ವೀರಾಜಪೇಟೆ, ಅ. ೨೯: ಪ್ರಜಾಪ್ರಭುತ್ವದ ಮೌಲ್ಯ ಮತ್ತು ನಿಯಮಗಳ ಪ್ರಕಾರ ವೀರಾಜಪೇಟೆಯ ಪಟ್ಟಣ ಪಂಚಾಯಿತಿ (ಪುರಸಭೆ) ಅಧಿಕಾರದ ಅವಧಿ ಮುಗಿದಿದೆ. ಆದರೆ ಪ್ರಸ್ತುತ ಆಡಳಿತದಲ್ಲಿರುವ ಸದಸ್ಯರು ಅಧಿಕಾರ ದಾಹದಿಂದ ಅವಧಿ ವಿಸ್ತರಣೆ ಮಾಡಲು ಹೈಕೋರ್ಟ್ ಮೊರೆ ಹೋಗಿರುವುದು ಹಾಸ್ಯಾಸ್ಪದ ಎಂದು ನಾಗರಿಕ ಸಮಿತಿ ಮತ್ತು ಸಾಮಾಜಿಕ ಕಾರ್ಯಕರ್ತರ ಸಮಿತಿಯ ಸಂಯುಕ್ತ ಸಮಿತಿಯ ಸಂಚಾಲಕ ಡಾ. ಇ.ರಾ. ದುರ್ಗಾಪ್ರಸಾದ್ ಟೀಕಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ೨೦೧೮ರಲ್ಲಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದಿದ್ದು, ೨೦೨೫ರ ಅಕ್ಟೋಬರ್ ಅಂತ್ಯಕ್ಕೆ ಅಧಿಕಾರ ಅವಧಿ ಮುಕ್ತಾಯವಾಗುತ್ತದೆ. ಎರಡು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರಿದ್ದು ವಾರ್ಡ್ಗಳು ಹೆಚ್ಚಾಗಿವೆ. ಐದು ವರ್ಷಗಳ ಅವಧಿಯಲ್ಲಿ ಆರೋಪ ಪ್ರತ್ಯಾರೋಪದಲ್ಲಿ ಮುಳುಗಿ ನಗರ ಅಭಿವೃದ್ಧಿ ಶೂನ್ಯವಾಗಿದೆ. ಪ್ರಸ್ತುತ ಆಡಳಿತ ನಡೆಸುತ್ತಿರುವ ಸದಸ್ಯರು ಅವಧಿ ವಿಸ್ತರಿಸಿ ಎಂದು ನ್ಯಾಯಾಲಯದ ಮೆಟ್ಟಿಲೇರಿರುವುದು ನಿಯಮಕ್ಕೆ ವಿರುದ್ಧವಾಗಿದೆ ಎಂದರು. ಜನಾದೇಶದ ಮೇಲೆ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರಬೇಕು. ಪ್ರಜಾಪ್ರಭುತ್ವದ ನಿಯಮ ಮತ್ತು ಮೌಲ್ಯಗಳಿಗೆ ಗೌರವ ನೀಡದೆ ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ಮುಂದುವರಿಯಬಾರದು. ಚುನಾವಣೆ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುÄವಂತಾಗಬೇಕು. ಸದಸ್ಯರುಗಳ ಈ ನಡೆಯನ್ನು ನಾಗರಿಕರು ಪ್ರಶ್ನಿಸಬೇಕು ಎಂದು ಹೇಳಿದರು.
ಸದಸ್ಯ ಮತ್ತು ವಕೀಲ ಕೆ.ವಿ. ಸುನಿಲ್ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರು ಜನಪರ ಕಾರ್ಯ ಮಾಡಲು ವಿಫಲರಾಗಿದ್ದಾರೆ. ಆಡಳಿತ ಅವಧಿಯಲ್ಲಿ ನಗರ ಅಭಿವೃದ್ಧಿಗೆ ಬಂದಿರುವ ಅನುದಾನ ಹಾಗೂ ಅಭಿವೃದ್ಧಿ ಕಾರ್ಯಗಳ ಪಟ್ಟಿಯನ್ನು ಜನತೆಯ ಮುಂದೆ ಇಟ್ಟಿಲ್ಲ. ಜನತೆಯ ಸಮಸ್ಯೆ ಪರಿಹರಿಸುವಲ್ಲಿ ವಿಫಲರಾಗಿದ್ದಾರೆ. ಪುರಸಭೆಯಾಗಿ ಮೇಲ್ದರ್ಜೆಗೇರಿದಾಗ ಶಾಸಕರು ಸಾಕಷ್ಟು ಅನುದಾನ ತಂದಿದ್ದಾರೆ. ಅನುದಾನ ಬಳಕೆಯ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಇಲ್ಲ. ಪುರಸಭೆಯಾದ ಬಳಿಕ ಪುರಸಭೆಗೆ ಚುನಾವಣೆ ನಡೆಯಬೇಕಾಗಿತ್ತು. ಅಧಿಕಾರಿಗಳ ವರ್ಗ ಚುನಾವಣೆ ನಡೆಸಲು ಮುಂದಾಗಲಿಲ್ಲ ಇದನ್ನು ಸಾರ್ವಜನಿಕರು ಪ್ರಶ್ನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಸದಸ್ಯರು ಪ್ರಜಾಪ್ರಭುತ್ವದ ವಿರುದ್ಧವಾಗಿ ಅಧಿಕಾರ ವಿಸ್ತರಣೆ ಮಾಡಿ ಎಂದು ಕಾನೂನು ಹೋರಾಟಕ್ಕೆ ಮುಂದಾದಲ್ಲಿ ಇದರ ವಿರುದ್ಧವಾಗಿ ಕಾನೂನು ಹೋರಾಟಕ್ಕೆ ಸಮಿತಿ ಮುಂದಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಹ ಸಂಚಾಲಕ ಮಾಳೇಟಿರ ಎಸ್. ಕಾಳಯ್ಯ ಮಾತನಾಡಿ, ಪುರಸಭೆಗೆ ಆಯ್ಕೆಯಾದ ಸದಸ್ಯರ ಅಧಿಕಾರಾವಧಿ ಐದು ವರ್ಷಗಳು. ಅಧಿಕಾರ ಅವಧಿ ಮುಗಿದ ಬಳಿಕ ಅಧಿಕಾರ ತ್ಯಜಿಸಬೇಕು ಎಂದು ಆಗ್ರಹಿಸಿದರು.
ಸದಸ್ಯ ಪಿ.ಕೆ. ಅಬ್ದುಲ್ ರೆಹಮಾನ್ ಮಾತನಾಡಿ, ಅಭಿವೃದ್ಧಿಗೆ ಸಾಕಷ್ಟು ಹಣ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಹಣ ಜನಪರವಾದ ಕೆಲಸಗಳಿಗೆ ಸಮರ್ಪಕವಾಗಿ ಖರ್ಚಾಗಿಲ್ಲ. ತಾವೇ ಮುಂದುವರಿಯಬೇಕೆAದು ಜನರೆದುರು ಹೋಗದೆ ನ್ಯಾಯಾಲಯಕ್ಕೆ ಹೋಗಿರುವುದು ಅತ್ಯಂತ ಜನವಿರೋಧಿ ವರ್ತನೆಯಾಗಿದೆ. ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ ಎಂದರು.
ಗೋಷ್ಠಿಯಲ್ಲಿ ಸದಸ್ಯರುಗಳಾದ ಎನ್.ಕೆ. ಶರೀಫ್ ಮತ್ತು ತಾತಂಡ ದೇವಯ್ಯ ಹಾಜರಿದ್ದರು.