ನಾಪೋಕ್ಲು, ಜೂ. ೧೪: ಕೃಷಿಕ ಜೀವನ ಮತ್ತು ಔದ್ಯಮಿಕ ಕ್ಷೇತ್ರದ ಸಾಧನೆಯಷ್ಟೆ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆ ಕೂಡ ಬಾಳಿನ ನೆಮ್ಮದಿಗೆ ಅವಶ್ಯ ಎಂದು ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅವರು ನುಡಿದರು.

ಚೇರಂಬಾಣೆ ಗೌಡ ಸಮಾಜ ಮತ್ತು ಗೌಡ ಮಹಿಳಾ ಒಕ್ಕೂಟದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕೊಡಗು ವಿಭಿನ್ನ ಸಂಸ್ಕೃತಿ ಸಂಪ್ರದಾಯ ಉಳ್ಳ ಬಹು ಭಾಷಿಕರ ನೆಲೆವೀಡು. ದೇಶಕ್ಕೆ ಕೀರ್ತಿ ತಂದುಕೊಟ್ಟ ಸೈನಿಕರ ಕ್ರೀಡಾಳುಗಳ ತವರು. ಈ ಎಲ್ಲ ಕ್ಷೇತ್ರಗಳ ಸಾಧನೆಯೊಂದಿಗೆ ಅರೆಭಾಷಿಕ ಜನಾಂಗ ಇತ್ತೀಚಿನ ದಿನಗಳಲ್ಲಿ ಸಂಗೀತ, ನೃತ್ಯ, ನಾಟಕ, ಭರತನಾಟ್ಯ ಹೀಗೆ ಲಲಿತಕಲೆಗಳು ಮತ್ತು ಸಾಹಿತ್ಯದ ವಿವಿಧ ಸಾಧನಾ ಪಥಗಳಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವುದು ಆಶಾದಾಯಕ ಬೆಳವಣಿಗೆ. ಇದು ಜನಾಂಗದ ಸರ್ವಾಂಗೀಣ ಪ್ರಗತಿಯ ಪ್ರತೀಕ ಎಂದು ಸಂಪಾಜೆ ನುಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಕೂಡಕಂಡಿ ಎಂ.ನAಜುAಡ ಅವರು, ಯಾವುದೇ ಸಮುದಾಯದ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ಮುಖ್ಯವಾದುದು. ಅರೆಭಾಷಿಕ ಜನಾಂಗ ತಮ್ಮ ಸರ್ವಾಂಗೀಣ ಏಳಿಗೆಯತ್ತ ಇನ್ನಷ್ಟು ಗಮನಹರಿಸಬೇಕು. ರೇಡಿಯೋ ಕಾರ್ಯಕ್ರಮಗಳು ಮನೆ ಮನೆ ತಲುಪಿವೆ. ಈ ಕೆಲಸ ಇನ್ನಷ್ಟು ಚುರುಕಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೇರಂಬಾಣೆ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ (ಗಪ್ಪು) ಅವರು ಮೊದಲ ದಿನಗಳಲ್ಲಿ ಸೋಬಾನೆಗೆ ಸೀಮಿತ ವಾಗಿದ್ದ ರೇಡಿಯೋ ಕಾರ್ಯಕ್ರಮಗಳು ಜನಾಂಗದ ಜನತೆ ಜಾಗೃತರಾದ ಕಾರಣ ವೈವಿಧ್ಯತೆಯನ್ನು ಪಡೆದು ಕೊಂಡಿತು. ನಾಟಕ ರೂಪಕಗಳು ಅರೆಭಾಷೆಯಲ್ಲಿ ಪ್ರಸಾರವಾಗಿ ಜನಾಂಗದ ಜನತೆ ಹೆಮ್ಮೆಪಡುವಂತಾಯಿತು. ಈ ನಿಟ್ಟಿನಲ್ಲಿ ಮಹಿಳೆಯರ ಸಾಧನೆ ಮತ್ತು ಕೊಡುಗೆ ಹಿರಿದಾದುದು. ಜನಾಂಗದ ಗೌರವವನ್ನು ಎತ್ತರಿಸಿದ ಹಿರಿಮೆ ಮಹಿಳೆಯರಿಗೆ ಸೇರುತ್ತದೆ ಎಂದರು.

ಇದಕ್ಕೂ ಮೊದಲು ಪೂರ್ಣಕುಂಭ ಸ್ವಾಗತ ನೀಡಿ ಸಾಂಪ್ರದಾಯಿಕವಾಗಿ ಸುಬ್ರಾಯ ಸಂಪಾಜೆ ದಂಪತಿಯನ್ನು ಬರಮಾಡಿಕೊಂಡು ಸಮುದಾಯದ ವತಿಯಿಂದ ಬಾನುಲಿ ಸೇವೆಗಾಗಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಒಕ್ಕೂಟದ ಸದಸ್ಯರಿಂದ ಸೋಬಾನೆ ಪದ, ಕವನವಾಚನ, ಗೀತ ಗಾಯನ ಕಾರ್ಯಕ್ರಮಗಳು ನಡೆಯಿತು. ವೇದಿಕೆಯಲ್ಲಿ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಚೇರಂಬಾಣೆ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್ ಅವರು ಉಪಸ್ಥಿತರಿದ್ದರು.

ಬೈಮನ ಜ್ಯೋತಿ ತಿಮ್ಮಯ್ಯ ಪ್ರಾರ್ಥಿಸಿ ಬೆಳ್ಯನ ಚಂದ್ರಪ್ರಕಾಶ್ ಸ್ವಾಗತಿಸಿದರು. ಕೇಕಡ ಪೂಜಾ ನಾಗೇಂದ್ರ ಕಾರ್ಯಕ್ರಮ ನಿರೂಪಿಸಿ, ಅಣ್ಣೆಚ್ಚಿ ಬೋಜಮ್ಮ ಕುಶಾಲಪ್ಪ ವಂದಿಸಿದರು.