ಮಡಿಕೇರಿ, ಡಿ. ೧ : ಅಯ್ಯಂಗೇರಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಮತ್ತು ಸಂಸದ ಯದುವೀರ್ ಒಡೆಯರ್ ಅವರು ನೆರವೇರಿಸಿದರು.
ಈ ಹಿಂದೆ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಸ್ವಂತ ಕಟ್ಟಡ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಗಮನಿಸಿದ ಶಾಸಕರು, ನೂತನ ಕಟ್ಟಡಕ್ಕೆ ಮಂಜೂರಾತಿ ಒದಗಿಸಿದ್ದರು. ಸುಸಜ್ಜಿತವಾಗಿ ನಿರ್ಮಾಣಗೊಂಡ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಶಾಸಕರು, ಗ್ರಾಮ ಪಂಚಾಯಿತಿ ಜವಾಬ್ದಾರಿ ಸಂವಿಧಾನದಡಿಯಲ್ಲಿ ಅತ್ಯಂತ ಪ್ರಮುಖವಾಗಿದ್ದು. ಗ್ರಾಮದ ಜನರಿಗೆ ನೇರವಾಗಿ ಸಂಪರ್ಕಕ್ಕೆ ಸಿಗುವ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಸರ್ಕಾರದ ಪ್ರತಿನಿಧಿಗಳಂತೆ ಜನರ ಕಷ್ಟಗಳಿಗೆ ಸ್ಪಂದಿಸಲು ತುಂಬಾ ಅನುಕೂಲಕರವಾಗಿದೆ ಎಂದರು. ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು ಮತ್ತು ಜನಸೇವೆಯ ಉದ್ದೇಶದಿಂದ ಚುನಾವಣೆಗೆ ನಿಲ್ಲಬೇಕೇ ಹೊರತು ಪ್ರತಿಷ್ಠೆಗೆ ಅಲ್ಲ ಎಂದು ಸಲಹೆ ನೀಡಿದರು.
ಈ ಸಂದರ್ಭ ಸಂಸದ ಯದುವೀರ್ ಒಡೆಯರ್ ಮಾತನಾಡಿ, ಗ್ರಾಮ ಪಂಚಾಯಿತಿ ಮೂಲಕ ಗ್ರಾಮೀಣ ಜನರಿಗೆ ಹೆಚ್ಚು ಕೆಲಸಗಳು ಆಗಲಿ, ಈ ನಿಟ್ಟಿನಲ್ಲಿ ಗ್ರಾಮದ ಮೂಲ ಸೌಲಭ್ಯಕ್ಕೆ ಒತ್ತು ನೀಡಬೇಕು ಎಂದು ಸಲಹೆ ಮಾಡಿದರು. ಪಂಚಾಯಿತಿ ಅಧ್ಯಕ್ಷೆ ಪುಷ್ಪ ಮತ್ತು ಉಪಾಧ್ಯಕ್ಷೆ ಮಿಶ್ರಿಯ, ಪಂಚಾಯಿತಿ ಸದಸ್ಯರಾದ ನಾಳಿಯಂಡ ಪಟ್ಟು ಚಂಗಪ್ಪ, ಆಚಿರ ಕಾವೇರಮ್ಮ, ಪ್ರಮುಖರಾದ ಇಸ್ಮಾಯಿಲ್ ಮತ್ತು ರಶೀದ್, ಅಬ್ದುಲ್ ರೆಹಮಾನ್, ಸಾಬಿರ್ ಜಲೀಲ್, ಮಮ್ಮದ್, ಬಷೀರ್, ಸೂರಜ್ ಹೊಸೂರು, ಮಣವಟ್ಟಿರ ದಯಾ ಚಿಣ್ಣಪ್ಪ, ತೋಲಂಡ ನಂದ, ಅಪ್ಪಚೆಟ್ಟೊಳಂಡ ಮಿಥುನ್ ಮಾಚಯ್ಯ ಇತರರು ಇದ್ದರು.