ಸಿದ್ದಾಪುರ, ಜೂ. ೧೪: ಮನೆ ಕಳೆದುಕೊಂಡ ನದಿ ತೀರದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿ ಕೊಡಬೇಕೆಂದು ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು. ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕರಡಿಗೋಡು ಕಂದಾಯ ಗ್ರಾಮದ ಒಂದರಿAದ ನಾಲ್ಕು ವಾರ್ಡ್ಗಳಿಗೆ ಸೇರಿದ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಗೋಪಾಲ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಶೌಕತ್ ಆಲಿ ೨೦೧೯ರಲ್ಲಿ ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿ ದಡದ ನೂರಾರು ಮನೆಗಳು ನೆಲಸಮಗೊಂಡವು. ಆದರೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಈವರೆಗೂ ಪುನರ್ವಸತಿ ಲಭಿಸದೆ ಸಂಕಷ್ಟದಲ್ಲಿದ್ದಾರೆ ಎಂದು ತಿಳಿಸಿದರು. ಕಂದಾಯ ಇಲಾಖೆಯು ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸುವ ನಿಟ್ಟಿನಲ್ಲಿ ಕೂಡಲೇ ಜಾಗ ಪರಿಶೀಲನೆ ಮಾಡಬೇಕು ಸರ್ಕಾರದ ವತಿಯಿಂದ ಪುನರ್ವಸತಿ ನಿರ್ಮಿಸಿಕೊಡಲು ಪಂಚಾಯಿತಿ ಆಸಕ್ತಿ ವಹಿಸಬೇಕೆಂದು ಕೋರಿದರು. ವಿ.ಕೆ. ಬಶೀರ್ ೨೦೧೯ರಲ್ಲಿ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಈವರೆಗೂ ಸಮರ್ಪಕವಾಗಿ ಪರಿಹಾರ ದೊರತಿಲ್ಲ ಎಂದು ಆರೋಪಿಸಿದರು.
ಗುಹ್ಯ ಗ್ರಾಮದಲ್ಲಿ ಮನೆ ಕಳೆದುಕೊಂಡ ಕೆಲವು ಸಂತ್ರಸ್ತರು ಕಷ್ಟಪಟ್ಟು ಸ್ವಂತ ಜಾಗವನ್ನು ಖರೀದಿಸಿದ್ದು ಅಂತಹ ಕುಟುಂಬ ಗಳಿಗೆ ಮನೆ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಹಣ ನೀಡುವಂತಾಗ ಬೇಕೆಂದು ಒತ್ತಾಯಿಸಿದರು. ಸಿದ್ದಾಪುರ ಪಟ್ಟಣ ನಿವಾಸಿಗಳು ಮಾತನಾಡಿ ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಇರುವ ಬೇಕರಿಗಳನ್ನು ಪಟ್ಟಣ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ ಟ್ಯಾಂಕಿನ ನೈರ್ಮಲ್ಯತೆಯನ್ನು ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು. ಫಯಾಜ್ ಮಾತನಾಡಿ ಸಿದ್ದಾಪುರದ ಮಾರುಕಟ್ಟೆ ಭಾಗದಲ್ಲಿ ರಾತ್ರಿ ಸಮಯದಲ್ಲಿ ಬೀದಿ ದೀಪಗಳು ಇಲ್ಲದೆ ಸಮಸ್ಯೆಯಾಗಿದೆ ಎಂದು ಹೇಳಿದರು.
ಕರಡಿಗೋಡು ಗ್ರಾಮಸ್ಥರು ಮಾತನಾಡಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿಯನ್ನು ತಡೆಗಟ್ಟಬೇಕೆಂದು ಒತ್ತಾಯಿಸಿದ್ದರು. ಈ ಹಿಂದೆ ತಾಲೂಕು ಪಂಚಾಯಿತಿ ವತಿಯಿಂದ ನಮೂನೆ ೯/೧೧ ದಾಖಲಾತಿ ಪಂಚಾಯಿತಿ ಮುಖಾಂತರ ನೀಡಲಾಗುತಿತ್ತು. ಆದರೆ ಇದೀಗ ಮಡಿಕೇರಿಯ ಮೂಡಾ ಕಚೇರಿಯ ಮುಖಾಂತರ ನೀಡಲಾಗುತ್ತಿದ್ದು ಕಚೇರಿಯವರು ಸಮರ್ಪಕವಾಗಿ ದಾಖಲಾತಿಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಶಾಸಕರ ಗಮನಕ್ಕೆ ತರಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಮಾತನಾಡಿ ನದಿ ತೀರದಲ್ಲಿ ವಾಸಿಸುವ ಕುಟುಂಬಗಳ ಪೈಕಿ ಹಲವಾರು ಮಂದಿ ಆ ಭಾಗ ಪ್ರವಾಹ ಪೀಡಿತ ಪ್ರದೇಶವಾಗಿದ್ದರೂ ಕೂಡ ಮತ್ತೆ ಹೊಸ ಮನೆಗಳನ್ನು ನಿರ್ಮಾಣ ಮಾಡುತ್ತಿರುವುದು ಹಾಗೂ ಪರಭಾರೆ ಮಾಡುತ್ತಿರುವ ಕುರಿತು ದೂರುಗಳು ಬಂದಿದ್ದು ಈ ಬಗ್ಗೆ ಎಚ್ಚರ ವಹಿಸಬೇಕೆಂದು ಪಿ.ಡಿ.ಓ. ಎಚ್ಚರಿಕೆ ನೀಡಿದರು.
ಸಿದ್ದಾಪುರ ಚೆಸ್ಕಾಂ ಅಭಿಯಂತರ ಸ್ವರಾಗ್ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿ ವಿದ್ಯುತ್ ಬಿಲ್ ರೂ೬೦ ಲಕ್ಷ ನೀಡಬೇಕಾಗಿದ್ದು ಅದನ್ನು ಪಂಚಾಯಿತಿ ಕೂಡಲೇ ಪಾವತಿಸುವಂತೆ ಮನವಿ ಮಾಡಿದರು. ಆರೋಗ್ಯ ಇಲಾಖೆಯ ಸಿಬ್ಬಂದಿ ಸುನಿತಾ ಮಾತನಾಡಿ ಆರೋಗ್ಯ ಇಲಾಖೆ ವತಿಯಿಂದ ಗ್ರಾಮಸ್ಥರಿಗೆ ವಿವಿಧ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗುತ್ತಿದೆ ಆದರೆ ಸಾರ್ವಜನಿಕರ ಕೊರತೆ ಕಂಡು ಬರುತ್ತಿದೆ ಎಂದು ಹೇಳಿದರು. ಕೃಷಿ ಇಲಾಖೆಯ ಸಿಬ್ಬಂದಿ ಮೇಘ ಮಾತನಾಡಿ ಕೃಷಿ ಇಲಾಖೆಯಿಂದ ರೈತರಿಗೆ ಹಾಗೂ ಕೃಷಿಕರಿಗೆ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಕಸ ಸುರಿಯದಂತೆ ಎಚ್ಚರಿಕೆ
ವ್ಯಕ್ತಿಯೊಬ್ಬರು ತಮ್ಮ ವಾಹನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಸ ತಂದು ಸುರಿದಿರುವ ದೃಶ್ಯ ಪಂಚಾಯಿತಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸಭೆಗೆ ಕಸ ಸುರಿದ ವ್ಯಕ್ತಿ ಆಗಮಿಸಿದಾಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಕಸ ಸುರಿದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಕಸ ಸುರಿದ ವ್ಯಕ್ತಿ ಹಾಗೂ ಪಿಡಿಒ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದು ಸಭೆಯಲ್ಲಿ ಗೊಂದಲ ಏರ್ಪಟ್ಟಿತು. ಸಾರ್ವಜನಿಕ ಸ್ಥಳದಲ್ಲಿ ಕಸ ತ್ಯಾಜ್ಯಗಳನ್ನು ಸುರಿದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಭಿವೃದ್ಧಿ ಅಧಿಕಾರಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಳನಿ ಸ್ವಾಮಿ ಹಾಗೂ ಕಾರ್ಯದರ್ಶಿ ಮೋಹನ್. ಮತ್ತು ನೋಡಲ್ ಅಧಿಕಾರಿ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರುಗಳು ಹಾಜರಿದ್ದರು.