ಮಡಿಕೇರಿ, ಜೂ. ೨೪: ಕೊಡಗು ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ ಚೆಂಬು - ಬಾಲಂಬಿಯಲ್ಲಿ ಸಂಘದ ಸದಸ್ಯರಿಗೆ ಸಿಗುತ್ತಿರುವ ಶೂನ್ಯ ಬಡ್ಡಿ ದರದ ಕೆಸಿಸಿ ಸಾಲದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಯನ್.ಸಿ. ಅನಂತ್ ಊರುಬೈಲು ಅವರು ಕೆಸಿಸಿ ಸಾಲದ ವ್ಯವಸ್ಥೆ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿ, ಸಾಲ ಪಡೆಯಲು ನಿಗದಿಪಡಿಸಿದ ಮಾನದಂಡಗಳು ಮತ್ತು ಅನುಸರಿಸಬೇಕಾದ ನಿಯಮಗಳು ಮತ್ತು ಕೆಸಿಸಿ ಸಾಲ ವಿತರಣೆಯಲ್ಲಿ ಸಂಘದ ಪಾತ್ರದ ಬಗ್ಗೆ ವಿವರಿಸಿದರು. ಕೊಡಗು ಜಿಲ್ಲಾ ಕೇಂದ್ರ ಬ್ಯಾಂಕಿನ ಅಧಿಕಾರಿ ಹರೀಶ್ ಕೆಸಿಸಿ ಸಾಲದಲ್ಲಿ ಕೆಡಿಸಿಸಿ ಬ್ಯಾಂಕಿನ ಪಾತ್ರ ಮತ್ತು ಸಾಲಕ್ಕೆ ಆಧಾರವಾಗಿ ರೈತರು ತಮ್ಮ ಭೂಹಿಡುವಳಿಗಳನ್ನು ಸಾಮಾನ್ಯ ಅಡಮಾನ ಮಾಡುವ ಅನಿವಾರ್ಯತೆ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಆನಂದ, ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ರಮಾದೇವಿ ಕಳಗಿ, ಚೆಂಬು ಗ್ರಾ.ಪಂ. ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ, ಮಾಜಿ ಎಪಿಎಂಸಿ ಅಧ್ಯಕ್ಷ ಸುಬ್ರಮಣ್ಯ ಉಪಾಧ್ಯಾಯ ಮತ್ತು ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.