ವೀರಾಜಪೇಟೆ, ಜೂ. ೪: ಪಟ್ಟಣದ ನಿಸರ್ಗ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ದೈವಜ್ಞ ಸಮಾಜದ ನೂತನ ಕಟ್ಟಡದ ಉದ್ಘಾಟನೆಯನ್ನು ತಾ. ೮ ರಂದು ಶ್ರೀ ಕರ್ಕಿ ಕ್ಷೇತ್ರದ ದೈವಜ್ಞ ಬ್ರಾಹ್ಮಣರ ಮಠದ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿ ನೆರವೇರಿಸಲಿದ್ದಾರೆ ಎಂದು ದೈವಜ್ಞ ಸಮಾಜದ ವೀರಾಜಪೇಟೆ ಅಧ್ಯಕ್ಷ ಉಲ್ಲಾಸ್ ಸಿ. ಶೇಟ್ ತಿಳಿಸಿದ್ದಾರೆ.

ವೀರಾಜಪೇಟೆಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನೇಕ ವರ್ಷಗಳಿಂದ ನಮ್ಮ ಹಿರಿಯರು ಸಮಾಜ ಬಾಂಧವರು ನಿರೀಕ್ಷಿಸುತ್ತಿದ್ದ ಸಭಾಭವನ ಲೋಕಾರ್ಪಣೆ ಮಾಡುವ ಅವಕಾಶ ಒದಗಿ ಬಂದಿದೆ. ತಾ. ೭ ರಂದು ದೇವತಾ ಕಾರ್ಯ ಶ್ರೀ ಗಣಪತಿ ಪೂಜೆ, ವಾಸ್ತು ರಾಕ್ಷೆÆÃಘ್ನ ಹೋಮ, ನವಗ್ರಹ ಹೋಮ ನಡೆಯಲಿದೆ. ತಾ. ೮ ರಂದು ಬೆಳಿಗ್ಗೆ ೯.೩೦ಕ್ಕೆ ಪರಮ ಸಚ್ಚಿದಾನಂದ ಜ್ಞಾನಶ್ರೀ ಭಾರತಿ ಮಹಾಸ್ವಾಮಿಗಳಿಗೆ ಮುಖ್ಯ ರಸ್ತೆಯಿಂದ ಪೂರ್ಣ ಕುಂಭದೊAದಿಗೆ ಸ್ವಾಗತ ಕೋರಲಾಗುವುದು. ನಂತರ ದೈವಜ್ಞ ಸಮಾಜದ ಕಟ್ಟಡ ಉದ್ಘಾಟನೆ ಬಳಿಕ ಸತ್ಯನಾರಾಯಣ ಪೂಜೆ ಪ್ರಸಾದ ವಿತರಣೆ ನಡೆಯಲಿದೆ ಎಂದರು.

ದೈವಜ್ಞ ಸಮಾಜದ ಆಡಳಿತ ಮಂಡಳಿಯ ಖಜಾಂಚಿ ರಾಜೇಶ್ ಆರ್. ಶೇಟ್ ಮಾತನಾಡಿ, ಅಪರಾಹ್ನ ೩ ಗಂಟೆಗೆ ಸಮಾಜದ ಅಧ್ಯಕ್ಷ ಉಲ್ಲಾಸ್ ಸಿ. ಶೇಟ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಮಹಾಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಸ್ಥಳೀಯ ವಾರ್ಡ್ ಸದಸ್ಯೆ ಅನಿತಾ ಕುಮಾರ, ಅಖಿಲ ಕರ್ನಾಟಕ ದೈವಜ್ಞ ಸಮಾಜ ಧಾರವಾಡದ ರವಿ ಎಸ್. ಗಾಂವ್ಕರ್ ಮತ್ತು ಶಿವಮೊಗ್ಗದ ದೈವಜ್ಞ ಮಹಿಳಾ ಸಮಾಜದ ವಿನಯ ಆರ್. ರಾಯ್ಕರ್, ಮಂಗಳೂರು ದೈವಜ್ಞ ಸೌರಭ ಪತ್ರಿಕೆ ಸಂಪಾದಕ ಪ್ರಶಾಂತ್ ಅವರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ದೈವಜ್ಞ ಸಮಾಜದ ಆಡಳಿತ ಮಂಡಳಿ ಕಾರ್ಯದರ್ಶಿ ಬಿ.ಎಸ್. ಬಾಲಕೃಷ್ಣ ಮಾತನಾಡಿ, ಸಮಾಜ ಬಾಂಧವರು ಮತ್ತು ದಾನಿಗಳ ಸಹಕಾರದಿಂದ ಕಟ್ಟಡ ಉದ್ಘಾಟನೆಗೊಳ್ಳುತ್ತಿದೆ. ಕಟ್ಟಡದ ಇತರೆ ಕೆಲಸಗಳಿಗಾಗಿ ಸರಕಾರದ ಅನುದಾನದ ನಿರೀಕ್ಷೆಯಲ್ಲಿದ್ದೇವೆ ಎಂದರು.