ಕೂಡಿಗೆ, ಜೂ. ೨೪: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಇದೀಗ ಮಳೆ ತುಸು ಕಡಿಮೆಯಾಗಿರುವ ಹಿನ್ನಲೆಯಲ್ಲಿ ಈ ವ್ಯಾಪ್ತಿಯ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ.

ಕಳೆದ ೨೦ ದಿನಗಳಿಂದ ಸತತವಾಗಿ ಬಿದ್ದ ಮಳೆಯಿಂದಾಗಿ ಅರೆಮಲೆನಾಡು ಪ್ರದೇಶದಲ್ಲಿ ಸಮಗ್ರವಾಗಿ ಕೃಷಿ ಮಾಡಲು ಸಾಧ್ಯವಾಗಲಿಲ್ಲ, ಇದೀಗ ಮಳೆ ಬಿಡುವಿನಿಂದಾಗಿ ಮೆಕ್ಕೆಜೋಳ, ಶುಂಠಿ, ಮತ್ತು ಸಿಹಿ ಗೆಣಸು ಬೇಸಾಯ ಮಾಡಿರುವ ರೈತರು ತಮ್ಮ ತಮ್ಮ ಜಮೀನಿನಲ್ಲಿ ಮೆಕ್ಕೆಜೋಳ, ಶುಂಠಿ ಬೆಳೆಗಳಿಗೆ ಗೊಬ್ಬರ, ಮತ್ತು ಅದರ ಬುಡಕ್ಕೆ ಮಣ್ಣು ಹಾಕುವುದು, ಅಲ್ಲದೇ ಜಮೀನಿನಲ್ಲಿ ಕಳೆ ತಗೆಯುವುದು ಮತ್ತು ಎತ್ತುಗಳ ಮೂಲಕ ಮೆಕ್ಕೆಜೋಳ ಹರತೆ ಹೊಡೆಯುವುದು ಸೇರಿದಂತೆ ಕೃಷಿ ಚಟುವಟಿಕೆಗಳು ಆರಂಭವಾಗಿರುವುದು ಕಂಡುಬರುತ್ತದೆ.

ಅರೆ ಮಲೆನಾಡು ಪ್ರದೇಶವಾಗಿರುವ ಕುಶಾಲನಗರ ತಾಲೂಕಿನ ೮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪೫ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಈಗಾಗಲೇ ಪ್ರಮುಖ ಬೆಳೆಗಳ ಕೃಷಿ ಚಟುವಟಿಕೆ ಆರಂಭವಾಗಿವೆ . ಮಳೆಯು ಅಧಿಕವಾಗುವ ಮೊದಲೇ ಜಮೀನಿನ ಕೆಲಸವನ್ನು ಮುಗಿಸಿ ಬಿಡುವ ಕಾರ್ಯದಲ್ಲಿ ಈ ವ್ಯಾಪ್ತಿಯ ರೈತರು ತೊಡಗಿದ್ದಾರೆ.