹಾಗೂ ಬರಹಗಳೆರಡು ಬಿಂಬ ಪ್ರತಿಬಿಂಬಗಳಾಗಿದ್ದು, ಚಿಂತನೆಗೆ ಮತ್ತು ಸಾಹಿತ್ಯಕ ಬದಲಾವಣೆಗೆ ಸಾಕ್ಷಿಯಾಗಿದೆ ಎಂದರು. ನುಡಿ ಉತ್ಸವ ಸಮಿತಿ ಅಧ್ಯಕ್ಷ ಅರ್ಜುನ್ ಮೌರ್ಯ ಮಾತನಾಡಿ, ಪ್ರತಿಯೊಬ್ಬರಲ್ಲಿಯು ಸಹನೆ ಹಾಗೂ ತಾಳ್ಮೆಯಿದ್ದರೆ ಜಗತ್ತನ್ನು ಗೆಲ್ಲಬಹುದು. ಮೌಲ್ಯಗಳನ್ನು ಸಮಾಜಕ್ಕೆ ನೀಡಬೇಕು. ಮೌಲ್ಯದಿಂದ ಭಾಷೆ, ಸಾಹಿತ್ಯದ ಬೆಳವಣಿಗೆ ಜೊತೆಗೆ ಸಾಮಾಜಿಕ ಪರಿವರ್ತನೆಗೆ ಸಾಹಿತ್ಯವು ಭದ್ರ ಬುನಾದಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಡಾ.ಕೋರನ ಸರಸ್ವತಿ, ಸಾಹಿತ್ಯದ ರಚನೆಯು ಅನುಭವದಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳು ಸಾಹಿತ್ಯಕ ಕೃತಿಗಳನ್ನು ಓದಬೇಕು. ಓದುವ ಹವ್ಯಾಸದಿಂದ ಸಾಹಿತ್ಯದ ಬಳಕೆ ಹೆಚ್ಚಾಗುತ್ತದೆ. ಓದು, ಬರಹ, ಲೇಖನ ಇವುಗಳು ನಿರಂತರವಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಬಸವರಾಜು, ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಸಂಚಾಲಕರಾದ ಡಾ.ದಯಾನಂದ ಕೆ.ಸಿ., ಉಪನ್ಯಾಸಕರಾದ ಹರಿಣಿ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕನ್ನಡ ನಾಡು, ನುಡಿಯ ಕುರಿತು ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನವನ್ನು ವಿತರಿಸಿದರು. ನುಡಿ ಉತ್ಸವ ಸಮಿತಿ ಸಂಚಾಲಕ ಅಬ್ದುಲ್ ರೆಹಮಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸವನ್ನು ನೀಡಿದ ಡಾ.ರೇಣುಕಾ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.