ಗೋಣಿಕೊಪ್ಪಲು, ಜೂ. ೨೫: ಅತ್ಯಧಿಕ ವಾಹನ ಸಾಂದ್ರತೆ ಹೊಂದಿರುವ ದಕ್ಷಿಣ ಕೊಡಗಿನ ಮೂಲಕ ಕೇರಳಕ್ಕೆ ಮತ್ತೊಂದು ಸಂಪರ್ಕ ಕಲ್ಪಿಸುವ ಕುಟ್ಟ - ತೋಲ್ಪಟ್ಟಿ ಅಂತರರಾಜ್ಯ ಹೆದ್ದಾರಿಯನ್ನು ರೂ.೩.೪೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವದು ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮಾಹಿತಿ ನೀಡಿದ್ದಾರೆ.
ಈಗಿರುವ ಗುಂಡಿ ಬಿದ್ದಿರುವ ರಸ್ತೆಯನ್ನು ಸಂಪೂರ್ಣ ಅಗೆದು ನೂತನವಾಗಿ ರಸ್ತೆ ನಿರ್ಮಾಣ ಮಾಡಲಾಗುವದು. ಸಂಪರ್ಕ ರಸ್ತೆ ಮಾರ್ಗ ಸಿಗುವ ಎರಡು ಸೇತುವೆಗಳನ್ನೂ ಅಗಲಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಕೇರಳಕ್ಕೆ ಮಾಕುಟ್ಟ ಮಾರ್ಗ ಕಣ್ಣೂರು ಅಂತರರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಯೂ ಮುಂದಿನ ದಿನಗಳಲ್ಲಿ ಹೈವೇ ಪ್ರಾಧಿಕಾರ ಅಗಲೀಕರಣಗೊಳಿಸಲಿದೆ. ಇದೀಗ ಮೈಸೂರು - ಬಂಡೀಪುರ ಮಾರ್ಗ ರಾತ್ರಿ ೯ ಗಂಟೆಯ ನಂತರ ಕೇರಳಕ್ಕೆ ತೆರಳಲು ನಿಷೇಧ ಹಿನ್ನೆಲೆ ನೂರಾರು ಸಾರಿಗೆ ಬಸ್ಗಳು, ಖಾಸಗಿ ವಾಹನಗಳು ಕುಟ್ಟ ತೋಲ್ಪಟ್ಟಿ ಮಾರ್ಗದ ರಸ್ತೆಯನ್ನು ಅವಲಂಬನೆ ಮಾಡುತ್ತಿರುವುದರಿಂದಾಗಿ ಈ ಭಾಗದ ರಸ್ತೆ ಬೇಗ ಗುಂಡಿ ಬಿದ್ದು ಹಾಳಾಗುತ್ತಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಇದೀಗ ರೂ. ೩ ಕೋಟಿಗೂ ಅಧಿಕ ವೆಚ್ಚದಲ್ಲಿ ರಸ್ತೆ ಪುನರ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಸಾಮಗ್ರಿಗಳನ್ನು ಜಮಾವಣೆ ಮಾಡಲಾಗುತ್ತಿದ್ದು, ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಕುಟ್ಟ ಭಾಗದ ಸಾರ್ವಜನಿಕರು ಉತ್ತಮ ಆಸ್ಪತ್ರೆ ಸೌಲಭ್ಯಕ್ಕಾಗಿ ಮಾನಂದವಾಡಿ ಆಸ್ಪತ್ರೆಯನ್ನು ಆಶ್ರಯಿಸುತ್ತಿದ್ದು, ಕೊಡಗಿನ ಕಾಫಿ, ಕಾಳುಮೆಣಸು ವಹಿವಾಟು ಅಧಿಕವಾಗಿ ವಯನಾಡು ಜಿಲ್ಲೆಯಲ್ಲಿ ನಡೆಯುತ್ತಿದೆ. ಕಾಫಿ ರಪ್ತುದಾರರು ಕೊಡಗಿನ ಕಾಫಿಯನ್ನು ಕೊಚ್ಚೀನ್ನತ್ತ ಕೊಂಡೊಯ್ಯಲು ಅಧಿಕವಾಗಿ ಇದೇ ಮಾರ್ಗ ಅನುಸರಿಸುತ್ತಿದ್ದಾರೆ. ವಯನಾಡು ಜಿಲ್ಲೆಯಲ್ಲಿಯೂ ಸಾಂಪ್ರದಾಯಿಕವಾಗಿ ಕಾಫಿ ಬೆಳೆಯಲಾಗುತ್ತಿದ್ದು, ದಿನನಿತ್ಯ ಸಾವಿರಾರು ವಾಹನಗಳ ಓಡಾಟವಿದೆ.
ಕುಟ್ಟ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವ ಮೂಲಕ ಉತ್ತಮ ವೈದ್ಯಕೀಯ ಸೌಲಭ್ಯ ದೊರೆತಲ್ಲಿ ಈ ಭಾಗದ ಜನರ ಕೇರಳ ಆಸ್ಪತ್ರೆ ಅವಲಂಬನೆಯನ್ನು ತಪ್ಪಿಸಬಹುದು ಎನ್ನಲಾಗಿದೆ. ಕೊಡಗಿನ ಹಲವು ಪ್ರವಾಸಿಗರು ತೋಲ್ಪಟ್ಟಿ ಮಾರ್ಗ ತಿರುನೆಲ್ಲಿ ಮಹಾವಿಷ್ಣು ದೇವಾಲಯ ಹಾಗೂ ಶಬರಿಮಲೆ ಇತ್ಯಾದಿ ದೇವಸ್ಥಾನಗಳಿಗೆ ತೋಲ್ಪಟ್ಟಿ, ಕಾಟಿಕುಳ ಮಾನಂದವಾಡಿ ಮಾರ್ಗವನ್ನೇ ಅನುಸರಿಸುತ್ತಿರುವುದು ಕಂಡುಬAದಿದೆ. ಒಟ್ಟಿನಲ್ಲಿ ಬಹುಪಯೋಗಿ ರಸ್ತೆಯ ಬೇಡಿಕೆ ಮನಗಂಡು ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲಾಗುವದು ಎಂದು ಪೊನ್ನಣ್ಣ ಮಾಹಿತಿ ನೀಡಿದ್ದಾರೆ.
- ಟಿ.ಎಲ್. ಶ್ರೀನಿವಾಸ್