ಮಡಿಕೇರಿ, ನ. ೨: ಕಳೆದ ೬೦ ವರ್ಷಗಳಿಂದ ಸಮಾಜಮುಖಿಯಾಗಿ ನಿರಂತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಡಿಕೇರಿ ಲಯನ್ಸ್ ಸಂಸ್ಥೆ ವಜ್ರ ಮಹೋತ್ಸವ ಸಮಾರಂಭವನ್ನು ಆಚರಿಸಿಕೊಂಡಿತು. ಲಯನ್ಸ್ ಜಿಲ್ಲಾ ರಾಜ್ಯಪಾಲ ಕುಡುಪಿ ಅರವಿಂದ್ ಶೆಣೈ ಅವರು ಅಧಿಕೃತ ಭೇಟಿ ನೀಡಿ ಸಂಸ್ಥೆಯ ಬೆಳವಣಿಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಿಕೇರಿ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ರಾಜ್ಯಪಾಲರು ಲಯನ್ಸ್ ಸಂಸ್ಥೆಯಲ್ಲಿ ಅನುಭವಿಗಳು ಹಾಗೂ ಹಿರಿಯ ಸದಸ್ಯರು ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದು, ಈ ವಯಸ್ಸಿನಲ್ಲೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವೆಂದರು.

ಮಡಿಕೇರಿ ಸೇರಿದಂತೆ ಸುಂಟಿಕೊಪ್ಪ, ಕುಶಾಲನಗರ ಮತ್ತು ಸೋಮವಾರಪೇಟೆ ಲಯನ್ಸ್ ಸಂಸ್ಥೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜಕ್ಕೆ ಮಾದರಿಯಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ಮಾನ

ಸ್ಥಾಪಕ ಕಾರ್ಯದರ್ಶಿ ದಿವಂಗತ ಲಯನ್ ಕೊಡಂದೇರ ಎಂ. ಬೋಪಯ್ಯ ಅವರನ್ನು ಸ್ಮರಿಸುತ್ತಾ ಮರಣೋತ್ತರ ಉಲ್ಲೇಖದೊಂದಿಗೆ ಅವರ ಪುತ್ರಿ ಪಟ್ಟಮಾಡ ಕವಿತಾ ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು. ವಜ್ರ ಮಹೋತ್ಸವದ ಅಂಗವಾಗಿ ಮಡಿಕೇರಿ ಲಯನ್ಸ್ ಸಂಸ್ಥೆಯ ಎಲ್ಲಾ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು,

ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಿ.ಬಿ. ಮದನ್ ಮಾದಯ್ಯ, ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷ ನಾರಾಯಣ್, ಸೋಮವಾರಪೇಟೆ ಲಯನ್ಸ್ ಅಧ್ಯಕ್ಷ ರಾಮಶೆಟ್ಟಿ, ಸುಂಟಿಕೊಪ್ಪ ಲಯನ್ಸ್ ಅಧ್ಯಕ್ಷ ರಕ್ಷಿತ್ ಚೆಟ್ಟಿಮಾಡ, ಮಡಿಕೇರಿ ಸಂಸ್ಥೆಯ ಕಾರ್ಯದರ್ಶಿ ಕೆ. ಮಧುಕರ್, ಖಚಾಂಚಿ ಕೆ.ಕೆ. ದಾಮೋದರ್, ಪ್ರಾಂತೀಯ ಅಧ್ಯಕ್ಷ ಡಾ. ಪಂಚಮ್ ತಿಮ್ಮಯ್ಯ, ಕಾರ್ಯದರ್ಶಿ ಲಯನ್ ಚಂದ್ರೇಗೌಡ, ಹೆಚ್ಚುವರಿ ಕೋಶಾಧಿಕಾರಿ ಲಯನ್ ಬಿ.ಬಿ. ಅಶೋಕ್ ಕುಮಾರ್, ಲಯನ್ಸ್ ಜಿಲ್ಲೆ ೩೧೭ ಡಿ ಇದರ ಉಪರಾಜ್ಯಪಾಲ ಲಯನ್ ಗೋವರ್ಧನ್ ಶೆಟ್ಟಿ, ಜಿಲ್ಲಾ ರಾಯಭಾರಿ ಮೋಹನ್ ದಾಸ್, ಪ್ರಾಂತೀಯ ರಾಯಭಾರಿ ನವೀನ್ ಅಂಬೆಕಲ್ಲು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭ ಅಂಗನವಾಡಿ ಕೇಂದ್ರಕ್ಕೆ ಲಯನ್ಸ್ ವತಿಯಿಂದ ೧೦ ಕುರ್ಚಿಗಳನ್ನು ಉಚಿತವಾಗಿ ನೀಡಲಾಯಿತು.

ಗೀತಾ ಮಧುಕರ್ ಹಾಗೂ ಬಳಗ ಪ್ರಾರ್ಥಿಸಿದರು. ಅಂಜಲಿ ಯಶೋದರ್ ಪೂಜಾರಿ ಜಿಲ್ಲಾ ರಾಜ್ಯಪಾಲರ ಪರಿಚಯ ಮಾಡಿದರು. ಎಂ.ಎ. ನಿರಂಜನ್ ೬೦ ವರ್ಷಗಳ ಲಯನ್ಸ್ ಇತಿಹಾಸವನ್ನು ಸ್ಮರಿಸಿದರು. ಕಾರ್ಯದರ್ಶಿ ಮಧುಕರ್ ಕೆ. ವಂದಿಸಿದರು.