ಮುಳ್ಳೂರು, ಜೂ. ೪: ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಮುಳ್ಳೂರು ಸರಕಾರಿ ಶಾಲೆಯಲ್ಲಿ ಅರ್ಥಪೂರ್ಣ ಮತ್ತು ವಿಶಿಷ್ಟವಾಗಿ ನೆರವೇರಿಸಲಾಯಿತು.
ಕ್ರಿಯಾಶೀಲ ಮತ್ತು ರಾಜ್ಯ ಮತ್ತು ರಾಷ್ಟç ಪ್ರಶಸ್ತಿ ವಿಜೇತ ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಅವರ ವಿನೂತನ ಪರಿಕಲ್ಪನೆಯಲ್ಲಿ ಶಾಲಾ ಪ್ರಾರಂಭೋತ್ಸವನ್ನು ನೆರವೇರಿಸಲಾಯಿತು. ಶಾಲಾ ಪ್ರಾರಂಭೋತ್ಸವ ದಿನ ಬೆಳಿಗ್ಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವಾಗ ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಸ್ಪಾರ್ಕ್ಸ್ ಲೈಟ್ ಹೊತ್ತಿಸಿ ಅದ್ದೂರಿಯಾಗಿ ಸ್ವಾಗತಿಸಿದರು. ವಿಶೇಷವಾಗಿ ಅಡ್ವೆಂಚರ್ ಸ್ಪೋರ್ಟ್ಸ್ನಲ್ಲಿ ಒಂದಾದ ಝಿಪ್ಲೈನ್ ರೋಪ್ ಮೂಲಕ ವಿದ್ಯಾರ್ಥಿಗಳನ್ನು ಶಾಲಾ ತರಗತಿ ಕೊಠಡಿಗೆ ಬಂದಿಳಿದರು. ಸುಮಾರು ೨೦ ಅಡಿಯಷ್ಟು ಎತ್ತರದ ಝಿಪ್ಲೈನ್ ರೋಪ್ನಲ್ಲಿ ಸ್ವಲ್ಪವೂ ಹೆದರದ ವಿದ್ಯಾರ್ಥಿಗಳು ನೂರು ಅಡಿ ದೂರದವರೆಗೆ ಸಾಹಸಮಯವಾಗಿ ಕ್ರಮಿಸಿದರು. ವಿದ್ಯಾರ್ಥಿಗಳಲ್ಲಿ ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಶಾಲಾ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಝಿಪ್ಲೈನ್ ರೋಪ್ ವ್ಯವಸ್ಥೆ ಮಾಡಿದ್ದರು ಮತ್ತು ವಿದ್ಯಾರ್ಥಿಗಳಿಗೆ ಸುರಕ್ಷತೆ ಬೆಲ್ಟ್ ಬಳಸಿದ್ದರು.
ಶಾಲೆಗಳಲ್ಲಿ ಸಾಹಸಮಯ ಕ್ರೀಡೆಗಳಲ್ಲಿ ಭಾಗವಹಿಸಿದ್ದರೆ ಮುಂದೆ ವಿದ್ಯಾರ್ಥಿಗಳು ಸೈನ್ಯಕ್ಕೆ ಸೇರಲು ನೆರವಾಗುತ್ತದೆ, ಈ ಹಿನ್ನೆಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಸಾಹಸಮಯವಾಗಿ ನೆರವೇರಿಸಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕ ಸಿ.ಎಸ್. ಸತೀಶ್ ಹೇಳಿದರು. ಶಾಲಾ ಪ್ರಾರಂಭೋತ್ಸವ ದಿನದ ಪ್ರಯುಕ್ತ ವಿವಿಧ ಬೌದ್ದಿಕ ಬೆಳವಣಿಗೆಗೆ ಪೂರಕವಾದ ಚಟುವಟಿಕೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕ ಜಾನ್ ಪಾವ್ಲ್ ಡಿಸೋಜ ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.