ಮಡಿಕೇರಿ, ಜೂ. ೧೪: ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಮೃತ ವ್ಯಕ್ತಿಯ ಅಂತ್ಯಸAಸ್ಕಾರಕ್ಕೆ ಸ್ಮಶಾನವೇ ಇಲ್ಲವಾಗಿದ್ದು, ಈ ಸಮಸ್ಯೆಯ ಪರಿಹಾರಕ್ಕೆ ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸ್ಮಶಾನ ಜಾಗ ಒದಗಿಸುವಂತೆ ಆಗ್ರಹಿಸಿ ತಾ. ೧೬ ರಂದು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಮುಂಭಾಗ ಅಣಕು ಶವಯಾತ್ರೆ ಪ್ರತಿಭಟನೆ ನಡೆಸುವುದಾಗಿ ಸ್ಮಶಾನ ಹೋರಾಟ ಸಮಿತಿ ಸಂಚಾಲಕ ಪಿ.ಆರ್. ಭರತ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೆಲ್ಲಿಹುದಿಕೇರಿಯಲ್ಲಿ ಬಡವರು ಮತ್ತು ಕೂಲಿಕಾರ್ಮಿಕರೇ ಹೆಚ್ಚಾಗಿ ವಾಸವಾಗಿದ್ದಾರೆ. ಆದರೆ ಇವರುಗಳಿಗೆ ಬಹಳಷ್ಟು ವರ್ಷಗಳಿಂದ ವ್ಯವಸ್ಥಿತವಾದ ಸ್ಮಶಾನ ಜಾಗವಿಲ್ಲದೆ ಪರದಾಡುವಂತಾಗಿದೆ.

ಸ್ಮಶಾನ ಹೋರಾಟ ಸಮಿತಿಯ ಹೋರಾಟಗಳ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆ ತಹಶೀಲ್ದಾರರು ಸಭೆ ನಡೆಸಿ ಮೂರು ತಿಂಗಳ ಅವಧಿಯಲ್ಲಿ ಸ್ಮಶಾನ ಜಾಗ ಒದಗಿಸುವುದಾಗಿ ಭರವಸೆ ನೀಡಿದ್ದರು. ಇದೀಗ ಏಳು ತಿಂಗಳು ಕಳೆದಿದ್ದರೂ ಸ್ಮಶಾನ ಜಾಗ ದೊರಕಿಲ್ಲ. ಹೀಗಿದ್ದೂ ಈ ಅವಧಿಯಲ್ಲಿ ತಹಶೀಲ್ದಾರರು ಬೆಟ್ಟದಕಾಡು ಮಾರ್ಗದ ಬಳಿಯ ಸರ್ವೇ ನಂ.೧೭೭ ರಲ್ಲಿ ೧.೦೨ ಎಕರೆ ಜಾಗವನ್ನು ಸ್ಮಶಾನಕ್ಕೆಂದು ಗುರುತಿಸಿದ್ದಾರೆ. ಆದರೆ, ಇದನ್ನು ಸ್ಮಶಾನಕ್ಕೆ ನಿಗದಿಗೊಳಿಸಿ ಆರ್‌ಟಿಸಿ ಮಾಡುವಲ್ಲಿ ನೆಲ್ಲಿಹುದಿಕೇರಿ ವ್ಯಾಪ್ತಿಯ ಭೂ ಮಾಫಿಯಾಗಳು, ರಿಯಲ್ ಎಸ್ಟೇಟ್ ದಂಧೆಗಳು ಅಡ್ಡಗಾಲು ಹಾಕುತ್ತಿವೆ ಎಂದು ಆರೋಪಿಸಿದರು.

ನೆಲ್ಲಿಹುದಿಕೇರಿಯ ಸ.ನಂ.೧೮೩ ರಲ್ಲಿ ೧.೮ ಎಕರೆ ಜಾಗ ಸ್ಮಶಾನಕ್ಕೆಂದು ಮೀಸಲಾಗಿ ಆರ್‌ಟಿಸಿಯಾಗಿದ್ದರೂ ಕೂಡ ಅದು ಒತ್ತುವರಿಯಾಗಿ ಕಾಫಿ ತೋಟವಾಗಿ ಪರಿವರ್ತನೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಮುಂದಿನ ದಿನಗಳಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಸಾವು ಸಂಭವಿಸಿದಾಗ, ಅಂತ್ಯಸAಸ್ಕಾರವನ್ನು ಒತ್ತುವರಿ ಜಾಗದಲ್ಲೇ ನಡೆಸಲಾಗುವುದು. ಈ ಸಂದರ್ಭ ಉಂಟಾಗಬಹುದಾದ ಸಂಘರ್ಷಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೇ ಕಾರಣರಾಗುತ್ತಾರೆ ಎಂದ ಭರತ್, ನೆಲ್ಲಿಹುದಿಕೇರಿಯಲ್ಲಿ ಸ್ಮಶಾನ ಜಾಗಕ್ಕಾಗಿ ಕಾನೂನಾತ್ಮಕ ಹೋರಾಟಕ್ಕೂ ಸ್ಮಶಾನ ಹೋರಾಟ ಸಮಿತಿ ಸಿದ್ಧವಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ನೆಲ್ಲಿಹುದಿಕೇರಿ ಸ್ಮಶಾನ ಹೋರಾಟ ಸಮಿತಿಯ ಪ್ರಮುಖರಾದ ಟಿ.ಟಿ. ಉದಯಕುಮಾರ್, ಎನ್. ನಾರಾಯಣ, ಕೆ.ಜಿ. ರಮೇಶ್, ವಿ.ವಿ. ಪ್ರಭಾಕರ್ ಮತ್ತು ಪಿ.ಜಿ. ಸುರೇಶ್ ಉಪಸ್ಥಿತರಿದ್ದರು.