ಮಡಿಕೇರಿ, ಆ. ೩೧: ಕುಂಜಿಲ ಕಕ್ಕಬ್ಬೆ ಗ್ರಾಮದಲ್ಲಿ ಡೆಂಗ್ಯೂ, ಇಲಿ ಜ್ವರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಪ್ರತಿಯೊಬ್ಬರೂ ತಮ್ಮ ಮನೆಗಳ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿ ಇಟ್ಟುಕೊಂಡರೆ ಡೆಂಗ್ಯೂ, ಇಲಿ ಜ್ವರ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಎಂದು ಜಿಲ್ಲಾ ಎಂಟಮಾಲಜಿಸ್ಟ್ ಮಂಜುನಾಥ್ ಅವರು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಯಾವುದೇ ಜ್ವರವಿರಲಿ ಹತ್ತಿರದ ಆಸ್ಪತ್ರೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ಪ್ರತಿ ಮನೆಯ ಮುಂದಿನ ಚರಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಮನೆಯ ಒಳಗೆ ಮತ್ತು ಹೊರಗೆ ನೀರು ತುಂಬಿಸುವ ತಾಣಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಮುಚ್ಚಬೇಕು. ಸೊಳ್ಳೆಗಳ ನಿಯಂತ್ರಣಕ್ಕಾಗಿ ಸೊಳ್ಳೆ ನಾಶಕ ಮತ್ತು ಸೊಳ್ಳೆ ಪರದೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಡಿಕೇರಿ ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ. ಶ್ರೀನಾಥ್ ಅವರು ಡೆಂಗ್ಯೂ ಮತ್ತು ಇಲಿ ಜ್ವರ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿ, ಮನೆಯ ಸುತ್ತಮುತ್ತ ಸ್ವಚ್ಛ ಪರಿಸರ, ಶುದ್ಧ ನೀರು ಇರುವಂತೆ ನೋಡಿಕೊಳ್ಳಬೇಕು ಹಾಗೂ ಚರಂಡಿಗಳಲ್ಲಿ ನೀರು ನಿಲ್ಲದಂತೆ ಮತ್ತು ಲಾರ್ವಾ ಉತ್ಪತ್ತಿ ಆಗದಂತೆ ಎಚ್ಚರ ವಹಿಸಬೇಕೆಂದರು.

ಕುಂಜಿಲ ಗ್ರಾಮದಲ್ಲಿ ಮನೆ ಮನೆ ಜ್ವರ ಸಮೀಕ್ಷೆ ನಡೆಸಿ ಜನರಿಗೆ ತಿಳುವಳಿಕೆ ನೀಡಲಾಯಿತು. ರೋಗಗಳು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ವೈ. ಅಶೋಕ ಕುಮಾರ್ ಇವರೊಂದಿಗೆ ಚರ್ಚಿಸಲಾಯಿತು. ಸಮುದಾಯ ಅಧಿಕಾರಿ ಚೈತ್ರ, ಹೇಮಂತ್, ಆಶಾ ಕಾರ್ಯಕರ್ತೆ ಬೇಬಿ ಅವರು ಇದ್ದರು.