ವೀರಾಜಪೇಟೆ, ನ. ೨೯: ಕಾವೇರಿ ಶಾಲೆಯಲ್ಲಿ ಸಂಸ್ಥಾಪಕರ ದಿನ ಹಾಗೂ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಾಲೆಯ ಸಂಸ್ಥಾಪಕರಾದ ದಿವಂಗತರಾದ ಗುಡ್ಡಂಡ ನಂದಾ ಗಣಪತಿ ಹಾಗೂ ಕಾಂತಿ ಗಣಪತಿಯವರುಗಳ ಭಾವಚಿತ್ರಕ್ಕೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುದೇಶ್ ಬಿ.ಎಸ್., ಕಾರ್ಯದರ್ಶಿ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು., ಸಂಯೋಜಕಿ ಅಮೃತ ಅರ್ಜುನ್ ಪುಷ್ಪನಮನ ಸಲ್ಲಿಸಿ, ವಿದ್ಯಾರ್ಥಿ ತಂಡದ ಮುಖಂಡರುಗಳಿAದ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು. ಮಾತನಾಡಿ, ಶಾಲೆಯ ಸಂಸ್ಥಾಪಕರುಗಳನ್ನು ಸ್ಮರಿಸುತ್ತಾ ಅವರುಗಳಲ್ಲಿ ಇದ್ದಂತಹ ಶಿಸ್ತು, ಸಮಯ ಪ್ರಜ್ಞೆಯ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು.

ನಂತರ ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಸಹ ಶಿಕ್ಷಕಿ ಭಾಗ್ಯ ಕಿರು ಭಾಷಣ ಮಾಡಿದರು. ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಅಲ್ಲದೆ ಶಿಕ್ಷಕರಿಂದ ವಿದ್ಯಾರ್ಥಿಗಳಿಗೋಸ್ಕರ ಹಲವಾರು ಮನರಂಜನ ಕಾರ್ಯಕ್ರಮಗಳನ್ನು ನಡೆಸಿಕೊಡಲಾಯಿತು. ಬಳಿಕ ಮಕ್ಕಳಿಗೆ ಸಿಹಿತಿಂಡಿ ಹಾಗೂ ಮಧ್ಯಾಹ್ನದ ಉಪಹಾರ ನೀಡಲಾಯಿತು. ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳಿಗೋಸ್ಕರ ಉಚಿತ ಕೂಪನ್ ವಿತರಿಸಿ, ಕೊಡುಗೆಗಳನ್ನು ನೀಡಲಾಯಿತು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಮಿಸ್ಬಾ ಫಾತಿಮಾ, ಉಷಾ ತಮಸ್ಸಿನಾ ಸೇರಿದಂತೆ ಬೋಧಕ - ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.