ವೀರಾಜಪೇಟೆ, ಅ. ೨೫ : ಎಲ್ಲೆಂದರಲ್ಲಿ ದಿನನಿತ್ಯ ಕಸ ಬಿಸಾಡುವವರ ಹಾವಳಿ ಹೆಚ್ಚಾಗಿ ಪಟ್ಟಣದ ಅಶುಚಿತ್ವಕ್ಕೆ ಕಾರಣಕರ್ತರಾಗುತ್ತಿರುವವರಿಗೆ ಇದೀಗ ದಂಡದ ಬಿಸಿ ಮುಟ್ಟಿದ್ದಲ್ಲದೆ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಅವರ ವಿಶೇಷ ಮುತುವರ್ಜಿಯಿಂದ ವಿನೂತನ ಕಾರ್ಯಕ್ಕೆ ಕ್ಲೀನ್ ವೀರಾಜಪೇಟೆ ಎಂಬ ಫೇಸ್ಬುಕ್ ಪೇಜ್ ಅನ್ನು ತೆರೆದ ಬೆನ್ನಲ್ಲೇ ಇದೀಗ ನಿಗದಿತ ಐದು ಕಡೆಗಳಲ್ಲಿ ಸಿಸಿ ಕ್ಯಾಮರಾಗಳ ಕಣ್ಗಾವಲು ಇರಿಸಲಾಗಿದೆ.
ಮುಖ್ಯ ರಸ್ತೆಗಳಲ್ಲಿ ಸಿ.ಸಿ ಕ್ಯಾಮರ ಅಳವಡಿಸುವ ಸಂದರ್ಭ ಮಾತನಾಡಿದ ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ವೀರಾಜಪೇಟೆ ನಗರದ ಹಲವೆಡೆ ಕೆಲವು ಜನರು ರಸ್ತೆ ಬದಿ ಕಂಡ ಕಂಡಲ್ಲಿ ಕಸಹಾಕುವುದು ಕಂಡು ಬಂದ ಹಿನ್ನಲೆಯಲ್ಲಿ ಪುರಸಭೆ ವತಿಯಿಂದ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಮೊದಲು ಹೂವಿನ ಕುಂಡ ಇರಿಸಲಾಗಿದ್ದು ಈಗ ಕಸ ಹಾಕುವವರನ್ನು ಗುರುತು ಮಾಡಿ ದÀಂಡ ವಿಧಿಸಬಹುದೆಂದು ಪ್ರಮುಖ ಐದು ಸ್ಥಳಗಳಲ್ಲಿ ಸಿ.ಸಿ.ಕ್ಯಾಮರ ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಕಸ ಸಂಗ್ರಹಿಸಲು ಎರಡು ವಾಹನಗಳಿದ್ದು ಎಲ್ಲಾ ವಾರ್ಡ್ಗಳಲ್ಲಿ ಸಿಬ್ಬಂದಿಗಳು ವಾಹನಗಳಿಂದ ಕಸ ಸಂಗ್ರಹ ಮಾಡುತ್ತಿದ್ದರೂ ಕೆಲವರು ವಾಹನದಲ್ಲಿ ತಂದು ಕ್ಯಾರಿಬ್ಯಾಗ್ ಹಾಗೂ ಗೋಣಿಚೀಲಗಳಿಂದ ರಸ್ತೆ ಬದಿಯಲ್ಲಿ ಕಸ ಸುರಿದು ಹೋಗುತ್ತಿರುವುದರಿಂದ ಮೊದಲು ಕಸದ ತೊಟ್ಟಿಗಳನ್ನು ಇಡುತ್ತಿದ್ದ ಜಾಗವನ್ನು ಸ್ವಚ್ಚ ಗೊಳಿಸಿ ಹೂಕುಂಡ ಇರಿಸಿ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಆದರು ಕಸದ ಹಾವಳಿ ಹೆಚ್ಚುತ್ತಿರುವ ಕಾರಣ ನಗರದ ಪಟ್ಟಣ ಸಹಕಾರ ಬ್ಯಾಂಕ್ ಬಳಿ, ದೊಡ್ಡಟ್ಟಿಚೌಕಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ, ಮಟನ್ ಮಾರ್ಕೆಟ್, ವಿಜಯ ನಗರ ಮುಖ್ಯರಸ್ತೆಯಲ್ಲಿ ಸಿ.ಸಿ ಕ್ಯಾಮರ ಅಳವಡಿಸಲಾಗಿದೆ. ಇದರಿಂದ ಕಸ ಬಿಸಾಕುವ ವ್ಯಕ್ತಿಗಳನ್ನು ಗುರುತು ಮಾಡಿ ದÀಂಡ ವಿಧಿಸಬಹುದು. ಮೊದಲ ಹಂತವಾಗಿ ೧೦೦೦ ರೂ ದಂಡ ವಿಧಿಸಲಾಗುತ್ತಿದೆ. ಮತ್ತೆ ಮುಂದುವರೆದಲ್ಲಿ ಹೆಚ್ಚಿನ ದಂಡ ಹಾಗೂ ಕ್ರಮ ತೆಗೆದುಕೊಳ್ಳಲಾಗುತ್ತದೆ. ವೀರಾಜಪೇಟೆ ಸ್ವಚ್ಛ ನಗರ ಆಗಲು ಜನರ ಸಹಕಾರ ಅಗತ್ಯ. ಪ್ರತಿದಿನ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪೌರಕಾರ್ಮಿಕರು ಪಟ್ಟಣದ ಸ್ವಚ್ಛತೆಗೆ ಶ್ರಮಿಸುತ್ತಾರೆ. ತ್ಯಾಜ್ಯ ವಸ್ತುಗಳನ್ನು ಪಟ್ಟಣದಲ್ಲಿ ಹರಡಿದರೆ ರೋಗ ರುಜಿನಗಳು ಹರಡುತ್ತವೆ. ಇದನ್ನು ಸ್ವಚ್ಛ ಮಾಡುವ ಪೌರಕಾರ್ಮಿಕರ ಆರೋಗ್ಯವು ಹದಗೆಡುತ್ತದೆ. ಅವರು ಕೂಡ ನಮ್ಮಂತೆಯೇ ಎಂದು ಎಲ್ಲರೂ ಅರಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕಸ ಬಿಸಾಕುವುದನ್ನು ಕಂಡಲ್ಲಿ ಪುರಸಭೆ ವತಿಯಿಂದ ಕಸ ಬಿಸಾಕಿದವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು. ಪುರಸಭೆಯ ಪರಿಸರ ಅಭಿಯಂತರರಾದ ರೀತು ಸಿಂಗ್ ಅವರು ಸಿಬ್ಬಂದಿಗಳೊAದಿಗೆ ಪಟ್ಟಣದ ಐದು ಕಡೆಗಳಲ್ಲಿ ಅಧ್ಯಕ್ಷರ ಸೂಚನೆ ಮೇರೆಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಿದ್ದಾರೆ.