ಶನಿವಾರಸಂತೆ, ಜೂ. ೨೫: ಸೋಮವಾರಪೇಟೆ ತಾಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶನಿವಾರಸಂತೆ ವಲಯ ಅರಣ್ಯ ಇಲಾಖೆ ಹಾಗೂ ನ್ಯಾಯದಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತ ಆಶ್ರಯದಲ್ಲಿ ಪರಿಸರ ಮಾಹಿತಿ ಹಾಗೂ ಗಿಡ ನಾಟಿ ಕಾರ್ಯಕ್ರಮಕ್ಕೆ ಶಾಲಾ ಆವರಣದಲ್ಲಿ ಚಾಲನೆ ನೀಡಲಾಯಿತು.
ನಂತರ ನಡೆದ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸ್ಮಿತಾ ಮಾತನಾಡಿ, ಮನೆಯ ಹಿತ್ತಲಿನಲ್ಲಿ ಬೆಳೆಯಬಹುದಾದ ಔಷಧೀಯ ಸಸ್ಯಗಳಾದ ತುಳಸಿ, ದೊಡ್ಡಪತ್ರೆ ಇನ್ನಿತರ ಸಸ್ಯಗಳ ಉಪಯೋಗದ ಬಗ್ಗೆ ಮಾಹಿತಿ ನೀಡಿದರು. ಜೊತೆಗೆ ಆಯುಷ್ಪಾತ ಚೂರ್ಣ ತಯಾರಿಸುವ ವಿಧಾನಗಳಾದ ತುಳಸಿ ಎಲೆ ೨ ಭಾಗ, ಶುಂಠಿ ೨ ಭಾಗ, ದಾಲ್ಚಿನ್ನಿ ೨ ಭಾಗ, ಕಾಳುಮೆಣಸು ೧ ಭಾಗ ತೆಗೆದುಕೊಂಡು ಎಲ್ಲವನ್ನು ಮಿಶ್ರಣ ಮಾಡಿ, ಒಣಗಿಸಿ ಪುಡಿ ಮಾಡಿಟ್ಟುಕೊಂಡು ೧ ಚಮಚ ಪುಡಿಯನ್ನು ೧೫೦ ಎಂ.ಎಲ್. ನೀರಿನಲ್ಲಿ ಹಾಕಿ ೭೫ ಎಂ.ಎಲ್. ಬರುವತನಕ ಕುದಿಸಿ ಜೇನುತುಪ್ಪ ಸೇರಿಸಿ ದಿನಕ್ಕೆ ೧ ಚಮಚ ಸೇವಿಸಿದರೆ ಶೀತ-ನೆಗಡಿ-ಕೆಮ್ಮ ಗುಣವಾಗುವುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಎಂದು ಮಾಹಿತಿ ನೀಡಿದರು.
ಶಾಲೆಯ ಮುಖ್ಯಶಿಕ್ಷಕಿ ಲಲಿತಾ ಮಾತನಾಡಿ, ಹಿಂದೆ ಕಾಡಿನಲ್ಲಿ ಸಿಗುತ್ತಿದ್ದ ವೈವಿಧ್ಯಮಯ ಹಣ್ಣುಗಳು ಇಂದು ಕಣ್ಮರೆಯಾಗಿದ್ದು ಪರಿಸರ ನಾಶವನ್ನು ಸೂಚಿಸುತ್ತದೆ. ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ ಮಾತನಾಡಿ, ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಹಿತ್ತಲಿನಲ್ಲಿ ಗಿಡಗಳನ್ನು ನಾಟಿ ಮಾಡಿ ಪರಿಸರ ಸಂರಕ್ಷಿಸಬೇಕು ಎಂದರು.
ನAತರ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳ ಜತೆ ನೆಲ್ಲಿಕಾಯಿ, ಸೀಬೆ, ಹೆಬ್ಬಲಸು, ಪನ್ನೇರಳೆ, ಕಾಡು ಬಾದಾಮಿ ಇತರ ಗಿಡಗಳನ್ನು ನಾಟಿ ಮಾಡಲಾಯಿತು. ಅರಣ್ಯ ಪಾಲಕ ಆನಂದ್, ಅರಣ್ಯ ವೀಕ್ಷಕ ರಮೇಶ್, ಒಕ್ಕೂಟದ ಅಧ್ಯಕ್ಷೆ ಸುನಂದಾ, ವಲಯ ಮೇಲ್ವಿಚಾರಕ ರಾಜಣ್ಣ, ಕೃಷಿ ಮೇಲ್ವಿಚಾರಕ ಹರೀಶ್ ಕುಮಾರ್, ಶಿಕ್ಷಕರಾದ ಮಂಜುಳಾಮಣಿ, ರುಕ್ಮಿಣಿ, ಮಂಜುನಾಥ್, ಸೇವಾ ಪ್ರತಿನಿಧಿಗಳಾದ ಶಾರದಮ್ಮ, ಶಾಂತಿ, ಆಶಾ ಕಾರ್ಯಕರ್ತೆ ಧನಲಕ್ಷಿö್ಮ, ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.
ಸೇವಾ ಪ್ರತಿನಿಧಿ ಶಾರದಮ್ಮ ಸ್ವಾಗತಿಸಿ, ಶಿಕ್ಷಕಿ ಮಂಜುಳಾಮಣಿ ವಂದಿಸಿ, ಶಿಕ್ಷಕ ಮಂಜುನಾಥ್ ನಿರೂಪಿಸಿದರು.