ಮಡಿಕೇರಿ, ಜು. ೨: ಕೊಡಗು ಮೂಲದ ನಿವಾಸಿ, ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಅರಣ್ಯ ರಕ್ಷಕರಾಗಿರುವ ಶರತ್ ಅವರ ಹುಡುಕಾಟ ಆರಂಭವಾಗಿ ಆರು ದಿನ ಕಳೆದರೂ ಇದುವರೆಗೂ ಸುಳಿವು ಲಭ್ಯವಾಗಿಲ್ಲ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಾರೆಸ್ಟ್ ಗಾರ್ಡ್ ಶರತ್ ನಿಗೂಢವಾಗಿ ನಾಪತ್ತೆಯಾಗಿ ಆರು ದಿನ ಕಳೆದರೂ ಇನ್ನೂ ಸುಳಿವು ಪತ್ತೆ ಆಗಿಲ್ಲ. ಅರಣ್ಯ ಸಿಬ್ಬಂದಿ ಸೇರಿ ಪೊಲೀಸರು, ಸಖರಾಯಪಟ್ಟಣ ನೀಲಗಿರಿ ಪ್ಲಾಂಟೇಶನ್ ಮತ್ತು ಅರಣ್ಯದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊಡಗಿನ ಕಾಲೂರು ಗ್ರಾಮದ ೩೩ ವರ್ಷದ ಶರತ್, ಸಖರಾಯಪಟ್ಟಣ ಅರಣ್ಯ ವಲಯಕ್ಕೆ ಸುಳ್ಯದಿಂದ ಕಳೆದ ೬ ತಿಂಗಳ ಹಿಂದೆ ವರ್ಗಾವಣೆಗೊಂಡಿದ್ದರು. ಕಳೆದ ಜೂನ್ ೨೪ರಂದು ಸಖರಾಯಪಟ್ಟಣ ಅರಣ್ಯದ ನೀಲಗಿರಿ ಪ್ಲಾಂಟೇಶನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ನಿಗೂಢವಾಗಿ ನಾಪತ್ತೆ ಆಗಿದ್ದರು. ಸಮೀಪದ ಅರಣ್ಯದಲ್ಲಿ ಶರತ್ ಬೈಕ್ ಪತ್ತೆಯಾಗಿತ್ತು, ಬೈಕ್ ಸಿಕ್ಕ ಸ್ಥಳದಿಂದ ಎರಡು ಕಿಮೀ ದೂರದಲ್ಲಿ ಬಟ್ಟೆ ದೊರೆತಿತ್ತು. ಇದರಿಂದ ನಾಪತ್ತೆ ಬಗ್ಗೆ ನೂರಾರು ಅನುಮಾನಗಳು ಮೂಡಿವೆ. ಶರತ್ ನಾಪತ್ತೆ ಸಂಬAಧ ಪೋಷಕರು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಚಿಕ್ಕಮಗಳೂರು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಟಿ. ಬೋರಯ್ಯ ಅವರು ಶರತ್ ಒಬ್ಬನೇ ಸಖರಾಯಪಟ್ಟಣದಲ್ಲಿ ರೂಂ ಮಾಡಿಕೊಂಡಿದ್ದು, ಇವರ ತಾಯಿ ಎನ್.ಆರ್. ಪುರದಲ್ಲಿ ಮನೆ ಮಾಡಿಕೊಂಡು ನೆಲೆಸಿದ್ದಾರೆ. ಇವರ ತಂದೆ ಚಿಕ್ಕಮಗಳೂರು ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿದ್ದು ಅವರು ಮೃತಪಟ್ಟ ನಂತರ ಅನುಕಂಪದ ಆಧಾರದಲ್ಲಿ ಇವರಿಗೆ ನೌಕರಿ ನೀಡಲಾಗಿತ್ತು ಎಂದರು.

ನೀಲಗಿರಿ ಪ್ಲಾಂಟೇಷನ್ ಸುಮಾರು ೫೫೦ ಹೆಕ್ಟೇರ್ ವಿಸ್ತೀರ್ಣವಿದ್ದು ಕಳೆದ ೫ ದಿನ ೩೦ ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ, ೧೦ ಕ್ಕೂ ಹೆಚ್ಚು ಪೊಲೀಸರು ಮತ್ತು ೩೦ ಕ್ಕೂ ಹೆಚ್ಚು ಗ್ರಾಮಸ್ಥರು ಶ್ವಾನದಳದೊಂದಿಗೆ ಡ್ರೋನ್ ಕ್ಯಾಮರಾ ಮೂಲಕ ಹುಡುಕಾಟ ನಡೆಸಿದರೂ ಶರತ್ ಸುಳಿವು ದೊರೆತಿಲ್ಲ.

ಶರತ್ ಮೊಬೈಲ್‌ನಿಂದ ಕೊನೆಯದಾಗಿ ತಾಯಿಗೆ ಕರೆ ಮಾಡಿದ್ದಾರೆ. ಕಳೆದ ಮಂಗಳವಾರ ಸಂಜೆ ಶರತ್‌ನನ್ನು ಅರಣ್ಯ ಇಲಾಖೆಯ ಚಾಲಕ ಕೊನೆಯದಾಗಿ ನೋಡಿದ್ದಾರೆ. ನಂತರ ಇವರು ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಮಂಗಳವಾರದಿAದಲೂ ಪಲ್ಸರ್ ಬೈಕ್ ಅನಾಥವಾಗಿ ನಿಂತಿತ್ತು. ಗುರುವಾರ ಮಧ್ಯಾಹ್ನ ಬೈಕ್ ನಿಂತಿರುವುದು ಮತ್ತೆ ಚಾಲಕನ ಗಮನಕ್ಕೆ ಬಂದಿದೆ. ಆತ ಇದನ್ನು ಅರಣ್ಯ ಸಿಬ್ಬಂದಿಗಳಿಗೆ ಫೋನ್ ಮಾಡಿ ಹೇಳಿದ್ದಾನೆ.

ಅರಣ್ಯ ಅಧಿಕಾರಿಗಳ ಪ್ರಕಾರ ಶರತ್‌ನನ್ನು ಚಿರತೆ ಅಥವಾ ಯಾವುದೇ ಕಾಡು ಪ್ರಾಣಿ ತಿಂದಿರುವ ಸಾಧ್ಯತೆ ಇಲ್ಲ, ಹಾಗೆ ಆಗಿದ್ದರೆ ಶವದ ಕುರುಹಾದರೂ ಇಷ್ಟೊತ್ತಿಗೆ ಸಿಗಬೇಕಿತ್ತು. ಪೊಲೀಸ್ ನಾಯಿಗಳಾದರೂ ಗುರುತಿಸಬೇಕಿತ್ತು. ಈತನು ಬೇರೆಡೆ ತೆರಳಿದ್ದರೆ ಬೈಕ್ ಮತ್ತು ಮೊಬೈಲ್ ಏಕೆ ಬಿಟ್ಟು ಹೋದ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಈತನ ತಾಯಿ ಹಾಗೂ ಕುಟುಂಬಸ್ಥರು ಆತಂಕಗೊAಡಿದ್ದಾರೆ. ಈ ಪ್ರಕರಣದ ಸುತ್ತ ಅನುಮಾನದ ಹುತ್ತ ಆವರಿಸಿದೆ.

- ಕೋವರ್‌ಕೊಲ್ಲಿ ಇಂದ್ರೇಶ್