ಕೂಡಿಗೆ, ಜೂ. ೧೪: ಮಳೆ ಬಿರುಸುಗೊಂಡು ಹಾರಂಗಿ ಅಣೆಕಟ್ಟು ಭರ್ತಿಗೊಳ್ಳುವ ಹಂತ ತಲುಪಿರುವ ಹಿನ್ನೆಲೆ ಮುಂಜಾಗ್ರತ ಕ್ರಮವಾಗಿ ೪ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣವು ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೀರು ಹರಿಸಲಾಗುತ್ತಿದೆ.
ಜೂನ್ ಎರಡನೇ ವಾರದಲ್ಲಿ ಅಣೆಕಟ್ಟೆಯು ಭರ್ತಿಯಾಗುವ ಹಂತದಲ್ಲಿರುವ ಕಾರಣ ನೀರಾವರಿ ಇಲಾಖೆ ಅಣೆಕಟ್ಟೆ ಮುಖ್ಯ ಕ್ರೆಸ್ಟ್ ಗೇಟ್ಗಳ ಮೂಲಕ ೨ ಸಾವಿರ ಕ್ಯೂಸೆಕ್ಸ್ ಮತ್ತು ವಿದ್ಯುತ್ ಘಟಕದ ಮೂಲಕ ೨ ಸಾವಿರ ಕ್ಯೂಸೆಕ್ಸ್ ಸೇರಿದಂತೆ ಒಟ್ಟು ೪ ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.
ಅಣೆಕಟ್ಟೆಯಲ್ಲಿ ಈಗಾಗಲೇ ೨೮೫೨.೫೬ ಅಡಿ ನೀರು ಸಂಗ್ರಹವಿದ್ದು, ಅಣೆಕಟ್ಟೆಯ ಗರಿಷ್ಠ ಮಟ್ಟ ೨೮೫೯ ಅಡಿ ಆಗಿದೆ. ದಿನಂಪ್ರತಿ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಾಗೂ ಅಣೆಕಟ್ಟೆಗೆ ಒಳ ಹರಿವು ೪ ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿರುವುದರಿಂದ ನೀರನ್ನು ಬಿಡುಗಡೆ ಮಾಡಲಾಗಿದೆ. ಹಿನ್ನೀರು ಅಂಚಿನ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡುವುದರೊಂದಿಗೆ ಅಣೆಕಟ್ಟೆಯ ಸೈರನ್ ಮೂಲಕ ತಿಳುವಳಿಕೆ ನೀಡಿ ನದಿಗೆ ನೀರನ್ನು ಹರಿಸಲಾಗಿದೆ.
ನೀರು ಹರಿಸುವ ಹಿನ್ನೆಲೆಯಲ್ಲಿ ಪ್ರಥಮವಾಗಿ ಸಂಪ್ರದಾಯದAತೆ ಅಣೆಕಟ್ಟೆಯ ಮುಖ್ಯ ನಾಲ್ಕು ಕ್ರೆಸ್ಟ್ ಗೇಟ್ಗಳಿಗೆ ಪೂಜೆ ಸಲ್ಲಿಸಲಾಯಿತು. ೩ ಬಾರಿ ಅಣೆಕಟ್ಟೆಯಿಂದ ಸೈರನ್ ಕೂಗಿಸುವುದರ ನಂತರ ಮುಖ್ಯ ೪ ಗೇಟ್ಗಳ
(ಮೊದಲ ಪುಟದಿಂದ) ಬಟನ್ಗಳನ್ನು ಕಾರ್ಯಪಾಲಕ ಅಭಿಯಂತರ ಐ. ಕೆ. ಪುಟ್ಟಸ್ವಾಮಿ ಒತ್ತುವ ಮೂಲಕ ನದಿಗೆ ನೀರು ಹರಿಬಿಡಲಾಯಿತು. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಅಣೆಕಟ್ಟೆಗೆ ಒಳ ಹರಿವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ನೀರಿನ ಸಾಮರ್ಥ್ಯ ಮತ್ತು ಭದ್ರತಾ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ನೀರನ್ನು ಹರಿಸಲಾಗುತ್ತಿದೆ.
ಕಳೆದ ಒಂದು ವಾರದಿಂದ ವಿದ್ಯುತ್ ಘಟಕದ ಮೂಲಕ ೨ ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸಲಾಗಿತ್ತು. ಮಳೆ ಹೆಚ್ಚಾಗಿ ದಿನಂಪ್ರತಿ ಹೆಚ್ಚು ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಭರ್ತಿಯ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಅಣೆಕಟ್ಟೆಯ ಉಸ್ತುವಾರಿ ಇಂಜಿನಿಯರ್ ಸೌಮ್ಯ ರಾಜ್, ಡಿ.ಡಿ. ಕಿರಣ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು. ಅಣೆಕಟ್ಟೆಯ ಮುಂಭಾಗದ ಸೇತುವೆಯ ಸಮೀಪದಲ್ಲಿ ನೂರಾರು ಪ್ರವಾಸಿಗರು, ಗ್ರಾಮಸ್ಥರು ನೀರು ಹರಿಯುವ ದೃಶ್ಯವನ್ನು ವೀಕ್ಷಣೆ ಮಾಡಲು ಆಗಮಿಸಿದ್ದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ನಿರೀಕ್ಷಕ ವಿಜಯ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. - ಕೆ.ಕೆ. ನಾಗರಾಜಶೆಟ್ಟಿ